ಈ ಬಾರಿ ರೈತರಿಗೆ ಖುಷಿ ನೀಡಲಿದೆಯಂತೆ ಮುಂಗಾರು
ನವದೆಹಲಿ, ಏಪ್ರಿಲ್ 16: ಮಳೆರಾಯನ ಕಣ್ಣಾಮುಚ್ಚಾಲೆಯಿಂದ ಬೇಸೆತ್ತಿರುವ ಕೃಷಿಕರಿಗೆ ಭಾರತೀಯ ಹವಾಮಾನ ಇಲಾಖೆ ಸಂತಸದ ಸುದ್ದಿ ನೀಡಿದೆ.
ಈ ಬಾರಿ ವರುಣ ಭರ್ಜರಿಯಾಗಿ ಸುರಿಯದಿದ್ದರೂ, ಕೃಷಿ ಕ್ಷೇತ್ರ ಮತ್ತು ಒಟ್ಟಾರೆ ಆರ್ಥಿಕ ವಲಯದ ಪಾಲಿಗೆ ಸಕಾರಾತ್ಮಕವಾಗಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಮಳೆ ಕುಂಠಿತ: ದೇಶ 400ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಅಭಾವ
ಮೇ 15ರಂದೇ ಕೇರಳದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿಸಿದೆ.
ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸಹಜ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಕೆ.ಜೆ. ರಮೇಶ್ ಸೋಮವಾರ ತಿಳಿಸಿದರು.
'ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಶೇ 97ರಷ್ಟು ಪ್ರಮಾಣದಲ್ಲಿ ಸುರಿಯಲಿದೆ. ನಾಲ್ಕು ತಿಂಗಳ ದೀರ್ಘಾವಧಿ ಸರಾಸರಿ (ಎಲ್ಪಿಎ) ಉತ್ತಮ ಮಟ್ಟದಲ್ಲಿ ಇರಲಿದ್ದು, ಶೇ 5ರಷ್ಟು ಪ್ರಮಾಣ ಹೆಚ್ಚು ಕಡಿಮೆ ಆಗಬಹುದು.
ಮೇ-ಜೂನ್ ತಿಂಗಳ ಅವಧಿಯಲ್ಲಿ ಬಿಸಿಗಾಳಿ ಎದುರಿಸಲು ಸಿದ್ಧರಾಗಿ
ಸ್ಕೈಮೆಟ್ ವೆದರ್ ಎಂಬ ಖಾಸಗಿ ಹವಾಮಾನ ಸಂಸ್ಥೆ ಕೂಡ ಕೆಲವು ವಾರಗಳ ಹಿಂದೆ ಇದೇ ರೀತಿಯ ವರದಿ ನೀಡಿತ್ತು. ಎಲ್ಪಿಎದಲ್ಲಿ ಮಳೆಯ ಪ್ರಮಾಣ ಶೇ 96-104 ರಷ್ಟಿದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಶೇ 104-110 ಪ್ರಮಾಣದ ಮಳೆಯನ್ನು ಸಾಮಾನ್ಯಕ್ಕಿಂತ ಅಧಿಕ ಎನ್ನಲಾಗುತ್ತದೆ.
India is going to experience third successful normal monsoon with a quantitative figure of 97% (+-5) in 2018: KJ Ramesh, director general of meteorology at the IMD pic.twitter.com/taw4d0DI0U
— ANI (@ANI) 16 April 2018
ಮಳೆ ಧಾರಾಕಾರವಾಗಿ ಸುರಿಯದಿದ್ದರೂ, ಮುಂಗಾರು ಅವಧಿಯಲ್ಲಿ ಮಳೆಯ ಕೊರತೆಯಂತೂ ದೇಶವನ್ನು ಬಾಧಿಸುವುದಿಲ್ಲ ಎಂದು ರಮೇಶ್ ಭರವಸೆ ವ್ಯಕ್ತಪಡಿಸಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, ಶೇ 42ರಷ್ಟು ಸಾಮಾನ್ಯ ಮಳೆಯಾಗಲಿದೆ. ಶೇ 12ರಷ್ಟು ಸಾಮಾನ್ಯಕ್ಕಿಂತ ಅಧಿಕ ಮಳೆಯ ಸಾಧ್ಯತೆ ಇದೆ.
ಸತತ ಮೂರನೇ ವರ್ಷ ಹವಾಮಾನ ಇಲಾಖೆ ಸಾಮಾನ್ಯ ಮಳೆಯ ಮುನ್ಸೂಚನೆ ನೀಡಿದೆ. ಕಳೆದ ವರ್ಷ ಮಾನ್ಸೂನ್ ಅವಧಿಯಲ್ಲಿ ಶೇ 95ರಷ್ಟು ಮಳೆಯಾಗಿದ್ದರೆ, 2016ರಲ್ಲಿ ಶೇ 96ರಷ್ಟು ಮಳೆಯಾಗಿತ್ತು.
2014 ಮತ್ತು 2015 ಎರಡೂ ಇಸವಿಗಳಲ್ಲಿ ದೇಶದಾದ್ಯಂತ ಮಳೆಯ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ಬಹುತೇಕ ರಾಜ್ಯಗಳು ಬರಪೀಡಿತವಾಗಿದ್ದವು.
ಸಾಮಾನ್ಯ ಮಳೆಯು ಕೃಷಿ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ ಒಟ್ಟಾರೆ ಗ್ರಾಮೀಣ ಆರ್ಥಿಕತೆಯ ಮೇಲೆ ಮಹತ್ವದ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಇಲಾಖೆ ಹೇಳಿದೆ.