ಕಾಬೂಲ್ ಗುರುದ್ವಾರ ದಾಳಿ: 111 ಸಿಖ್, ಹಿಂದೂಗಳಿಗೆ ಭಾರತದ ಇ-ವೀಸಾ
ನವದೆಹಲಿ, ಜೂನ್ 19: ಅಫ್ಗಾನಿಸ್ತಾನದ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದ ನೂರಕ್ಕೂ ಹೆಚ್ಚು ಮಂದಿಗೆ ಭಾರತ ಸರಕಾರ ಇ-ವೀಸಾ ನೀಡಿದೆ. ನಿನ್ನೆ ಶನಿವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಗರದಲ್ಲಿ ಗುರುದ್ವಾರವೊಂದರ ಮೇಲೆ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.
ಕಾಬೂಲ್ ಬಳಿಯ ಬಾಗ್-ಎ ಬಾಲಾ ಪ್ರದೇಶದಲ್ಲಿರುವ ಕಾರ್ತೆ ಪರವಾನ್ ಗುರುದ್ವಾರದಲ್ಲಿ ಶನಿವಾರ ಎಸಗಲಾದ ಬಾಂಬ್ ಸ್ಫೋಟಗಳಲ್ಲಿ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದಾರೆ. ಸತ್ತವರಲ್ಲಿ ಸಿಖ್ ಧರ್ಮೀಯ ವ್ಯಕ್ತಿಯೊಬ್ಬರೂ ಇದ್ದಾರೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಗುರುದ್ವಾರದ ಮೇಲೆ ದಾಳಿ : ಪ್ರವಾದಿ ಅವಮಾನಕ್ಕೆ ಪ್ರತೀಕಾರ ಎಂದ ಉಗ್ರ ಸಂಘಟನೆ
ಇದು ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಪಕ್ಷದವರು ಮಾಡಿದ ಅವಹೇಳನಕಾರಿ ಹೇಳಿಕೆಗಳಿಗೆ ಪ್ರತೀಕಾರವಾಗಿ ನಡೆದ ದಾಳಿ ಎಂದು ಐಸಿಸ್ ಹೇಳಿದೆ. ಕೆಲ ದಿನಗಳ ಹಿಂದೆಯೇ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಅಫ್ಗಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿಸಿ ಪ್ರತೀಕಾರದ ದಾಳಿ ಎಸಗುವುದಾಗಿ ಹೇಳಿತ್ತು. ಅದು ಎಚ್ಚರಿಕೆ ಕೊಟ್ಟಂತೆಯೇ ಶನಿವಾರ ದಾಳಿಯಾಗಿದೆ.
|
ಸಿಖ್, ಹಿಂದೂಗಳಿಗೆ ಭಾರತದ ಆಶ್ರಯ
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅಕ್ಷರಶಃ ಪ್ರಾಣಭಯದಲ್ಲಿ ಇರುವ ಅಫ್ಗನ್ ಸಿಖ್ ಮತ್ತು ಹಿಂದೂಗಳಿಗೆ ಭಾರತದ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಶನಿವಾರದ ದಾಳಿ ಘಟನೆ ಬಳಿಕ 111 ಸಿಖ್ ಮತ್ತು ಹಿಂದುಗಳಿಗೆ ಇ-ವೀಸಾಗಳನ್ನು ಒದಗಿಸಲಾಗಿದೆ. ಸಿಖ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ವಿಕ್ರಮ್ಜೀತ್ ಸಿಂಗ್ ಸಾಹನಿ ಈ ವಿಚಾರವನ್ನು ಟ್ವೀಟ್ ಮಾಡಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಹೇಳಿದ್ಧಾರೆ.
ಅಫ್ಘಾನಿಸ್ತಾನದಲ್ಲಿರುವ ಇನ್ನುಳಿದ ಸಿಖ್ ಮತ್ತು ಹಿಂದೂಗಳನ್ನು ಅಲ್ಲಿಂದ ತೆರವುಗೊಳಿಸಿ ಭಾರತಕ್ಕೆ ಕರೆತರುವ ಯೋಜನೆ ಇದೆ. ಈ ಎಲ್ಲಾ ಅಫ್ಗಾನ್ ನಿರಾಶ್ರಿತರಿಗೆ ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಕಾಬೂಲ್ ಗುರುದ್ವಾರದಲ್ಲಿ ಸ್ಫೋಟ: 2 ಸಾವು, ISIS ನಂಟು ಶಂಕೆ; MEA ಮೇಲ್ವಿಚಾರಣೆ ಪರಿಸ್ಥಿತಿ
ದೊಡ್ಡ ದಾಳಿ ತಪ್ಪಿತು
ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ದಾಳಿ ನಡೆಸಲು ಐಸಿಸ್ ಮೊದಲೇ ಯೋಜಿಸಿತ್ತು. ಶನಿವಾರ ಬೆಳಗ್ಗೆ ದಾಳಿ ನಡೆದಾಗ ಗುರುದ್ವಾರದ ಒಳಗೆ 30 ಮಂದಿ ಇದ್ದರೆನ್ನಲಾಗಿದೆ. ಕಟ್ಟಡದೊಳಗೆ ಸ್ಫೋಟಗೊಳಿಸುವ ಐಸಿಸ್ ಪ್ರಯತ್ನ ಸಾಧ್ಯವಾಗಲಿಲ್ಲ. ಸ್ಫೋಟಗಳನ್ನು ತುಂಬಿದ್ದ ವಾಹನವು ಗುರುದ್ವಾರದ ಹೊರಗೆ ಸ್ಫೋಟವಾಗಿದೆ. ಆಗ ಯಾವುದೇ ಪ್ರಾಣಹಾನಿಯಾಗಲಿಲ್ಲ. ನಂತರ ಉಗ್ರರು ಕೈಬಾಂಬುಗಳನ್ನು ಎಸೆದಿದ್ದಾರೆ. ಇದರಿಂದ ಗುರುದ್ವಾರದ ಗೇಟ್ ಬಳಿ ಬೆಂಕಿ ಹೊತ್ತಿಕೊಂಡಿತು ಎಂದು ಅಫ್ಘಾನಿಸ್ತಾನ ಸರಕಾರದ ಆಂತರಿಕ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಈ ಘಟನೆಯಲ್ಲಿ ತಾಲಿಬಾನ್ನ ಭದ್ರತಾ ಪಡೆಗಳು ಮೂರು ದಾಳಿಕೋರರನ್ನು ಕೊಂದುಹಾಕುವಲ್ಲಿ ಯಶಸ್ವಿಯಾದರು. ಒಂದು ವೇಳೆ, ಐಸಿಸ್ನವರು ಯೋಜಿಸಿದಂತೆ ಗುರುದ್ವಾರದೊಳಗೆ ಬಾಂಬ್ ಸ್ಫೋಟಗಳಾಗಿದ್ದರೆ ಸಾಕಷ್ಟು ಸಾವು ನೋವುಗಳಾಗುವ ಪ್ರಮಾತ ಇತ್ತು. ಅದೃಷ್ಟಕ್ಕೆ ಅದು ತಪ್ಪಿದೆ.
ಪ್ರಧಾನಿ ಮೋದಿ ಖಂಡನೆ
ಅಫ್ಘಾನಿಸ್ತಾನದಲ್ಲಿ ಗುರುದ್ವಾರದ ಮೇಲೆ ನಡೆದ ದಾಳಿ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಖಂಡಿಸಿದ್ದಾರೆ.
"ಕಾಬೂಲ್ನಲ್ಲಿರುವ ಕಾರ್ತೆ ಪರವಾನ್ ಗುರುದ್ವಾರದ ಮೇಲೆ ನಡೆದ ನೀಚ ಉಗ್ರ ದಾಳಿಯಿಂದ ಆಘಾತವಾಗಿದ್ದೇನೆ. ಈ ಕ್ರೌರ್ಯ ಘಟನೆಯನ್ನು ನಾನು ಖಂಡಿಸುತ್ತೇನೆ. ಭಕ್ತರ ಸುರಕ್ಷತೆಗೆ ನಾನು ಪ್ರಾರ್ಥಿಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ಧಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೂಡ ಈ ದಾಳಿ ಘಟನೆಯನ್ನು ಬಲವಾಗಿ ಖಂಡಿಸಿದ್ದಾರೆ.
ನಾಮಾವಶೇಷಗೊಳ್ಳುತ್ತಿರುವ ಸಿಖ್ಖರು
ಅಫ್ಗಾನಿಸ್ತಾನದಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಸಿಖ್ ಮತ್ತು ಹಿಂದೂ ಸಮುದಾಯದವರು ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿದ್ಧಾರೆ. ಒಂದು ಅಂದಾಜಿನಂತೆ ಅಲ್ಲಿ ಈ ಎರಡೂ ಸಮುದಾಯವರನ್ನು ಸೇರಿಸಿದರೆ ಸಾವಿರ ಕೂಡ ಆಗುವುದಿಲ್ಲ. ಕೆಲವೇ ನೂರು ಸಂಖ್ಯೆಯಲ್ಲಿ ಇವರಿದ್ದಾರೆ.
ಇರುವ ಬೆರಳೆಣಿಕೆಯ ಸಿಖ್ ಮತ್ತು ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನ ನಿರಂತರವಾಗಿ ನಡೆದೇ ಇದೆ. ಹೀಗಾಗಿ, ಬಹುಮಂದಿ ಭಾರತಕ್ಕೆ ಆಶ್ರಯಕ್ಕಾಗಿ ಬರುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಒಟ್ಟೂ ಸಿಖ್ ಮತ್ತು ಹಿಂದೂ ಸಮುದಾಯದವರಲ್ಲಿ ಬಹುತೇಕರು ಕಾಬೂಲ್ ನಗರದಲ್ಲೇ ಇದ್ದಾರೆ. ಈ ನಗರದಲ್ಲಿ ಒಂದು ಕಾಲದಲ್ಲಿ ಐದು ಗುರುದ್ವಾರಗಳಿದ್ದವು. ಈಗ ಉಳಿದಿರುವುದು ಒಂದೆರಡು ಮಾತ್ರವೇ. ಈಗ ಉಗ್ರರು ಆ ಗುರುದ್ವಾರದ ಮೇಲೂ ಮಾರಿ ಕಣ್ಣಿಟ್ಟಿದ್ದಾರೆ.
ಎರಡು ವರ್ಷದ ಹಿಂದಿನ ಘೋರ ದಾಳಿ
ಎರಡು ವರ್ಷಗಳ ಹಿಂದೆ 2020ರ ಮಾರ್ಚ್ ತಿಂಗಳಲ್ಲಿ ಕಾಬೂಲ್ ನಗರದ ಹೃದಯ ಭಾಗದಲ್ಲೇ ಇರುವ ಹರ್ ರಾಯ್ ಸಾಹಿಬ್ ಗುರುದ್ವಾರದ ಮೇಲೆ ಆತ್ಮಾಹುತಿ ದಾಳಿಕೋರನೊಬ್ಬ ದಾಳಿ ಎಸಗಿದ್ದ. ಆ ಘೋರ ಘಟನೆಯಲ್ಲಿ 25ಕ್ಕೂ ಹೆಚ್ಚು ಸಿಖ್ ಧರ್ಮೀಯರು ಬಲಿಯಾಗಿಹೋಗಿದ್ದರು. ಶೋರ್ ಬಜಾರ್ ಪ್ರದೇಶದಲ್ಲಿದ್ದ ಆ ಗುರುದ್ವಾರದ ಮೇಲಿನ ದಾಳಿಯನ್ನು ತಾನೇ ಮಾಡಿದ್ದಾಗಿ ಐಸಿಸ್ ಹೇಳಿಕೊಂಡಿತ್ತು. ಇದು ಸಿಖ್ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ನಡೆದ ಅತಿ ಘೋರ ದಾಳಿ ಘಟನೆಗಳಲ್ಲಿ ಒಂದೆನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)