ದೇಶಭಕ್ತರು ಬೇಕು ನಿಜ, ಆದ್ರೆ ಇಂಥ 'ದೇಶಭಕ್ತ'ರು ಬೇಡ್ವೇಬೇಡ ಸ್ವಾಮಿ!
ಉದಾತ್ತ ಧ್ಯೇಯದಿಂದ ಹೋರಾಟ ಮಾಡುವಾಗ ಸಂಕಷ್ಟಗಳು ಬರುವುದು ಸಹಜ. ಇದಕ್ಕೆ ಅಡ್ಡಗಾಲು ಹಾಕುವವರಿಗೂ ಕಮ್ಮಿಯಿರಲಿಲ್ಲ. ಒನ್ಇಂಡಿಯಾದ ಅಭಿಯಾನದ ಹಳಿತಪ್ಪಿಸಲು ಸಾಕಷ್ಟು ಪ್ರಯತ್ನಗಳೂ ನಡೆದವು. ಒಬ್ಬ ಮಹಾಶಯ ಕರೆ ಮಾಡಿ ಮಾತಾಡಿದ್ದು ಹೀಗಿತ್ತು...
ಬೆಂಗಳೂರು, ಫೆಬ್ರವರಿ 25 : ನಮ್ಮ ದೇಶದಲ್ಲಿ ಪರಿಹಾರಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ದೇಶಸೇವೆ ಮಾಡಿದವರ ಕುಟುಂಬದ ಪರವಾಗಿಯೂ ಜೋರಾದ ದನಿ ಎತ್ತಿ ಹೋರಾಟ ಮಾಡಿದರೆ ಮಾತ್ರ ಕನಿಷ್ಠಮಟ್ಟದ ಪರಹಾರ ಸಿಗಲು ಸಾಧ್ಯ.
ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದನ ಹೆಂಡತಿ ಮಹಾದೇವಿಗಾಗಿ ಇಂಥದ್ದೇ ಬಗೆಯ ಅಭಿಯಾನ ಒನ್ಇಂಡಿಯಾ ಪೋರ್ಟಲ್ ಪ್ರಾರಂಭಿಸಿದಾಗ ಸಿಕ್ಕಂಥ ಕೆಲ ಪ್ರತಿಕ್ರಿಯೆಗಳು ನಿಜಕ್ಕೂ ನಾಚಿಕೆಗೇಡಿನದ್ದು.
ಭಾರತೀಯ ಸೇನೆ ಮತ್ತ ಕರ್ನಾಟಕ ಸರಕಾರದಿಂದ ಎಲ್ಲ ಬಗೆಯ ಸಹಾಯ ಮಹಾದೇವಿ ಕೊಪ್ಪದಳಿಗೆ ಸಿಕ್ಕಿದೆ. ಆದರೆ, ಚಿಕ್ಕಮಗುವಿನ ತಾಯಿಯಾಗಿರುವ ಆಕೆಗೆ ಉದ್ಯೋಗದ ಅನಿವಾರ್ಯತೆ ಇದ್ದಾಗ ನೌಕರಿಗಾಗಿ ಹೋರಾಟ ಮಾಡುವುದೂ ಅನಿವಾರ್ಯವಾಗಿತ್ತು.
ಇಂಥದೊಂದು ಉದಾತ್ತ ಧ್ಯೇಯದಿಂದ ಹೋರಾಟ ಮಾಡುವಾಗ ಸಂಕಷ್ಟಗಳು ಬರುವುದು ಸಹಜ. ಇದಕ್ಕೆ ಅಡ್ಡಗಾಲು ಹಾಕುವವರಿಗೂ ಕಮ್ಮಿಯಿರಲಿಲ್ಲ. ಒನ್ಇಂಡಿಯಾದ ಅಭಿಯಾನದ ಹಳಿತಪ್ಪಿಸಲು ಸಾಕಷ್ಟು ಪ್ರಯತ್ನಗಳೂ ನಡೆದವು. ಒಬ್ಬ ಮಹಾಶಯ ಕರೆ ಮಾಡಿ ಮಾತಾಡಿದ್ದು ಹೀಗಿತ್ತು... [ಮಹಾದೇವಿಗೆ ಸಂಸದರಿಂದಲೂ ಹರಿದುಬಂದ ಸಹಾಯಹಸ್ತ]
ಮೋದಿ ಸರಕಾರವನ್ನೇಕೆ ದೂರಬಾರದು?
