ದೇಶದಲ್ಲಿ ಕೊರೊನಾ ಲಸಿಕೆಯ "ಬೂಸ್ಟರ್ ಡೋಸ್" ಅಗತ್ಯವಿದೆ; ಏಮ್ಸ್
ನವದೆಹಲಿ, ಜುಲೈ 24: ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ದೇಶದಲ್ಲಿ "ಬೂಸ್ಟರ್ ಡೋಸ್" ಲಸಿಕೆಗಳ ಅವಶ್ಯಕತೆ ಕಾಣಿಸಿಕೊಳ್ಳಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
"ಜನರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣಿಸುವ ಸಮಯಕ್ಕೆ ತಕ್ಕಂತೆ ಬೂಸ್ಟರ್ ಲಸಿಕೆ ನೀಡಬೇಕಾಗಬಹುದು. ಈ ಬೂಸ್ಟರ್ ಡೋಸ್ ಎರಡನೇ ತಲೆಮಾರಿನ ಲಸಿಕೆಯಾಗಿದೆ. ಈ ಎರಡನೇ ತಲೆಮಾರಿನ ಲಸಿಕೆ ಪ್ರತಿರಕ್ಷೆ ನೀಡುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಹೊಸ ರೂಪಾಂತರಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಈಗಾಗಲೇ ಬೂಸ್ಟರ್ ಲಸಿಕೆ ಸಂಬಂಧ ಪ್ರಯೋಗಗಳು ನಡೆಯುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ಈ ಲಸಿಕೆ ಅಗತ್ಯ ಬರಬಹುದು. ಆದರೆ ಇಡೀ ಜನಸಂಖ್ಯೆಗೆ ಎರಡು ಡೋಸ್ ಲಸಿಕೆ ನೀಡಿದ ನಂತರ ಬೂಸ್ಟರ್ ಲಸಿಕೆ ನೀಡಲಾಗುತ್ತದೆ" ಎಂದು ಅವರು ವಿವರಣೆ ನೀಡಿದರು.
ಮಕ್ಕಳಿಗೆ ಕೊರೊನಾ ಲಸಿಕೆ ಕುರಿತು ಮಾಹಿತಿ ನೀಡಿದ ಅವರು, "ಮಕ್ಕಳಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದ್ದು, ಸೆಪ್ಟೆಂಬರ್ನಲ್ಲಿ ಫಲಿತಾಂಶ ಹೊರಬರುವ ಸಾಧ್ಯತೆಯಿದೆ" ಎಂದು ತಿಳಿಸಿದರು.
ಬೆಟಾ ರೂಪಾಂತರ, ಡೆಲ್ಟಾ ರೂಪಾಂತರಗಳ ವಿರುದ್ಧ ಕೆಲವು ಲಸಿಕೆಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದಂತೆ "ಬೂಸ್ಟರ್ ಶಾಟ್" ಪ್ರಯೋಗ ಹಲವು ದೇಶಗಳಲ್ಲಿ ಆರಂಭವಾಗಿದೆ.
ಮೂರನೇ ಅಲೆ ನಿರ್ವಹಣೆಗೆ ಸಿದ್ಧತೆಗಳು ಸಾಗುತ್ತಿರುವ ಈ ಸಂದರ್ಭ, ಮೂರನೇ ಡೋಸ್, ಅಂದರೆ "ಬೂಸ್ಟರ್ ಶಾಟ್" ಲಸಿಕೆ ಪಡೆಯುವ ಅಗತ್ಯದ ಕುರಿತೂ ಚರ್ಚೆ ನಡೆಯುತ್ತಿದೆ.
ನಮಗೆಲ್ಲಾ ಕೊರೊನಾ ಲಸಿಕೆಯ "ಬೂಸ್ಟರ್ ಶಾಟ್" ಅವಶ್ಯಕತೆಯಿದೆಯೇ? WHO ವಿಜ್ಞಾನಿ ವಿವರಣೆ...
"ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ನಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು. ಜೊತೆಗೆ ರೂಪಾಂತರಗೊಳ್ಳುತ್ತಿರುವ ಸೋಂಕನ್ನು ನಿಯಂತ್ರಿಸಲು ಇದು ಸಹಕಾರಿ" ಎಂದು ದೆಹಲಿ ಏಮ್ಸ್ನ ಔಷಧ ವಿಭಾಗದ ವೈದ್ಯ ಸಂಜೀವ್ ಸಿನ್ಹಾ ಈಚೆಗಷ್ಟೆ ಹೇಳಿದ್ದರು.
"ಇದೇ ಜನವರಿ ತಿಂಗಳಿನಲ್ಲಿ ಕೊರೊನಾ ಲಸಿಕೆ ಪಡೆದ ಬಹುಪಾಲು ಜನರಿಗೆ ಎರಡನೇ ಅಲೆಯಲ್ಲಿ ತೊಂದರೆಯಾಗಿಲ್ಲ. ಲಸಿಕೆಯು ಕೊರೊನಾ ಸೋಂಕು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ ಆರು ತಿಂಗಳವರೆಗೂ ರೋಗನಿರೋಧಕ ಶಕ್ತಿಯಿರುತ್ತದೆ. ನಂತರ ದೇಹದಲ್ಲಿ ಪ್ರತಿರೋಧಕ ಶಕ್ತಿ ಕ್ರಮೇಣ ತಗ್ಗಬಹುದು ಎಂಬ ಅನುಮಾನವಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಮತ್ತೆ ಅವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಇರಬಹುದು. ಅಂಥವರಿಗೆ ಬೂಸ್ಟರ್ ಡೋಸ್ ಅಗತ್ಯ ಬರಬಹುದು" ಎಂದಿದ್ದಾರೆ.