ಭಾರತದಲ್ಲಿ ಒಂದೇ ದಿನ 227 ಕೊರೊನಾ ಸೋಂಕಿತ ಪ್ರಕರಣಗಳು ದಾಖಲು
ನವದೆಹಲಿ, ಮಾರ್ಚ್ 31: ಭಾರತದಲ್ಲಿ ಒಂದೇ ದಿನ 227 ಮಂದಿಗೆ ಕೊರೊನಾ ಸೋಂಕಿತ ಹೊಸ ಪ್ರಕರಣಗಳು ದಾಖಲಾಗಿವೆ.
ಮಾರಕ ಕೊರೊನಾ ಸೋಂಕು ಸೋಮವಾರ ದೇಶದ ವಿವಿಧ ರಾಜ್ಯಗಳ 12 ಜನರನ್ನು ಬಲಿ ಪಡೆದಿದೆ.ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕು ಮತ್ತು ಸಾವು ಘಟಿಸಿದ್ದು ಇದೇ ಮೊದಲು.
ಕೊರೊನಾ: ದೆಹಲಿಯಲ್ಲಿ ಮಸೀದಿಗೆ ತೆರಳಿದ್ದ ತೆಲಂಗಾಣದ 6 ಮಂದಿ ಸಾವು
ಹೀಗಾಗಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಹೊಸ ಸೋಂಕಿನ ಪ್ರಮಾಣ ಈ ಮಟ್ಟದಲ್ಲಿದೆ.ಇಲ್ಲವಾದಲ್ಲಿ ಆ ಪ್ರಮಾಣ ಇನ್ನೂ ಭಾರಿ ಏರಿಕೆ ಕಾಣುವ ಸಾಧ್ಯತೆ ಇತ್ತು.
12 ಬಲಿ: ದೆಹಲಿಯ ನಿಜಾಮುದ್ದೀನ್ ಪ್ರದೇಶದ ಅಲೇಮಿ ಮರ್ಕಜ್ ಬಂಗ್ಲೇವಾಲಿ ಮಸೀದಿಯಲ್ಲಿ ಮಾರ್ಚ್ 13-15ರವರೆಗೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.
ಅಲ್ಲಿಗೆ ಹೋಗಿ ಬಂದಿದ್ದ ತೆಲಂಗಾಣದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಸರ್ಕಾರ ಘೋಷಿಸಿದೆ.ಇದರ ಜೊತೆಗೆ ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಪಂಜಾಬ್ನಲ್ಲಿ ಕೊರೊನಾಕ್ಕೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಇತ್ತೇಚೆಗೆ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿ ಸಾವನ್ನಪ್ಪಿದ್ದ ಇಬ್ಬರು ಕೊರೊನಾದಿಂದಾಗಿಯೇ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಲಾಗಿದೆ.
227 ಹೊಸ ಪ್ರಕರಣಗಳು: ಈ ನಡುವೆ ಸೋಮವಾರ 227ಕ್ಕೂ ಹೆಚ್ಚು ಹೊಸ ಸೋಂಕಿತರ ಪ್ರಕರಣ ಬೆಳಕಿಗೆ ಬಂದಿದೆ. ಈ ಪೈಕಿ ಹೆಚ್ಚೆಂದರೆ ಮಹಾರಾಷ್ಟ್ರ 50, ಕೇರಳ 32, ದೆಹಲಿ 25, ಉತ್ತರ ಪ್ರದೇಶ 24, ತೆಲಂಗಾಣ 11, ಜಮ್ಮು ಮತ್ತು ಕಾಶ್ಮೀರ 11, ಕರ್ನಾಟಕದಲ್ಲಿ 7 ಪ್ರಕರಣಗಳು ಬೆಳಕಿಗೆ ಬಂದಿವೆ.