ಚೀನಾ ತೊರೆಯುತ್ತಿರುವ ಉದ್ಯಮಗಳಿಗೆ ಭಾರತವೇ ಮೊದಲ ಆದ್ಯತೆ ಅಲ್ಲ
ನವದೆಹಲಿ,ಫೆಬ್ರವರಿ 15: ಚೀನಾವನ್ನು ತೊರೆಯುತ್ತಿರುವ ಉದ್ಯಮಗಳಿಗೆ ಭಾರತ ಪ್ರಥಮ ಆದ್ಯತೆ ಅಲ್ಲ ಎಂದು ವರದಿ ಹೇಳಿದೆ. ಕೊರೊನಾ ಸೋಂಕು ಎಲ್ಲೆಡೆ ಹರಡಿದ ಬಳಿಕ ಸಾಕಷ್ಟು ಉದ್ಯಮಗಳು ಚೀನಾವನ್ನು ಬಿಡುತ್ತಿವೆ, ಆದರೆ ಅವೆಲ್ಲವಕ್ಕೂ ಭಾರತ ಮೊದಲ ಆದ್ಯತೆ ಅಲ್ಲ ಎಂದು ಹೇಳಲಾಗಿದೆ.
ಈ ಮೊದಲು ಸಾಕಷ್ಟು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಹಲವು ನಾಯಕರು ಚೀನಾ ತೊರೆಯುತ್ತಿರುವ ವಿದೇಶಿ ಕಂಪನಿಗಳಿಗೆ ಭಾರತವೇ ಮೊದಲ ಆದ್ಯತೆಯ ತಾಣ ಎಂದು ಹೇಳಿದ್ದರು.
ಚೀನಾಕ್ಕೆ ಭೂಮಿ ಕೊಟ್ಟವರು ಯಾರೆಂದು ನಿಮ್ಮ ಅಜ್ಜನನ್ನು ಕೇಳಿ: ರಾಹುಲ್ಗೆ ತಿರುಗೇಟು
ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ವರದಿಯೊಂದನ್ನು ಮಂಡಿಸಲಾಗಿದ್ದು, 'ಕೋವಿಡ್ ನಂತರದ ಆರ್ಥಿಕತೆಯಲ್ಲಿ ಹೂಡಿಕೆಯನ್ನು ಆಕರ್ಷಿಸುವುದು: ಭಾರತಕ್ಕೆ ಸವಾಲುಗಳು ಮತ್ತು ಅವಕಾಶಗಳು' ಎಂಬ ಈ ವರದಿಯಲ್ಲಿ ಚೀನಾ ತೊರೆಯುತ್ತಿರುವ ವಿದೇಶಿ ಕಂಪನಿಗಳಿಗೆ ಭಾರತ ಮೊದಲ ಆದ್ಯತೆಯ ತಾಣ ಅಲ್ಲ ಎಂದು ಹೇಳಲಾಗಿದೆ.
ಚೀನಾ ತೊರೆಯುತ್ತಿರುವ ಸಂಸ್ಥೆಗಳಿಗೂ ಈ ದೇಶಗಳೂ ಆಶ್ರಯ ತಾಣವಾಗಿವೆ
ಭಾರತವಲ್ಲದೇ ಚೀನಾ ತೊರೆಯುತ್ತಿರುವ ವಿದೇಶಿ ಸಂಸ್ಥೆಗಳಿಗೆ ವಿಯೆಟ್ನಾಂ, ತೈವಾನ್ ಮತ್ತು ಥೈಲ್ಯಾಂಡ್ನಂತಹ ದೇಶಗಳು ಪ್ರಬಲ ಸ್ಪರ್ಧಿಗಳಾಗಿದ್ದು, ಇಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ಸರ್ಕಾರ ನೀಡಿರುವ ಉತ್ತರವೇನು?
