ಭಾರತ ಹಿಂದೆಂದೂ ನಿರ್ಣಾಯಕ ಸರ್ಕಾರ ಹೊಂದಿರಲಿಲ್ಲ; ಮೋದಿ
ನವದೆಹಲಿ, ಅಕ್ಟೋಬರ್ 11: ಭಾರತ, ದೃಢ ನಿರ್ಧಾರಗಳನ್ನು ಕೈಗೊಳ್ಳುವಂಥ, ನಿರ್ಣಾಯಕ ಸರ್ಕಾರವನ್ನು ಹಿಂದೆಂದೂ ಕಂಡಿರಲಿಲ್ಲ' ಎಂದು ಪ್ರಧಾನಿ ಮೋದಿ ಹೇಳಿದರು.
ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡುವ ನಿಟ್ಟಿನಲ್ಲಿ ರೂಪಿಸಲಾಗಿರುವ ಭಾರತೀಯ ಬಾಹ್ಯಾಕಾಶ ಸಂಘ (ಇಂಡಿಯನ್ ಸ್ಪೇಸ್ ಅಸೋಸಿಯೇಷನ್-ಐಎಸ್ಪಿಎ) ಉದ್ಘಾಟಿಸಿ ಮೋದಿ ಮಾತನಾಡಿದರು.
ಯುಪಿ ರೈತರ ಹತ್ಯೆ: 'ಕೇವಲ ಒಂದು ಸಹಾನುಭೂತಿಯ ಮಾತು ಸಾಕು ಮೋದಿಜಿ' ಎಂದ ಸಿಬಲ್
ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಾಗಿ ಈ ಸಂಘವು ಬದ್ಧತೆ ಪ್ರದರ್ಶಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಮೋದಿ, ಯಾವುದೇ ಕ್ಷೇತ್ರದಲ್ಲಿ ದೃಢ ನಿರ್ಧಾರಗಳನ್ನು ಅಥವಾ ನಿರ್ಣಾಯಕ ಅಂಶಗಳನ್ನು ಗುರುತಿಸುವ ಸರ್ಕಾರವನ್ನು ದೇಶ ಹಿಂದೆಂದೂ ಕಂಡಿರಲಿಲ್ಲ' ಎಂದು ಹೇಳಿದರು.
ನಷ್ಟದಲ್ಲಿದ್ದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವಲ್ಲಿ ಸರ್ಕಾರದ ಗೆಲುವನ್ನು ಉಲ್ಲೇಖಿಸಿದ ಅವರು, 'ಇದು ನಮ್ಮ ಸರ್ಕಾರದ ಬದ್ಧತೆಯನ್ನು ತೋರುತ್ತದೆ' ಎಂದರು.
'ಅಗತ್ಯವಿಲ್ಲದ ಕ್ಷೇತ್ರಗಳಲ್ಲಿ ಖಾಸಗಿ ಉದ್ಯಮಿಗಳಿಗೆ ಅವಕಾಶ ನೀಡಬೇಕು ಎನ್ನುವುದು ಸಾರ್ವಜನಿಕ ವಲಯದ ಕುರಿತು ಸರ್ಕಾರದ ನೀತಿಯಾಗಿದೆ' ಎಂದು ಸ್ಪಷ್ಟನೆ ನೀಡಿದರು. 'ನಮ್ಮ ಸರ್ಕಾರ ದೇಶದ ಹಿತಾಸಕ್ತಿ ಹಾಗೂ ಪಾಲುದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದೆ' ಎಂದು ಹಲವು ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಹೂಡಿಕೆಗೆ ಅವಕಾಶ ಕಲ್ಪಿಸುತ್ತಿರುವುದರ ಕುರಿತು ವಿವರಣೆ ನೀಡಿದರು.
ಪಶುಸಂಗೋಪನೆ ಇಲಾಖೆಗೆ ಕೇಂದ್ರ ಸರ್ಕಾರದಿಂದ ಬಂಪರ್ ಕೊಡುಗೆ!