"ನೀವೇಕೆ ಕೆಲ ಖಾಸಗಿ ಚಾನಲ್ಲುಗಳಿಗೆ ಹೋಗಿ, ಮಹಾದೇವಿಗೆ ನೌಕರಿ ಕೊಡದಿದ್ದಕ್ಕೆ ನರೇಂದ್ರ ಮೋದಿ ಸರಕಾರವನ್ನು ದೂರಬಾರದು? ಆಕೆಗೆ ಕೆಲಸ ನೀಡಲು ಕೇಂದ್ರದ ಮೇಲೆ ಒತ್ತಡ ತರಬೇಕು. ಸರಕಾರ ಮಹಾದೇವಿಗೆ ಕೆಲಸ ಕೊಡುವುದಿಲ್ಲ." ಮಹಾದೇವಿಗೆ ಕೆಲಸ ಕೊಡುತ್ತೇನೆಂದು ಹೇಳಿದ್ದು ರಾಜ್ಯ ಸರಕಾರ, ಕೇಂದ್ರವಲ್ಲ! [ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ]
ಸಿದ್ದರಾಮಯ್ಯನವರು ಭರವಸೆ ನೀಡಿದ್ದು ನಿಜ
ಸಿದ್ದರಾಮಯ್ಯನವರು ಕೆಲಸ ಕೊಡಿಸುತ್ತೇನೆಂದು ಭರವಸೆ ನೀಡಿಲ್ಲವೆಂದು ಟ್ವಿಟ್ಟರ್ ಮತ್ತು ಫೇಸ್ ಬುಕ್ಕಿನಲ್ಲಿಯೂ ಋಣಾತ್ಮಕ ಚರ್ಚೆ ಶುರು ಮಾಡಲಾಯಿತು. ಫೆಬ್ರವರಿ 11ರಂದು ಹನುಮಂತಪ್ಪ ಸತ್ತಾಗ ಸಿದ್ದರಾಮಯ್ಯ ಆಡಿದ ಮಾತುಗಳ ವಿಡಿಯೋವನ್ನು ಅವರ ಮುಂದೆ ಹಿಡಿದಾಗ ಅಡ್ಡಬಾಯಿದಾಸರು ಬಾಯಿಮುಚ್ಚಿಕಳ್ಳಬೇಕಾಯಿತು.
ಕೆಲಸ ನೀಡುತ್ತಿರುವುದು ಯೋಧನ ಮಡದಿಗೆ ತಾನೆ?
ಯೋಧನ ಮಡದಿಗೆ ಕೆಲಸ ನೀಡುವುದು ಕೇಂದ್ರದ ಜವಾಬ್ದಾರಿಯಾಗಿರುವುದರಿಂದ ರಾಜ್ಯ ಸರಕಾರ ನೀಡಿದರೆ ಬೇರೆ ರೀತಿಯ ಸಂಪ್ರದಾಯ ಹುಟ್ಟುಹಾಕಿದಂತಾಗುತ್ತದೆ ಎಂಬುದು ಅವರ ವಾದವಾಗಿತ್ತು. ಅಲ್ರೀ ಸ್ವಾಮಿ, ಆಗಲಿ ಬಿಡಿ. ಅಷ್ಟಕ್ಕೂ ಕೆಲಸ ನೀಡುತ್ತಿರುವುದು ಯೋಧನ ಮಡದಿಗೆ ತಾನೆ? ಇಂಥವರಿಂದಲೇ ನಾವಿಂದು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದು? [ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]
ಉದ್ಯೋಗ ನೀಡದಿದ್ದರೆ ಇದ್ದೇ ಇದೆ ಮತ್ತೊಂದು ಹೋರಾಟ!
ಈ ಅಭಿಯಾನ ಆರಂಭಿಸಿದ 12 ಗಂಟೆಗಳಲ್ಲಿಯೇ ರಾಜ್ಯ ಸರಕಾರ ಮಹಾದೇವಿಗೆ ಉದ್ಯೋಗ ನೀಡುವುದಾಗಿ ವಾಗ್ದಾನ ನೀಡಿತು. ರಾಜ್ಯ ಸರಕಾರಕ್ಕೆ ಧನ್ಯವಾದಗಳು. ಇನ್ನು ಒಂದು ತಿಂಗಳಲ್ಲಿ ಉದ್ಯೋಗದ ಪತ್ರ ಆಕೆಯ ಕೈಸೇರುತ್ತದೆಂದು ಮಾತು ನೀಡಲಾಗಿದೆ. ನೀಡದಿದ್ದರೆ ಇದ್ದೇ ಇದೆ ಮತ್ತೊಂದು ಹೋರಾಟ!
ಬೊಂಬಡಾ ಹೊಡೆದುಕೊಳ್ಳದವರು ದೇಶಭಕ್ತರಲ್ಲವೆ?
ನಮ್ಮ ಭಾರತ ಸಾಕಷ್ಟು 'ದೇಶಭಕ್ತ'ರನ್ನು ದೂರದರ್ಶನದಲ್ಲಿ ಕಂಡಿದೆ. ನಾನು ದೇಶಭಕ್ತ ನಾನು ದೇಶಭಕ್ತ ಎಂದು ಬೊಂಬಡಾ ಹೊಡೆಯುವುದೇ ದೇಶಭಕ್ತಿ ಎಂದು ಕೆಲವರು ತಿಳಿದಿದ್ದಾರೆ. ಹಾಗಾದರೆ, ಬೊಂಬಡಾ ಹೊಡೆದುಕೊಳ್ಳದವರು ದೇಶಭಕ್ತರಲ್ಲವೆ? ಹನುಮಂತಪ್ಪ ಸತ್ತಾಗ ಮೊಸಳೆ ಕಣ್ಣೀರು ಸುರಿಸಿದವರಿಗೆ ಫೆಬ್ರವರಿ 11 ಯೋಧನ ಪುಣ್ಯತಿಥಿ ಎಂಬುದು ಮರೆತೇಹೋಗಿತ್ತು!
