ಭಾರತದಲ್ಲಿ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆ ಹೆಚ್ಚಳ ನಿರೀಕ್ಷೆ
ಮಿಜೋರಾಂ, ಮಾರ್ಚ್ 5: ಮ್ಯಾನ್ಮಾರ್ ದೇಶದಲ್ಲಿ ಪಕ್ಷುಬ್ಧ ವಾತಾವರಣ ಮುಂದುವರೆದಿದ್ದು, ಸೇನಾ ಹಿಡಿತದಲ್ಲಿರುವ ದೇಶದಿಂದ ತಪ್ಪಿಸಿಕೊಂಡು, ಆಶ್ರಯ ಕೋರಿ ಭಾರತದತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ನುಗ್ಗುವ ನಿರೀಕ್ಷೆ ಕಂಡು ಬಂದಿದೆ.
ಮ್ಯಾನ್ಮಾರ್ ಸೇನೆ ಪ್ರಧಾನಿ ಸೂಕಿ ನಿವಾಸಕ್ಕೆ ನುಗ್ಗಿ, ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಸೇರಿದಂತೆ ಸೂಕಿ ಸಂಪುಟದ ಸಚಿವರು ಮತ್ತು ಸಂಸದರನ್ನು ಗೃಹ ಬಂಧನದಲ್ಲಿ ಇರಿಸಿದೆ. ಸೇನೆ ಹಿಡಿತಕ್ಕೆ ಹೋದ ನಂತರ ಮ್ಯಾನ್ಮಾರ್ ಅಕ್ಷರಶಃ ನರಕವಾಗಿದ್ದು, ಸೇನೆ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಜನ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು ಕೂಡ, ಸೇನಾಧಿಕಾರಿಗಳ ಆಜ್ಞೆ ಮೇರೆಗೆ ಶಾಂತಿ ಕದಡುವ ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ 38 ಜನರನ್ನು ಗುಂಡು ಹಾರಿಸಿ ಕೊಂದು ಹಾಕಿದೆ ಮ್ಯಾನ್ಮಾರ್ ಮಿಲಿಟರಿ.
ಪ್ರಧಾನಿ ನಿವಾಸದ ಬಳಿ ಪ್ರತಿಭಟನಾಕಾರರು, ಮ್ಯಾನ್ಮಾರ್ ಪಿಎಂ ಅಜ್ಞಾತ ಸ್ಥಳಕ್ಕೆ ಶಿಫ್ಟ್..?
ಪರಿಸ್ಥಿತಿ ಹೀಗಿರುವಾಗ ಮ್ಯಾನ್ಮಾರ್ ಪೊಲೀಸ್ ಪಡೆಯ 19 ಸಿಬ್ಬಂದಿ ಗಡಿ ದಾಟಿ ಭಾರತದ ಮಿಜೋರಾಂ ರಾಜ್ಯಕ್ಕೆ ಬಂದು ಆಶ್ರಮ ಕೋರಿದ್ದಾರೆ ಎಂದು ರೈಟರ್ಸ್ ವರದಿ ಮಾಡಿದೆ.
ಮಿಜೋರಾಂನತ್ತ ಬರುತ್ತಿರುವ ನಿರಾಶ್ರಿತರು
ಭಾರತ ಹಾಗೂ ಮ್ಯಾನ್ಮಾರ್ ಗಡಿ 1643 ಕಿ.ಮೀ ಹಂಚಿಕೆಯಾಗಿದೆ. ಮಿಜೋರಾಂನ ಛಂಫಾಯಿ ಹಾಗೂ ಶೇರ್ಛಿಪ್ ಗಡಿ ದಾಟಿ ಈ ಸಿಬ್ಬಂದಿಗಳು ಬಂದಿದ್ದಾರೆ. ಸಿಬ್ಬಂದಿಗಳು ನಿಶಸ್ತ್ರಧಾರಿಗಳಾಗಿದ್ದರು, ಕೆಳ ಸ್ತರದ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಗುಪ್ತಚರ ವರದಿ ಪ್ರಕಾರ ಭಾರತದತ್ತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಕೋರಿ ಮ್ಯಾನ್ಮಾರ್ ಜನರು ಬರಲಿದ್ದಾರೆ.
ಮ್ಯಾನ್ಮಾರ್ ದೇಶದಲ್ಲಿ ಸಂವಹನ ಸಾಧನಗಳನ್ನು ಸೇನೆ ಕಂಟ್ರೋಲ್ಗೆ ತೆಗೆದುಕೊಂಡಿದೆ ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
ಮಿಲಿಟರಿ ಆದೇಶ ಪಾಲಿಸಿ, ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಲು ಮನಸ್ಸಾಗಲಿಲ್ಲ ಹಾಗಾಗಿ, ದೇಶ ತೊರೆದು ಬರಬೇಕಾಯಿತು ಎಂದು ಮ್ಯಾನ್ಮಾರ್ ಪೊಲೀಸ್ ಪಡೆಯ ನಿರಾಶ್ರಿತ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಮಹಿಳೆಯರು, ಮಕ್ಕಳು ಎನ್ನದೆ ಎಲ್ಲರನ್ನು ಕೊಂದ ಸೇನೆ
ಹತ್ಯೆಯಾದವರ ಪೈಕಿ ಮಹಿಳೆಯರು, ಮಕ್ಕಳು ಕೂಡ ಸೇರಿದ್ದು, ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಮತ್ತೆ ಧಗಧಗಿಸುತ್ತಿದೆ. ಸೇನೆ ವಿರುದ್ಧ ಮ್ಯಾನ್ಮಾರ್ನ ಪ್ರಜೆಗಳು ಬೀದಿಗೆ ಇಳಿಯುವಂತೆ ಈ ಘಟನೆ ಮತ್ತೊಮ್ಮೆ ಪ್ರೇರೇಪಿಸಿದೆ.
ಸೇನಾ ದಂಗೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ 38 ಜನರನ್ನು ಕೊಂದು ಹಾಕಿರುವ ಮ್ಯಾನ್ಮಾರ್ ಸೇನೆ ವಿರುದ್ಧ ವಿಶ್ವ ಸಂಸ್ಥೆ ರೊಚ್ಚಿಗೆದ್ದಿದೆ. ಕೆಲದಿನಗಳ ಹಿಂದೆ ಇದೇ ರೀತಿ 18 ಜನರನ್ನ ಹತ್ಯೆ ಮಾಡಿತ್ತು ಮ್ಯಾನ್ಮಾರ್ ಮಿಲಿಟರಿ. ಈ ಘಟನೆ ಮಾಸುವ ಮೊದಲೇ ಮತ್ತೊಮ್ಮೆ ಹೋರಾಟಗಾರರ ಹತ್ಯೆಗೈದಿರುವುದು ಇಡೀ ಜಗತ್ತನ್ನ ಬಡಿದೆಬ್ಬಿಸಿದೆ. ವಿಶ್ವಸಂಸ್ಥೆ ಕೂಡ ಮ್ಯಾನ್ಮಾರ್ ಸೇನಾಧಿಕಾರಿಗಳ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವುದು ದೊಡ್ಡ ಘರ್ಷಣೆಯ ಮುನ್ಸೂಚನೆ ನೀಡಿದೆ. ಆದರೆ ವಿಶ್ವ ಸಂಸ್ಥೆಯ ಎಚ್ಚರಿಕೆ ಹಾಗೂ ಹೇಳಿಕೆ ಬಗ್ಗೆ ಈವರೆಗೂ ಮ್ಯಾನ್ಮಾರ್ ಸೇನೆ ಪ್ರತಿಕ್ರಿಯೆ ನೀಡಿಲ್ಲ.
ಮ್ಯಾನ್ಮಾರ್ ದಂಗೆಯಲ್ಲಿ ಚೀನಾ ಕೈವಾಡ..? ತಜ್ಞರು ಹೇಳೋದು ಏನು ಗೊತ್ತಾ..?
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟ
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ ಗೆದ್ದಿತ್ತು
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು.
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ.
ಮ್ಯಾನ್ಮಾರ್ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ, ಯಾಕೆ?