'ನಮ್ಮದು ಆತ್ಮನಿರ್ಭರ ಭಾರತ ನಿರ್ಮಾಣದ ಗುರಿ. ಈ ಬಗ್ಗೆ ದೇಶದ ದೃಷ್ಟಿ, ಗುರಿ ಸ್ಪಷ್ಟವಾಗಿದೆ. ಹೊಸ ಕೈಗಾರಿಕೆಗಳಿಗೆ, ಯುವ ಆವಿಷ್ಕಾರರಿಗೆ, ಸ್ಟಾರ್ಟ್ ಅಪ್ಗಳಿಗೆ ಇದೇ ಪ್ರೋತ್ಸಾಹ, ನೆರವು ನೀಡುವುದನ್ನು ಸರ್ಕಾರ ಮುಂದುವರೆಸುವುದು' ಎಂದು ಭರವಸೆ ನೀಡಿದರು.
'ಸರ್ಕಾರ ನಾಲ್ಕು ಸ್ತಂಭಗಳ ಆಧಾರದ ಮೇಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಾಗಿದೆ. ನೂತನ ಸಂಶೋಧನೆಗಳನ್ನು ಕೈಗೊಳ್ಳಲು ಖಾಸಗಿ ವಲಯಕ್ಕೆ ಅವಶ್ಯ ಸ್ವಾತಂತ್ರ್ಯ ನೀಡುವುದು, ಸರ್ಕಾರ ಇದರಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದು, ಭವಿಷ್ಯದ ಆವಿಷ್ಕಾರಗಳಿಗೆ ಯುವ ಸಮೂಹವನ್ನು ಸಜ್ಜುಗೊಳಿಸುವುದು ಹಾಗೂ ಬಾಹ್ಯಾಕಾಶ ವಲಯವನ್ನು ಸಾಮಾನ್ಯ ಜನರ ಅಭಿವೃದ್ಧಿಗೆ ನೆರವು ನೀಡುವ ಸಂಪನ್ಮೂಲವಾಗಿ ಬಳಸುವುದು ಸೇರಿದೆ' ಎಂದು ಪ್ರಧಾನಿ ತಿಳಿಸಿದರು.
'ಆರ್ಥಿಕ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಇವೆರಡು ದೇಶದ ಅಭಿವೃದ್ಧಿಗೆ ಶಕ್ತಿಯಾಗಿವೆ. ಇಂಥ ಕಾಲಘಟ್ಟದಲ್ಲಿ ಸರ್ಕಾರ ದೀರ್ಘ ಕಾಲ ರಾಷ್ಟ್ರೀಯ ಭದ್ರತೆ ಹಾಗೂ ಅಭಿವೃದ್ಧಿಗೆ ನೀತಿಗಳನ್ನು ರೂಪಿಸುವುದಕ್ಕೆ ಪಾಲುದಾರರಾಗಿರಲು ಸಾಧ್ಯವಿಲ್ಲ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸರ್ಕಾರಿ ಕ್ಷೇತ್ರವಷ್ಟೇ ಅಲ್ಲದೇ ಖಾಸಗಿ ವಲಯಗಳೂ ತೊಡಗಿಕೊಳ್ಳಬಕಿದೆ' ಎಂದು ತಿಳಿಸಿದರು.
Recommended Video
'ಈ ಎಲ್ಲಾ ಕ್ರಮಗಳು ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿಸಲಿದೆ. ಶಕ್ರಿಶಾಲಿಯಾದ ಖಾಸಗಿ ಉದ್ಯಮ ಕ್ಷೇತ್ರಗಳು ದೇಶದ ಭದ್ರತೆಯಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ನೆರವಾಗಲಿವೆ' ಎಂದರು.
'ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿಯವರ ಹೂಡಿಕೆಯಿಂದ ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಸುಲಭ ಸಾಧ್ಯವಾಗುತ್ತದೆ. ಜಂಟಿ ಉದ್ಯಮಗಳ ಮೂಲಕ ವಿದೇಶಿ ಪಾಲುದಾರಿಕೆಯನ್ನು ಪಡೆಯಬಹುದಾಗಿದೆ' ಎಂದು ವಿವರಣೆ ನೀಡಿದರು.