ಸಂಸತ್ತಿನ ಸರ್ಕಾರ ನೀಡಿದ ಉತ್ತರದ ಪ್ರಕಾರ, ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಉತ್ಪಾದನಾ ವಲಯದ ನಾಲ್ಕು ಕಂಪನಿಗಳು ಚೀನಾದಿಂದ ಭಾರತಕ್ಕೆ ನೆಲೆಯನ್ನು ಬದಲಾಯಿಸಿವೆ ಮತ್ತು ಇನ್ನೂ ಅನೇಕ ಕಂಪನಿಗಳು ಭಾರತದಲ್ಲಿ ಘಟಕ ಸ್ಥಾಪಿಸಲು ಆಸಕ್ತಿ ತೋರಿಸಿವೆ. ನೀತಿ ಬದಲಾವಣೆಗಳು ಮತ್ತು ಘೋಷಿತ ಪ್ರೋತ್ಸಾಹಕ ಯೋಜನೆಗಳು, ಸ್ವಾಗತ ಕ್ರಮಗಳು ಸೇರಿದಂತೆ ಸರ್ಕಾರ ಕೈಗೊಂಡ ಕೆಲ ಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ಪಾದನಾ ನೆಲೆಯ ಸ್ಥಳಾಂತರ
ಕಳೆದ ಒಂದು ವರ್ಷದಲ್ಲಿ ಅನೇಕ ಕಂಪನಿಗಳು ತಮ್ಮ ಉತ್ಪಾದನಾ ನೆಲೆಗಳನ್ನು ಚೀನಾದಿಂದ ಸ್ಥಳಾಂತರಿಸಿದ್ದು, ರಾಜಕೀಯ ಮಾತ್ರವಲ್ಲದೆ ಆರ್ಥಿಕ ಕಾರಣಗಳಿಂದಲೂ ಉತ್ಪಾದನಾ ನೆಲೆಗಳನ್ನು ಬದಲಿಸಲಾಗುತ್ತಿದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಮತ್ತು ಅಂತಹ ಕಂಪನಿಗಳನ್ನು ಆಕರ್ಷಿಸಲು, ಭಾರತ ಸೇರಿದಂತೆ ಕೆಲವು ದೇಶಗಳು ವಿಶೇಷ ನೀತಿಗಳನ್ನು ಘೋಷಿಸಿದವು. ಆದಾಗ್ಯೂ, ಈ 58 ಕಂಪೆನಿಗಳಲ್ಲಿ ಹೆಚ್ಚಿನವು ತಮ್ಮ ನೆಲೆಯನ್ನು ವಿಯೆಟ್ನಾಂ, ತೈವಾನ್, ಥೈಲ್ಯಾಂಡ್ ಇತ್ಯಾದಿ ದೇಶಗಳಿಗೆ ಸ್ಥಳಾಂತರಿಸಿದೆ. ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಭಾರತಕ್ಕೆ ಬಂದಿವೆ ಎಂದು ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಮೊದಲ ಆದ್ಯತೆಯ ತಾಣವಲ್ಲ
ಅಂತೆಯೇ ಭಾರತ ಮೊದಲ ಆದ್ಯತೆಯ ತಾಣವಲ್ಲ ಎಂದು ಹೇಳಲು ಕಾರಣಗಳನ್ನೂ ವರದಿಯಲ್ಲಿ ನೀಡಲಾಗಿದ್ದು, ಆಡಳಿತಾತ್ಮಕ ಮತ್ತು ನಿಯಂತ್ರಕ ಅಡಚಣೆಗಳು, ಅಸಮರ್ಪಕ ಮತ್ತು ದುಬಾರಿ ಸಾಲ ಸೌಲಭ್ಯ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಗೊಂದಲ, ಅಸಮರ್ಪಕ ಮೂಲಸೌಕರ್ಯ ಸೌಲಭ್ಯಗಳು, ಹೆಚ್ಚಿನ ಜಾರಿ ವೆಚ್ಚ ಮತ್ತು ದೊಡ್ಡ ಅಸಂಘಟಿತ ಉತ್ಪಾದನಾ ವಲಯಗಳಂತಹ ಕ್ಲಿಷ್ಟಕರ ಸಮಸ್ಯೆಗಳು ಅಡ್ಡಿಯಾಗುತ್ತಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.