ಭಾರತ-ಪಾಕ್ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವಂಥದ್ದಲ್ಲ; ನರವಣೆ
ನವದೆಹಲಿ, ಜೂನ್ 03: ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವಂಥದ್ದಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಣೆ ಹೇಳಿದ್ದಾರೆ.
ಭಾರತ-ಪಾಕ್ ನಡುವೆ ದಶಕಗಳ ಕಾಲ ಅಪನಂಬಿಕೆಯ ಕಾರಣದಿಂದಾಗಿ ಬದಲಾವಣೆ ಏಕಾಏಕಿ ಸಂಭವಿಸುವಂಥದ್ದಲ್ಲ ಎಂದಿದ್ದಾರೆ.
ಭಾರತ ಒಂದಿಂಚು ಭೂಮಿಯನ್ನೂ ಕಳೆದುಕೊಂಡಿಲ್ಲ; ಸೇನಾ ಮುಖ್ಯಸ್ಥ
ಪಾಕಿಸ್ತಾನವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುವುದಾದರೆ ಭಾರತಕ್ಕೆ ಭಯೋತ್ಪಾದಕರನ್ನು ಬಿಡುವುದನ್ನು ನಿಲ್ಲಿಸಲಿ. ಇಂಥ ಕ್ರಮಗಳು ವಿಶ್ವಾಸ ಹುಟ್ಟಿಸಬಲ್ಲವು ಎಂದು ಹೇಳಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಹೇಳಿದ್ದಾರೆ.
ನರವಣೆ ಅವರು ಎರಡು ದಿನಗಳ ಕಾಲ ಜಮ್ಮು ಕಾಶ್ಮೀರ ಭೇಟಿಯಲ್ಲಿದ್ದು, ಬುಧವಾರ ಕಾಶ್ಮೀರ ಕಣಿವೆಯಲ್ಲಿನ ನಿಯಂತ್ರಣ ರೇಖೆ ಮತ್ತು ಪ್ರತಿ ಬಂಡಾಯ ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.
ಪಾಕ್, ಕದನ ವಿರಾಮ ಒಪ್ಪಂದಕ್ಕೆ ಬರುವುದಾದರೆ, ಭಯೋತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಬೇಕು. ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪರಿಸ್ಥಿತಿ ಸುಧಾರಣೆಯಲ್ಲಿ ಈ ಕ್ರಮ ಬೃಹತ್ ಹೆಜ್ಜೆಯಾಗಲಿದೆ. ಪಾಕಿಸ್ತಾನ ಭಾರತದ ಕಾಳಜಿಯನ್ನು ಅರ್ಥ ಮಾಡಿಕೊಂಡು ತನ್ನ ಗಡಿ ಯುದ್ಧಕ್ಕೆ ನೀರೆರೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಇತ್ತೀಚಿನ ಕದನ ವಿರಾಮ ಮಾತುಕತೆ ಫೆಬ್ರವರಿ ಕೊನೆ ವಾರದಲ್ಲಿ ಎರಡೂ ಸೇನೆಗಳ ಮಿಲಿಟರಿ ಕಾರ್ಯಾಚರಣೆ ಮಹಾ ನಿರ್ದೇಶಕರ ನಡುವೆ ನಡೆದಿತ್ತು.