ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
ನವದೆಹಲಿ, ಜನವರಿ 27: ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳು ಅಭಿವೃದ್ಧಿಯಾಗಿಬಿಟ್ಟರೆ ಸಾಕು ಎಂದು ಕೆಲವೇ ದಿನಗಳ ಹಿಂದೆ ಇಡೀ ವಿಶ್ವವೇ ಕಾತರಿಸುತ್ತಿತ್ತು. ಈಗಲೂ ಎಷ್ಟೋ ದೇಶಗಳಿಗೆ ಕೊರೊನಾ ಲಸಿಕೆ ಲಭ್ಯವಾಗಿಲ್ಲ. ಆದರೆ ಪ್ರಸ್ತುತ ಭಾರತದಲ್ಲಿ ಕೊರೊನಾ ಲಸಿಕೆಯ ಬಗ್ಗೆ ಚಿತ್ರಣವೇ ತದ್ವಿರುದ್ಧವಾಗಿರುವಂತೆ ತೋರುತ್ತಿದೆ. ಇಲ್ಲಿ ಲಸಿಕೆಗಳು ಸಾಕಷ್ಟು ಇವೆ. ಆದರೆ ಲಸಿಕೆ ತೆಗೆದುಕೊಳ್ಳಲು ಜನರ ಕೊರತೆ ಎದುರಾಗಿದೆ.
ಜನವರಿ 16ರಿಂದ ಭಾರತದಾದ್ಯಂತ ಬೃಹತ್ ಲಸಿಕಾ ಕಾರ್ಯಕ್ರಮ ಆರಂಭಗೊಂಡಿತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಲಸಿಕೆಗಳನ್ನು ತೆಗೆದುಕೊಳ್ಳಲು ಆರೋಗ್ಯ ಕಾರ್ಯಕರ್ತರೇ ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಮುಂದೆ ಓದಿ...
"ಲಸಿಕೆ ಸುರಕ್ಷತೆ ಬಗ್ಗೆ ನಂಬಿಕೆ ಇಲ್ಲ"
ಆರೋಗ್ಯ ಕಾರ್ಯಕರ್ತರು ಲಸಿಕೆಗೆ ಹಿಂದೇಟು ಹಾಕಲು ಬಹುಮುಖ್ಯ ಕಾರಣ ಲಸಿಕೆ ಸುರಕ್ಷತೆ ಬಗೆಗಿನ ಗೊಂದಲ. ಸದ್ಯಕ್ಕೆ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಒಳಪಡುವ ಮುನ್ನವೇ ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡಲಾಗಿದೆ. ಹೀಗಾಗಿ ಈ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಎಲ್ಲರೂ ನಮ್ಮನ್ನು ಒಪ್ಪಿಕೊಂಡಿದ್ದಾರೆ, ನೀವೂ ಒಪ್ಪಿಕೊಳ್ಳಿ: ಭಾರತಕ್ಕೆ ಫೈಜರ್ ಬೇಡಿಕೆ
ತಗ್ಗುತ್ತಿರುವ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ
ಸೋಮವಾರ ಕೇವಲ 56% ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕಾ ಕಾರ್ಯಕ್ರಮದ ಮೊದಲ ಹಂತದಲ್ಲಿ ಸುಮಾರು 300 ಮಿಲಿಯನ್ ಮಂದಿಗೆ ಲಸಿಕೆ ನೀಡುವ ಯೋಜನೆಯಿದ್ದು, ಈ ಸಂಖ್ಯೆ ಹೀಗೇ ತಗ್ಗುತ್ತಾ ಹೋದರೆ ಮುಂದಿನ ಹಂತದ ಲಸಿಕಾ ಕಾರ್ಯಕ್ರಮಕ್ಕೂ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
40% ಆರೋಗ್ಯ ಕಾರ್ಯಕರ್ತರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿಲ್ಲ
ಭಾರತದಲ್ಲಿ ಕೊರೊನಾ ಲಸಿಕೆ ಕುರಿತು ಕೆಲವು ಸಮೀಕ್ಷೆಗಳು ನಡೆದಿದ್ದು, ಅದರ ಪ್ರಕಾರ ಇನ್ನೂ 40% ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆಗಳನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದು ತಿಳಿದುಬಂದಿದೆ. ಕೆಲವು ದೇಶಗಳಲ್ಲಿ ಲಸಿಕೆಗಳ ಕೊರತೆಯಿಂದಾಗಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ.
ಹಂತಹಂತವಾಗಿ ಇನ್ನಷ್ಟು ಲಸಿಕೆ ಪೂರೈಕೆ ಭರವಸೆ ಕೊಟ್ಟ ಭಾರತ
ಸರ್ಕಾರಕ್ಕೆ ಸದ್ಯಕ್ಕಿರುವುದೊಂದೇ ದಾರಿ
ನಮ್ಮ ಸಂಸ್ಥೆಯ ಹಲವು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಳ್ಳಲು ಸಿದ್ಧರಿಲ್ಲ. ಅದು ಎಷ್ಟು ಪರಿಣಾಮಕಾರಿ ಎಂಬುದೂ ಸಾಬೀತಾಗಿಲ್ಲ ಎನ್ನುತ್ತಾರೆ ದೆಹಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ನಿವಾಸಿ ವೈದ್ಯರ ಸಂಘದ ಸದಸ್ಯ ಆದರ್ಶ ಪ್ರತಾಪ್ ಸಿಂಗ್. ಈ ಲಸಿಕೆಯ ಮಾಹಿತಿ, ಸಾಕ್ಷ್ಯ, ಪ್ರಯೋಗಗಳ ದತ್ತಾಂಶಗಳನ್ನು ಒದಗಿಸಿ ಈ ಬಗ್ಗೆ ಮುಕ್ತ ಚರ್ಚೆ ಮಾಡಿ ಜನರಲ್ಲಿ ಲಸಿಕೆ ಬಗ್ಗೆ ನಂಬಿಕೆ ತರುವ ಕೆಲಸವನ್ನು ಸರ್ಕಾರ ಮಾಡಿದರೆ ಲಸಿಕೆ ಬಗ್ಗೆ ಹಿಂಜರಿತ ಹೋಗಬಹುದು ಎಂದು ಹೇಳಿದ್ದಾರೆ.
"ಭವಿಷ್ಯದಲ್ಲಿ ಸೋಂಕು ಯಾವ ರೂಪವನ್ನಾದರೂ ತಾಳಬಹುದು"
"ಆರೋಗ್ಯ ಕಾರ್ಯಕರ್ತರು ಲಸಿಕೆ ತೆಗೆದುಕೊಳ್ಳಲು ಹಿಂಜರಿಯುವುದು ಕೊನೆಯಾಗಬೇಕು. ಸರ್ಕಾರದ ಪರವಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ. ಭವಿಷ್ಯದಲ್ಲಿ ಈ ಪರಿಸ್ಥಿತಿ ಕೈ ಮೀರಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಈಗಿನಿಂದಲೇ ಜಾಗೃತರಾಗಿ" ಎಂದು ಲಸಿಕೆ ಯೋಜನಾ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮನವಿ ಮಾಡಿದ್ದಾರೆ.