ಕೊಹಿನೂರು ವಜ್ರ ಭಾರತಕ್ಕೆ ತರೋಕೆ ಆಗಲ್ಲ ಬಿಡಿ!
ನವದೆಹಲಿ, ಏಪ್ರಿಲ್ 20: ಬ್ರಿಟಿಷರ ಸುಪರ್ದಿಯಲ್ಲಿರುವ ಜಗತ್ ಪ್ರಸಿದ್ಧ, ಅತ್ಯಂತ ದುಬಾರಿ ವಜ್ರ ಕೊಹಿನೂರು, ಭಾರತಕ್ಕೆ ವಾಪಸ್ ಬರುವುದು ಕಷ್ಟವಾಗಲಿದೆ. ಹೀಗಂತಾ ಸುಪ್ರೀಂಕೋರ್ಟ್ ಮುಂದೆ ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ.
ಯುನೈಟೆಡ್ ಕಿಂಗ್ಡಮ್ ನಿಂದ ಭಾರತದ ಹೆಮ್ಮೆಯ ಆಭರಣ ವಾಪಸ್ ತರುವ ಚರ್ಚೆ ನಡೆಯುತ್ತಿದೆ. ಈ ವಜ್ರವನ್ನು ಇಲ್ಲಿಂದ ಕಸಿದುಕೊಂಡು ಹೋಗಿಲ್ಲ, ಬದಲಿಗೆ ಬ್ರಿಟಿಷರಿಗೆ ಗಿಫ್ಟ್ ಮಾಡಿದ್ದು ಎಂದು ಕೋರ್ಟಿಗೆ ಹೇಳಲಾಗಿದೆ. ಆದರೆ, ಮಂಗಳವಾರ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ವಜ್ರವನ್ನು ವಾಪಸ್ ತರಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದಿದೆ.[ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು]
ಕಾನೂನಿನಲ್ಲಿ ಅವಕಾಶವೇ ಇಲ್ಲ: ಸ್ವಾತಂತ್ರ್ಯ ನಂತರ ರೂಪುಗೊಂಡ ಭಾರತದ ಕಾನೂನಿನಲ್ಲಿ ವಜ್ರವನ್ನು ವಾಪಸ್ ತರಲು ಯಾವುದೇ ಕ್ರಮ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿರುವ ಈ 105.602 ಕ್ಯಾರೇಟ್ ತೂಗುವ ವಜ್ರ ಹಸ್ತಾಂತರಕ್ಕೆ ಯಾವ ಕ್ರಮ ಅನುಸರಿಸಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಾಲಿಸಿಟರ್ ಜನರಲ್ ರಣಜಿತ್ ಕುಮಾರ್ ಹೇಳಿದ್ದಾರೆ.
ಮಹಾರಾಜ ರಣಜಿತ್ ಸಿಂಗ್ ಅವರು 1849ರ ಸಿಖ್ ಯುದ್ಧ ಸೋತ ಬಳಿಕ ಈಸ್ಟ್ ಇಂಡಿಯಾ ಕಂಪನಿಗೆ ಈ ಬಹುಮೌಲ್ಯದ ವಜ್ರವನ್ನು ಕಾಣಿಕೆಯಾಗಿ ನೀಡಿದ್ದರು.[ಕೊಹಿನೂರು ವಜ್ರ ಭಾರತಕ್ಕೆ ತರುವ ಯತ್ನಕ್ಕೆ ಮರುಜೀವ]
ಈ ರೀತಿ ಪುರಾತನ ಕಲೆ, ಆಭರಣ, ನಿಧಿ ಸಂರಕ್ಷಣೆಗಾಗಿ ಇರುವ Antiquities and Art Treasure ಕಾಯ್ದೆ(1972) ತಿದ್ದುಪಡಿಯಾಗದ ಕಾರಣ ವಜ್ರ ವಾಪಸ್ ತರುವುದು ಕಷ್ಟಕರ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಅಖಿಲ ಭಾರತ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಘಟನೆ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಾಕಿದ ಬಳಿಕೆ ಕೇಂದ್ರ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿದೆ. ಆರು ವಾರಗಳಲ್ಲಿ ಈ ಬಗ್ಗೆ ವಿವರವಾಗಿ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ.
ಪಟ್ಟಿ ದೊಡ್ಡದಿದೆ: ಕೊಹಿನೂರು ವಜ್ರದ ಜೊತೆಗೆ ಟಿಪ್ಪು ಸುಲ್ತಾನ್ ಗೆ ಸೇರಿದ್ದ ನಗ ನಾಣ್ಯ, ಆಭರಣಗಳು, ಬಹದ್ದೂರ್ ಶಾ ಜಾಫರ್,ಝಾನ್ಸಿ ರಾಣಿ, ನವಾಜ್ ಮೀರ್ ಅಹ್ಮದ್ ಆಲಿ ಬಂದಾ ಹಾಗೂ ಇನ್ನೂ ಅನೇಕ ಅರಸರ ಸುಪ್ಪತ್ತಿಗೆಯಿಂದ ಖಾಲಿಯಾದ ಅಮೂಲ್ಯ ವಸ್ತುಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಬೇಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಈ ಅರ್ಜಿಗೂ ಮುನ್ನ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಂದ ಅರ್ಜಿಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಸರ್ಕಾರ, ವಜ್ರವನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಭಾರತದಿಂದ ಬ್ರಿಟಿಷರು ಏನೇನು ಹೊತ್ತುಕೊಂಡು ಹೋದರು ಎಂಬ ಪಟ್ಟಿಯೇ ಇಲ್ಲ ಎಂದು ಭಾರತೀಯ ಸರ್ವೇಕ್ಷಣ ಇಲಾಖೆ(ಎಎಸ್ ಐ) ಹೇಳಿಕೆ ನೀಡಿತ್ತು.
ಈಗ ಭಾರತದ ಜೊತೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಅಷ್ಟೇ ಏಕೆ ದಕ್ಷಿಣ ಆಫ್ರಿಕಾ ಕೂಡಾ ವಜ್ರದಲ್ಲಿ ನಮ್ಮ ಪಾಲು ಇದೆ ಎಂದು ಮುಗಿಬಿದ್ದಿವೆ. ಕೊಹಿನೂರು ವಜ್ರ ಕೊನೆಗೆ ಯಾರ ಕೈ ಸೇರುವುದೋ ಕಾದು ನೋಡಬೇಕಿದೆ. ಸದ್ಯಕ್ಕಂತೂ ಕಾನೂನಿನಲ್ಲಿ ತಿದ್ದುಪಡಿಯಾಗದ ಕಾರಣ ವಜ್ರವನ್ನು ವಾಪಸ್ ತರೆಸಿಕೊಳ್ಳಲು ಸಾಧ್ಯವಿಲ್ಲ.