ಚೀನಾದ ಹೊಸ ಕಾನೂನು: ಕಳವಳ ವ್ಯಕ್ತಪಡಿಸಿದ ಭಾರತ ಸರ್ಕಾರ
ಬೀಜಿಂಗ್ ಅಕ್ಟೋಬರ್ 27: ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಸಿದೆ. ಈ ಚೀನಾದ ಹೊಸ ಕಾನೂನಿನ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಇದನ್ನು "ಏಕಪಕ್ಷೀಯ ಕ್ರಮ" ಎಂದು ಕರೆದ ಸರ್ಕಾರ, "ಈ ಕಾನೂನು ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಬಹುದು. ಈ ಕಾನೂನಿನ ನೆಪದಲ್ಲಿ ಚೀನಾ ಕ್ರಮ ಕೈಗೊಳ್ಳುವುದನ್ನು ತಪ್ಪಿಸುತ್ತದೆ" ಎಂದು ಭಾರತ ಸರ್ಕಾರ ಹೇಳಿದೆ.
ಚೀನಾದ ರಾಜ್ಯ ಮಾಧ್ಯಮದ ಪ್ರಕಾರ, ಶನಿವಾರ ಅಂಗೀಕರಿಸಿದ ಹೊಸ ಕಾನೂನಿನ ಅಡಿಯಲ್ಲಿ, ಚೀನಾವು "ಪ್ರಾದೇಶಿಕ ಸಮಗ್ರತೆ, ಭೂ ಗಡಿಗಳನ್ನು ರಕ್ಷಿಸಲು, ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಭೂ ಗಡಿಗಳನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯದ ವಿರುದ್ಧ" ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತಂದಿದೆ. ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ. ಭಾರತದೊಂದಿಗೆ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ನೂತನ ಕಾನೂನನ್ನು ತಂದಿರುವುದು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂದರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ. ಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.
ಭಾರತ ಮತ್ತು ಭೂತಾನ್ನೊಂದಿಗೆ ಚೀನಾ ಇನ್ನೂ ಗಡಿ ಒಪ್ಪಂದಗಳನ್ನು ಅಂತಿಮಗೊಳಿಸಿಲ್ಲ. ಚೀನಾವು ಇತರ 12 ದೇಶಗಳೊಂದಿಗಿನ ಗಡಿ ವಿವಾದವನ್ನು ಈಗಾಗಲೇ ಬಗೆಹರಿಸಿಕೊಂಡಿದೆ. ಈ ಹೊಸ ಕಾನೂನು ಭಾರತದೊಂದಿಗಿನ ಚೀನಾದ ಗಡಿ ವಿವಾದದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ (ಎನ್ಪಿಸಿ) ಸ್ಥಾಯಿ ಸಮಿತಿಯ ಸದಸ್ಯರು ಶನಿವಾರ ನಡೆದ ಶಾಸಕಾಂಗ ಅಧಿವೇಶನದ ಸಮಾರೋಪ ಸಭೆಯಲ್ಲಿ ಕಾನೂನನ್ನು ಅನುಮೋದಿಸಿದರು ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 'ಮುಂದಿನ ವರ್ಷ ಜನವರಿ 1ರಿಂದ ಕಾನೂನು ಜಾರಿಗೊಳ್ಳಲಿದೆ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯು ಪವಿತ್ರವಾಗಿದ್ದು, ಇದನ್ನು ಯಾರಿಂದಲೂ ಉಲ್ಲಂಘಿಸಲು ಸಾಧ್ಯವಿಲ್ಲ' ಎಂದು ವರದಿ ಹೇಳಿದೆ.
Recommended Video
ಭಾರತ-ಚೀನಾ ಗಡಿ ಪ್ರದೇಶದಲ್ಲಿ ಐಟಿಬಿಪಿಯ ಹೊಸ ಗಡಿ ಠಾಣೆ ಸ್ಥಾಪಿಸಲು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಐಟಿಬಿಪಿಯ 60ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, '' ಕಳೆದ ವರ್ಷ ಸರ್ಕಾರ 47 ಗಡಿ ಠಾಣೆ ಸ್ಥಾಪಿಸಲು ಅನುಮೋದನೆ ನೀಡಿತ್ತು. 8 ಸಾವಿರ ಯೋಧರನ್ನು ಒಳಗೊಂಡ 7 ನೂತನ ಬೆಟಾಲಿಯನ್ ಕೂಡ ಶೀಘ್ರದಲ್ಲಿಯೇ ಸ್ಥಾಪನೆಯಾಗಲಿದೆ'' ಎಂದಿದ್ದಾರೆ. ಹಲವು ಸುತ್ತುಗಳ ಮಾತುಕತೆ ಬಳಿಕವೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ದುಸ್ಸಾಹಸ ಮುಂದುವರೆಸಿದ ಚೀನಾ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಭೂಗಡಿ ಕಾನೂನಿಗೆ ಅಂಗೀಕಾರ ಪಡೆದುಕೊಂಡಿದೆ.