ಅಫ್ಘಾನ್ಗೆ ಆಹಾರ, ವೈದ್ಯಕೀಯ ನೆರವಿಗೆ ಮುಂದಾದ ಭಾರತ?
ನವದೆಹಲಿ, ಅಕ್ಟೋಬರ್ 19: ಭಾರತವು ಅಫ್ಘಾನಿಸ್ತಾನಕ್ಕೆ ವೈದ್ಯಕೀಯ ನೆರವು ಹಾಗೂ ಆಹಾರವನ್ನು ರಫ್ತು ಮಾಡಲು ಮುಂದಾಗಿದೆ ಎಂದು ವರದಿ ಹೇಳಿದೆ. ಅಫ್ಘಾನಿಸ್ತಾನವನ್ನು ಪ್ರಸ್ತುತ ತಾಲಿಬಾನ್ ತನ್ನ ವಶದಲ್ಲಿ ಇರಿಸಿಕೊಂಡಿದ್ದು, ತನ್ನದೇ ಸರ್ಕಾರವನ್ನು ರಚಿಸಿಕೊಂಡಿದೆ.
ಆದರೆ ಈ ಚಳಿಗಾಲದ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಭಾರೀ ಕ್ಷಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ವರದಿ ಇದೆ. ಈ ಹಿನ್ನೆಲೆ ಮಾನವೀಯ ನೆಲಗಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಆಹಾರ ಹಾಗೂ ವೈದ್ಯಕೀಯ ನೆರವು ನೀಡಲು ಭಾರತ ಮುಂದಾಗಿದೆ.
'ಅಫ್ಘಾನ್ ಭಯೋತ್ಪಾದನಾ ಕೇಂದ್ರವಾಗದಂತೆ ತಡೆಯಬೇಕು': ಜಿ20 ಶೃಂಗಸಭೆಯಲ್ಲಿ ಮೋದಿ
ಭಾರತವು ಸುಮಾರು 50,000 ಮೆಟ್ರಿಕ್ ಟನ್ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡಲು ಮುಂದಾಗಿದೆ. ಹಾಗೆಯೇ ವೈದ್ಯಕೀಯ ನೆರವನ್ನು ಕೂಡಾ ಅಫ್ಘಾನಿಸ್ತಾನಕ್ಕೆ ಭಾರತ ನೀಡಲಿದೆ ಎಂದು ವರದಿಯು ಉಲ್ಲೇಖಿಸಿದೆ.
ಅತ್ತಾರಿ-ವಾಘಾ ಗಡಿಯ ಮೂಲಕ ಭಾರತವು ಅಫ್ಘಾನಿಸ್ತಾನಕ್ಕೆ ಈ ಉತ್ಪನ್ನಗಳನ್ನು ರಫ್ತು ಮಾಡುವ ಸಾಧ್ಯತೆ ಇದೆ. ಆದರೆ ಈ ಗಡಿಯಿಂದ ಅಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಯಾವುದೇ ರಫ್ತು, ಆಮದು ಪ್ರಕ್ರಿಯೆ ನಡೆಯಬೇಕಾದರೆ ಪಾಕಿಸ್ತಾನದ ಅನುಮೋದನೆಯೂ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿದೆ.
ಈ ಹಿಂದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಫ್ಘಾನಿಸ್ತಾನದ ನಾಗರಿಕರಿಗೆ "ತುರ್ತು ಮತ್ತು ಅಡೆತಡೆಯಿಲ್ಲದ" ಮಾನವೀಯ ನೆರವು ನೀಡುವಂತೆ ಕರೆ ನೀಡಿದ್ದರು. ಅಫ್ಘಾನಿಸ್ತಾನದ ವಿಚಾರದಲ್ಲಿ ಜಿ20 ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಅಫ್ಘಾನಿಸ್ತಾನದ ಜನರಿಗೆ ಭಾರತದ ಬಗ್ಗೆ ಉತ್ತಮ ಭಾವನೆ ಇದೆ. ಅಫ್ಘಾನ್ ಜನರಿಗೆ ಭಾರತದೊಂದಿಗೆ ಉತ್ತಮ ಸ್ನೇಹವಿದೆ. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನವು ಹಸಿವಿನಿಂದ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವ ಹಿನ್ನೆಲೆ ಭಾರತದ ಎಲ್ಲಾ ಜನರಿಗೆ ನೋವುಂಟಾಗಿದೆ," ಎಂದು ಹೇಳಿದ್ದರು.
