ಅಫ್ಘಾನ್ ಬಿಕ್ಕಟ್ಟು; ತ್ವರಿತ ಪರಿಶೀಲನೆಗೆ ಹೊಸ ಇ-ವೀಸಾ ಪರಿಚಯಿಸಿದ ಭಾರತ
ನವದೆಹಲಿ, ಆಗಸ್ಟ್ 17: ತಾಲಿಬಾನ್ ವಶವಾಗಿರುವ ಅಘ್ಫಾನಿಸ್ತಾನ ತೊರೆದು ಭಾರತಕ್ಕೆ ಮರಳುವ ಅಫ್ಘನ್ನರ ಅರ್ಜಿಗಳನ್ನು ತ್ವರಿತಗತಿಯಲ್ಲಿ ಸ್ವೀಕರಿಸಲು ಕೇಂದ್ರ ಸರ್ಕಾರ ಮಂಗಳವಾರ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ ಪರಿಚಯಿಸುವುದಾಗಿ ಘೋಷಣೆ ಮಾಡಿದೆ. ಈ ಹೊಸ ವೀಸಾ ವರ್ಗಕ್ಕೆ "e-Emergency X-Misc Visa" ಎಂದು ಕರೆಯಲಾಗುತ್ತಿದೆ.
ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಸಾವಿರಾರು ಜನರು ಅಲ್ಲಿಂದ ಪಾರಾಗಲು ಹೆಣಗುತ್ತಿದ್ದಾರೆ.
ಅಫ್ಘಾನಿಸ್ತಾನದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗೃಹ ವ್ಯವಹಾರಗಳ ಸಚಿವಾಲಯ ವೀಸಾ ನಿಬಂಧನೆಗಳನ್ನು ಪರಿಶೀಲಿಸುತ್ತಿದೆ. ಎಲೆಕ್ಟ್ರಾನಿಕ್ ವೀಸಾದ ಹೊಸ ವರ್ಗದ "ಇ ಎಮರ್ಜೆನ್ಸಿ ವೀಸಾ" ವಿಭಾಗವನ್ನು ಭಾರತಕ್ಕೆ ಬರುವವರ ಅರ್ಜಿಯನ್ನು ವೇಗವಾಗಿ ಪರಿಶೀಲಿಸಲು ಪರಿಚಯಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.
20 ವರ್ಷಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ದೇಶದಿಂದ ಸಾವಿರಾರು ಮಂದಿ ಓಡಿಹೋಗಲು ಕಾಬೂಲ್ ವಿಮಾನದತ್ತ ನುಗ್ಗುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಾಲಿಬಾನ್ನ ಸಶಸ್ತ್ರದಳ ಅನೇಕ ಪ್ರದೇಶಗಳಿಗೆ ನುಗ್ಗಿ ಹಿಂಸೆ ನಡೆಸುತ್ತಿದೆ. ಅಫ್ಘಾನಿಸ್ತಾನದ ಸೈನಿಕರು ಹಾಗೂ ಪೊಲೀಸರನ್ನು ಕಂಡರೆ ಅಲ್ಲೇ ಗುಂಡಿಕ್ಕಿ ಸಾಯಿಸುತ್ತಿದ್ದಾರೆ.
ಅಫ್ಘಾನ್ನಿಂದ ಸೇನಾ ವಾಪಸ್ ನಿರ್ಧಾರಕ್ಕೆ ಬದ್ಧನಾಗಿ ನಿಂತಿದ್ದೇನೆ; ಬೈಡನ್
ಹೀಗಾಗಿ ಅಫ್ಘಾನಿಸ್ತಾನದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಹಾಗೂ ಅಲ್ಲಿ ಭಾರತದ ಹಿತಾಸಕ್ತಿ ಕಾಪಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ವಿದೇಶಾಂಗ ಇಲಾಖೆ ಸೋಮವಾರ ಹೇಳಿಕೆ ನೀಡಿದೆ. ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನಿರಂತರವಾಗಿ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ವಿ ಈ ಕುರಿತು ಮಾತನಾಡಿದ್ದಾರೆ. "ಭಾರತ ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದೆ. ಆ ದೇಶ ತೊರೆಯಲು ಇಚ್ಚಿಸುವವರನ್ನು ವಾಪಸ್ ಕರೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತೇವೆ" ಎಂದು ಹೇಳಿದ್ದಾರೆ.
ಭಾನುವಾರವೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ. 126 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ರಾತ್ರಿ ದೆಹಲಿಗೆ ಬಂದಿದೆ. ಇನ್ನೂ 200 ಜನರು ಕಾಬೂಲ್ನಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಆತಂಕ ಮೂಡಿಸಿದೆ. ಕಾಬೂಲ್ ನಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸೇರಿದಂತೆ ಸುಮಾರು 200 ಭಾರತೀಯರು ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಐಟಿಬಿಪಿ ಸಿಬ್ಬಂದಿಗಳು ಭಾರತೀಯರಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ಅವರನ್ನು ಶೀಘ್ರವೇ ಸುರಕ್ಷಿತವಾಗಿ ಕರೆಸಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.ಅಫ್ಘಾನಿಸ್ತಾನದ ರಾಜಕೀಯ ಪಕ್ಷಗಳು ವಿದೇಶಿಯರು ಸುರಕ್ಷಿತವಾಗಿ, ಗೌರವಯುತವಾಗಿ ಪ್ರಯಾಣ ಮಾಡಲು ಅವಕಾಶ ನೀಡಬೇಕು ಎಂದು ವಿಶ್ವ ಸಮುದಾಯ ಸೋಮವಾರ ಆಗ್ರಹಿಸಿದೆ.
ಅಲ್ಬೇನಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಮಾಸ್, ಬೆಲ್ಜಿಯಂ, ಬುರ್ಕಿನಾ ಫಾಸೊ, ಕೆನಡಾ, ಚಿಲಿ, ಕೊಲಂಬಿಯಾ ಸೇರಿದಂತೆ ವಿವಿಧದ ದೇಶಗಳು ಒಟ್ಟಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅಂತರಾಷ್ಟ್ರೀಯ ಸಮುದಾಯವಾಗಿ ನಾವು ಎಲ್ಲಾ ರೀತಿಯ ನೆರವನ್ನು ನೀಡಲು ಸಿದ್ಧ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ತುರ್ತು ಸಭೆ ನಡೆಸಿದೆ.
Recommended Video