'ದೇಶಭಕ್ತ'ರು ಬೊಗಳುತ್ತಿರುವುದೆಲ್ಲ ಸತ್ಯವಾಗುವುದಿಲ್ಲ
ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಸಾಕಷ್ಟು ಸ್ವಾತಂತ್ರ್ಯವಿರುವುದರಿಂದ ಸ್ವಯಂಘೋಷಿತ ದೇಶಭಕ್ತರು ಬೊಗಳುತ್ತಿರುವುದೆಲ್ಲ ಸತ್ಯವಾಗುವುದಿಲ್ಲ. ವಿಷಯದ ಹಿಂದಿನ ಸತ್ಯಾಂಶವೇನು ಎಂಬುದನ್ನು ಪರಾಮರ್ಶಿಸಿ ನೋಡಬೇಕು. ಮಹಾದೇವಿ ವಿಷಯದಲ್ಲಿಯೂ ಇದೇ ಆಗಿದ್ದು.
ಒಂದು ಪುಟ್ಟ ನೌಕರಿಯಾದರೂ ಬೇಡವೆ?
ಆಕೆ ದೇಶಸೇವೆ ಮಾಡುತ್ತಿದ್ದ ಗಂಡನನ್ನು ಕಳೆದುಕೊಂಡಿದ್ದಾಳೆ. ಜೊತೆಗೊಂದು ಪುಟ್ಟು ಹೆಣ್ಣುಮಗು ಬೇರೆ. ಗೌರವಯುತವಾಗಿ ಬಾಳು ಬದುಕಲು ಒಂದು ಪುಟ್ಟ ನೌಕರಿಯಾದರೂ ಬೇಡವೆ? ಸರಕಾರ ನೀಡಿದ ಪರಿಹಾರ ಎಷ್ಟು ದಿವಸ? ಕೂತು ತಿಂದರೆ ಕುಡಿಕೆ ಹೊನ್ನು ಕೂಡ ಸಾಲದು ಎಂಬುದನ್ನು ಮಹಾದೇವಿ ಚೆನ್ನಾಗಿ ಅರಿತಿದ್ದಾರೆ. ಆ ಕಾರಣಕ್ಕಾಗಿಯೇ ಒಂದು ನೌಕರಿ ಕೊಡಿರೆಂದು ಕೇಳುತ್ತಿರುವುದು. ಬೇಕಿದ್ದರೆ ಸರಕಾರಿ ಕಚೇರಿಯ ನೆಲವನ್ನು ಗುಡಿಸಿ ಒರೆಸಲೂ ಸಿದ್ಧ ಎಂದಿದ್ದಾಳೆ ಸ್ವಾಭಿಮಾನಿ ಮಹಾದೇವಿ.
ದೇಶಸೇವೆಯಲ್ಲಿ ಮಡಿದ ಹುತಾತ್ಮರಿಗೆ ಸಲಾಂ
ಮುಗಿಸುವ ಮುನ್ನ ಹನುಮಂತಪ್ಪ ಕೊಪ್ಪದ ಮಾತ್ರವಲ್ಲ 2016ರ ಫೆಬ್ರವರಿಯಲ್ಲಿ ದೇಶ ಸೇವೆ ಮಾಡುತ್ತಿದ್ದಾಗಲೇ ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಿಂದ ಅಸುನೀಗಿದ ಯೋಧರನ್ನು ಸ್ಮರಿಸೋಣ.
*
ಸುಬೇದಾರ್
ನಾಗೇಶ,
ಕರ್ನಾಟಕ
*
ಹವಿಲ್ದಾರ್
ಏಳುಮಲೈ,
ತಮಿಳುನಾಡು
*
ಲಾನ್ಸ್
ಹವಿಲ್ದಾರ್
ಎಸ್
ಕುಮಾರ್,
ತಮಿಳುನಾಡು
*
ಲಾನ್ಸ್
ನಾಯಕ್
ಸುಧೀಶ್,
ಕೇರಳ
*
ಲಾನ್ಸ್
ನಾಯಕ್
ಹನುಮಂತಪ್ಪ
ಕೊಪ್ಪದ,
ಕರ್ನಾಟಕ
*
ಸಿಪಾಯಿ
ಮಹೇಶ
ಪಿಎನ್,
ಕರ್ನಾಟಕ
*
ಸಿಪಾಯಿ
ಗಣೇಶನ್
ಜಿ,
ತಮಿಳುನಾಡು
*
ಸಿಪಾಯಿ
ರಾಮ
ಮೂರ್ತಿ,
ತಮಿಳುನಾಡು
*
ಸಿಪಾಯಿ
ಮುಷ್ತಾಕ್
ಅಹ್ಮದ್
ಎಸ್,
ಆಂಧ್ರಪ್ರದೇಶ
*
ಸಿಪಾಯಿ
ನರಸಿಂಗ್
ಸೂರ್ಯವಂಶಿ,
ಮಹಾರಾಷ್ಟ್ರ