ಈ ನಡುವೆ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ಪಿ) ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ನೀಡಲು ಭಾರತದೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಬ್ಲ್ಯೂಎಫ್ಪಿ ಅಫ್ಘಾನಿಸ್ತಾನದ ಪ್ರತಿನಿಧಿ ಮತ್ತು ದೇಶದ ನಿರ್ದೇಶಕಿ ಮೇರಿ-ಎಲ್ಲೆನ್ ಮ್ಯಾಕ್ ಗ್ರೊರ್ಟಿ, "ಅಫ್ಘಾನಿಸ್ತಾನದ ಜನರಿಗೆ ನೆರವು ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ನಾವು ಉತ್ತಮ ಅಂತ್ಯವನ್ನು ಹಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬಿದ್ದೇನೆ. ಅಫ್ಘಾನಿಸ್ತಾನದಲ್ಲಿ ಈ ವರ್ಷ 2.5 ಮಿಲಿಯನ್ ಟನ್ ಗೋಧಿ ಕೊರತೆಯಿದೆ. ಈ ನಿಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಗೋಧಿ ದಾನ ಮಾಡುವ ಅಗತ್ಯವಿದೆ. ನಾವು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕಾಗುತ್ತದೆ," ಎಂದು ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ವಿವರಿಸಿದ್ದರು.
ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ಸರ್ಕಾರವಿದ್ದ ಸಂದರ್ಭದಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ 75,000 ಮೆಟ್ರಿಕ್ ಟನ್ ಗೋಧಿಯನ್ನು ದಾನವಾಗಿ ನೀಡಿತ್ತು. ಚಬಹಾರ್ ಬಂದರು ಮೂಲಕ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು.
ಅಫ್ಘಾನಿಸ್ತಾನದಿಂದ ಯುಎಸ್ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ, ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಆ ಬಳಿಕ ತಾಲಿಬಾನ್ ಈಗ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ಕೂಡಾ ರಚನೆ ಮಾಡಿದೆ. ಆದರೆ ತಾಲಿಬಾನ್ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಇನ್ನು ಕೂಡಾ ಪಡೆದಿಲ್ಲ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಜನರು ಹಸಿವಿನಿಂದ ನರಳುವ ಪರಿಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ದೇಶಗಳು ಮಾನವೀಯ ನೆಲೆಗಟ್ಟಿನಲ್ಲಿ ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಇನ್ನು ಜಿ20 ಶೃಂಗಸಭೆಯಲ್ಲಿಅಫ್ಘಾನಿಸ್ತಾನದ ನಾಗರಿಕರಿಗೆ "ತುರ್ತು ಮತ್ತು ಅಡೆತಡೆಯಿಲ್ಲದ" ಮಾನವೀಯ ನೆರವು ನೀಡುವಂತೆ ಕರೆ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದೇ ಸಂದರ್ಭದಲ್ಲಿ ಅಫ್ಘಾನಿಸ್ತಾನವು ಭಯೋತ್ಪಾದನೆಯ ಮೂಲವಾಗದಂತೆ ತಡೆಯಬೇಕಾಗಿದೆ ಎಂದು ಉಲ್ಲೇಖ ಮಾಡಿದ್ದರು.
ಅಫ್ಘಾನಿಸ್ತಾನದ ವಿಚಾರದಲ್ಲಿ ವರ್ಚುವಲ್ ಆಗಿ ನಡೆದ ಜಿ 20 ಅಸಾಧಾರಣ ಶೃಂಗಸಭೆಯಲ್ಲಿ ಮಾತನಾಡಿದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. "ಅಫ್ಘಾನಿಸ್ತಾನದ ಜಿ 20 ಸಭೆಯಲ್ಲಿ ಭಾಗಿಯಾದೆ. ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲವನ್ನಾಗಿ ಪರಿವರ್ತನೆ ಆಗುವುದನ್ನು ತಡೆಯಬೇಕಾಗಿದೆ ಎಂದು ನಾನು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದೇನೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದರು.