ಹೆತ್ತವರಿಗಾಗಿ 100 ಕಿ.ಮೀ ನಡೆದ 12ರ ಬಾಲಕಿ ಸೇರಿದ್ದು ಸಾವಿನ ಮನೆ!
ರಾಯಪುರ್, ಏಪ್ರಿಲ್.21: ಎರಡು ತಿಂಗಳ ಹಿಂದೆಯಷ್ಟೇ ತುತ್ತಿನ ಚೀಲ ತುಂಬಿಕೊಳ್ಳಲು ಸಂಬಂಧಿಕರು ಮತ್ತು ಸ್ನೇಹಿತರ ಜೊತೆಗೆ ತೆಲಂಗಾಣಕ್ಕೆ ತೆರಳಿದ 12 ವರ್ಷದ ಮಗಳು ಮನೆಗೆ ಹೆಣವಾಗಿ ವಾಪಸ್ ಆಗಿರುವ ಮನಕಲುಕುವಂತಾ ಘಟನೆ ಛತ್ತೀಸ್ ಗಢದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
Recommended Video
ಎರಡು ತಿಂಗಳಿನ ಹಿಂದೆಯಷ್ಟೇ ಹೆತ್ತವರನ್ನು ತೊರೆದ 12 ವರ್ಷದ ಜಮಾಲೋ ಮದಕಮ್ ಎಂಬ ಬಾಲಕಿ ಹೆತ್ತವರ ನೆರಳಿಗೆ ಸನ್ನಿಹಿತ ಆಗುವುದರೊಳಗೆ ಸಾವಿನ ಮನೆ ಸೇರಿದ್ದಾಳೆ. ಪುಟ್ಟ ಮಗಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಅಮೆರಿಕಾದಿಂದ WHOಗೆ ಪ್ರಶ್ನೆಗಳ ಸರಮಾಲೆ: ಕಾಸು ಕೊಡದಿರಲು ಕಾರಣ?
ಭಾರತ ಲಾಕ್ ಡೌನ್ ನಿಂದಾಗಿ ಹೆತ್ತವರನ್ನು ಸೇರಲು ನಡೆದುಕೊಂಡು ಬಂದ ಜಮಾಲೋ ಮದಕಮ್ ಇನ್ನೇನು ಛತ್ತೀಸ್ ಗಢ ಜಿಲ್ಲೆಯ ಬಿಜಾಪುರ್ ನಲ್ಲಿ ಇರುವ ತಮ್ಮ ಮನೆಗೆ ಸೇರಲು 11 ಕಿಲೋ ಮೀಟರ್ ಬಾಕಿ ಇದೆ ಅನ್ನುವಷ್ಟರಲ್ಲೇ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಮನೆ ಸೇರಲು 100 ಕಿಲೋ ಮೀಟರ್ ನಡಿಗೆ
ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಲಾಗಿದ್ದು ವಾಹನ ಸಂಚಾರಕ್ಕೆಲ್ಲ ಬ್ರೇಕ್ ಬಿದ್ದಿದೆ. ಇದರ ಮಧ್ಯೆ ಏಪ್ರಿಲ್.18ರಂದು ತೆಲಂಗಾಣದಿಂದ ಹೊರಟ 12 ವರ್ಷದ ಜಮಾಲೋ ಮದಕಮ್ 100ಕ್ಕಿಂತ ಹೆಚ್ಚು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಮನೆಗೆ ತೆರಳಲು 11 ಕಿಲೋ ಮೀಟರ್ ಬಾಕಿಯಿದೆ ಎನ್ನುವಷ್ಟಲ್ಲೇ ಅನಾರೋಗ್ಯದಿಂದ ಬಳಲಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ದಂಪತಿ
ಅಂದೋರಮ್ ಮತ್ತು ಸುಖಮತಿ ಮದಕಮ್ ದಂಪತಿಗೆ ಜಮಾಲೋ ಮದಕಮ್ ಏಕೈಕ ಮಗಳಾಗಿದ್ದು ಇತ್ತೀಚಿಗಷ್ಟೇ ಗ್ರಾಮದ ಕೆಲವು ಮಹಿಳೆಯರ ಜೊತೆಗೆ ತೆಲಂಗಾಣದ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸಕ್ಕಾಗಿ ತೆರಳಿದ್ದಳು. ಮೊದಲ ಬಾರಿಗೆ ಹೆತ್ತವರನ್ನು ತೊರೆದು ದುಡಿಮೆಗೆ ತೆರಳಿದ್ದ ಮಗಳು ಶಾಶ್ವತವಾಗಿ ಹೆತ್ತವರಿಂದ ದೂರವಾಗಿದ್ದಾಳೆ. ಜಮಾಲೋ ಮದಕಮ್ ಸಾವಿಗೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಬುಡಕಟ್ಟು ಜನರಿಗೆ ತೆಲಂಗಾಣದಲ್ಲಿಯೇ ದುಡಿಮೆ
ಛತ್ತೀಸ್ ಗಢದಲ್ಲಿ ಇರುವ ಬುಡಕಟ್ಟು ಜನರು ಪ್ರತಿವರ್ಷ ದುಡಿಯುವುದಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಾರೆ. ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದುಡಿಯಲು ಜಮಾಲೋ ಮದಕಮ್ ಕೂಡಾ ತೆಲಂಗಾಣದ ಪೆರೂರ್ ಗ್ರಾಮಕ್ಕೆ ತೆರಳಿದ್ದರು. ಭಾರತ ಲಾಕ್ ಡೌನ್ ಮುಂದುವರಿಕೆಯಿಂದಾಗ ಕೆಲಸವಿಲ್ಲದ ಕಾರಣ ತೆಲಂಗಾಣಕ್ಕೆ ತೆರಳಿದ್ದ ಮಹಿಳೆಯರ ಜೊತೆಗೆ ಮಗಳು ಕೂಡ ಸ್ವಗ್ರಾಮಕ್ಕೆ ವಾಪಸ್ ಆಗಲು ಏಪ್ರಿಲ್.16ರಂದು ಅಲ್ಲಿಂದ ಹೊರಟಿದ್ದರು. ಈ ಪೈಕಿ ಜಮಾಲೋ ಮದಕಮ್ ಸೇರಿದಂತೆ ಮೂವರು ಮಕ್ಕಳು ಹಾಗೂ ಎಂಟು ಮಹಿಳೆಯರು ಸೇರಿ 13 ಜನರಿದ್ದರು.
ಛತ್ತೀಸ್ ಗಢದ ಗಡಿ ಪ್ರವೇಶಿಸುತ್ತಿದ್ದಂತೆ ಬಾಲಕಿ ಸಾವು
ಕಳೆದ ಏಪ್ರಿಲ್.18ರಂದು ಬೆಳಗ್ಗೆ 8 ಗಂಟೆ ಸಂದರ್ಭದಲ್ಲಿ ಛತ್ತೀಸ್ ಗಢದ ಗಡಿ ಪ್ರದೇಶದಲ್ಲಿ ಇರುವ ಬಿಜಾಪುರಕ್ಕೆ ಪ್ರವೇಶಿಸುವ ಹೊತ್ತಿಗೆ 12 ವರ್ಷದ ಬಾಲಕಿ ಜಮಾಲೋ ಮದಕಮ್ ಆರೋಗ್ಯದಲ್ಲಿ ಏರುಪೇರಾಗಿ ಪ್ರಾಣ ಬಿಟ್ಟಿದ್ದಾರೆ. ಅಂದು ಜಮಾಲೋ ಮದಕಮ್ ಸಾವಿನ ಬಗ್ಗೆ ಹೆತ್ತವರಿಗೆ ತಿಳಿಸುವುದಕ್ಕೂ ಆಗದಂತಾ ಸಂದಿಗ್ಧ ಪರಿಸ್ಥಿತಿ ಎದುರಾಗಿತ್ತು. ಏಕೆಂದರೆ ಅಲ್ಲಿದ್ದ 13 ಮಂದಿಯ ಪೈಕಿ ಒಬ್ಬರು ಮಾತ್ರ ಮೊಬೈಲ್ ಹೊಂದಿದ್ದು, ಆ ಫೋನ್ ಕೂಡಾ ಸ್ವಿಚ್ ಆಫ್ ಆಗಿತ್ತು.
13 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ
ಇನ್ನು, 13 ಮಂದಿಯ ತಂಡವು ಬಾಲಕಯ ಮೃತದೇಹದೊಂದಿಗೆ ಭಂಡಾರಪಾಲ್ ಪ್ರದೇಶವನ್ನು ತಲುಪಿತು. ಅಲ್ಲಿ ಸ್ಥಳೀಯರ ನೆರವಿನಿಂದ ಜಮಾಲೋ ಮದಕಮ್ ಹೆತ್ತವರಿಗೆ ಮಗಳ ಸಾವಿನ ಕುರಿತು ಮಾಹಿತಿ ನೀಡಲಾಯಿತು. ತೆಲಂಗಾಣದಿಂದ 13 ಮಂದಿ ಭಂಡಾರಪಾಲ್ ಗೆ ಆಗಮಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡರು. ಬಿಜಾಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಪೂಜಾರಿ ತಮ್ಮ ವೈದ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸಿ ಕೊಟ್ಟಿತು. ವೈದ್ಯಕೀಯ ತಪಾಸಣೆ ವೇಳೆ ಈ 13 ಜನರಲ್ಲಿ ಯಾವುದೇ ಸೋಂಕಿತ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿಯಿತು.
ಏಪ್ರಿಲ್.19ರಂದು ಮಗಳ ಮೃತದೇಹ ಪಡೆದ ಹೆತ್ತವರು
ಮಗಳ ಸಾವಿನ ಸುದ್ದಿ ತಿಳಿದ ಅಂದೋರಮ್ ಮತ್ತು ಸುಖಮತಿ ಮದಕಮ್ ದಂಪತಿ ಮರುದಿನ ಅಂದರೆ ಏಪ್ರಿಲ್.19ರ ಭಾನುವಾರ ಭಂಡಾರಪಾಲ್ ಗ್ರಾಮದಲ್ಲಿ ಇರಿಸಿದ್ದ ಮಗಳ ಮೃತದೇಹವನ್ನು ಪಡೆದು ಅಂತ್ಯಸಂಸ್ಕಾರ ನೆರವೇರಿಸಿದರು. ಕಳೆದ 3 ದಿನಗಳಿಂದ ತೆಲಂಗಾಣದಿಂದ ಛತ್ತೀಸ್ ಗಢದವರೆಗೂ ನಡೆದುಕೊಂಡು ಬಂದಿದ್ದಕ್ಕೆ ಆಯಾಸಗೊಂಡು ಆರೋಗ್ಯದಲ್ಲಿ ಏರುಪೇರಾಗಿ ಜಮಾಲೋ ಮದಕಮ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಮೃತ ಜಮಾಲೋ ಮದಕಮ್ ವೈದ್ಯಕೀಯ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಛತ್ತೀಸ್ ಗಢದಲ್ಲಿ ಉಳಿದ 12 ಮಂದಿಗೆ ದಿಗ್ಬಂಧನ
ತೆಲಂಗಾಣದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿಂದ ಆಗಮಿಸಿದವರಲ್ಲೂ ಸೋಂಕು ತಗಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸೋಂಕು ಪತ್ತೆಯಾಗಿಲ್ಲ. ಹೀಗಿದ್ದರೂ 12 ಜನರನ್ನು ದಿಗ್ಬಂಧನದಲ್ಲಿ ಇರಿಸಿ ನಿಗಾ ವಹಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಇದುವರೆಗೂ ಛತ್ತೀಸ್ ಗಢದಲ್ಲಿ ಕೊರೊನಾ ವೈರಸ್ ನಿಂದ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ. 36 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 25 ಮಂದಿ ಗುಣಮುಖರಾಗಿದ್ದಾರೆ. ಉಳಿದ 11ಸೋಂಕಿತರಿಗೆ ದಿಗ್ಬಂಧನದಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.