ತಂಬಾಕು ಉತ್ಪನ್ನಗಳ ಸೇವನೆಯಲ್ಲಿ ಶೇ 17ರಷ್ಟು ಇಳಿಕೆ, ಕಾರಣ ಏನು ಗೊತ್ತೆ?
ಬೆಂಗಳೂರು, ಜುಲೈ 4: ಭಾರತದಲ್ಲಿ ತಂಬಾಕು ಸೇವನೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಕೇಂದ್ರ ಸರಕಾರ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 2010 ರಿಂದ ಇಲ್ಲಿವರೆಗೆ ಯುವ ಸಮುದಾಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಪ್ರಮಾಣ ಶೇ 17ರಷ್ಟು ಇಳಿಕೆಯಾಗಿದೆ.
ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!
ಭಾರತದಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಸಾರ್ವಜನಿಕ ಆರೋಗ್ಯ ಕಾನೂನುಗಳಿಂದಾಗಿ ಈ ಇಳಿಕೆ ಆಗಿದ್ದು, ಸಾವಿರಾರು ಜೀವಗಳನ್ನು ಉಳಿಸಿದೆ. ಈ ಅಂಶವನ್ನು ಭಾರತದ ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ (ಜಿಎಟಿಎಸ್) ದೃಢಪಡಿಸಿದೆ.
ಮನುಕುಲಕ್ಕೆ ಮಾರಕವಾದ ತಂಬಾಕು ತ್ಯಜಿಸಲು ಈ ದಿನ ಸಕಾಲ
ಈ ಇಳಿಕೆ ಪ್ರಮಾಣ ಯುವ ಸಮುದಾಯದಲ್ಲಿ ಹೆಚ್ಚಿದೆ. 15 ರಿಂದ 24 ರ ವಯೋಮಿತಿಯವರಲ್ಲಿ ಶೇ 33 ರಷ್ಟು ಇಳಿದಿದೆ. ಅಂದರೆ, ಶೇ 18.4 ರಿಂದ 12.4 ಕ್ಕೆ ಇಳಿದಿದೆ. ಅದೇ ರೀತಿ 15 ರಿಂದ 17 ರ ವಯೋಮಿತಿಯ ವರ್ಗದಲ್ಲಿ ಶೇ 54ರಷ್ಟು ಇಳಿಕೆ ಕಂಡುಬಂದಿದೆ.
ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!
ದೇಶದಲ್ಲಿ ಪ್ರತಿ ವರ್ಷ ಈ ಮಾರಕ ತಂಬಾಕು ಸೇವನೆಯಿಂದ ಹತ್ತು ಲಕ್ಷಕ್ಕಿಂತಲೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ, 2010 ರಿಂದ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಂಬಾಕು ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಬರಲಾಗಿದೆ.
ಎಚ್ಚರಿಕೆ ಸಂದೇಶ
ಪ್ರಮುಖವಾಗಿ ತಂಬಾಕು ಉತ್ಪನ್ನಗಳ ಪ್ಯಾಕೇಟ್ ಗಳ ಮೇಲೆ ಶೇ 85 ರಷ್ಟು ಭಾಗದಲ್ಲಿ ತಂಬಾಕು ಕ್ಯಾನ್ಸರ್ ಮತ್ತು ಸಾವಿಗೆ ಕಾರಣವಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಚಿತ್ರಸಹಿತ ಮುದ್ರಿಸಲಾಗುತ್ತಿದೆ. ಜನರಲ್ಲಿ ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಇದು ನೆರವಾಗಿದೆ.
ಹೊಗೆರಹಿತ ತಂಬಾಕು ಬಳಕೆ ಪ್ರಮಾಣದಲ್ಲೂ ಶೇ 24 ರಷ್ಟು ಇಳಿಕೆ
ಅದೇ ರೀತಿ ತಂಬಾಕು ಸೇವನೆ ಆರಂಭಿಸುವವರೂ ದೂರ ಉಳಿಯುವಂತಾಗಿದೆ. ರಾಜ್ಯ ಮಟ್ಟದಲ್ಲಿ ತಂಬಾಕು ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದು, ಬಹುತೇಕ ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಮಾಡಿರುವುದು ಈ ಇಳಿಕೆ ಪ್ರಮಾಣಕ್ಕೆ ಕಾರಣವಾಗಿವೆ. ಇದೇ ವೇಳೆ, ಹೊಗೆರಹಿತ ತಂಬಾಕು ಬಳಕೆ ಪ್ರಮಾಣದಲ್ಲೂ ಶೇ 24 ರಷ್ಟು ಇಳಿಕೆಯಾಗಿದೆ.
ಚಿತ್ರವನ್ನು ಮುದ್ರಿಸಲು ಸಾಕಷ್ಟು ಹೋರಾಟ
ತಂಬಾಕು ಉತ್ಪನ್ನಗಳ ಪ್ಯಾಕೇಟ್ ಗಳ ಮೇಲೆ ಎಚ್ಚರಿಕೆ ಸಂದೇಶ ಸಾರುವ ಚಿತ್ರವನ್ನು ಮುದ್ರಿಸುವಂತೆ ಮಾಡಲು ಭಾರತ ಸಾಕಷ್ಟು ಹೋರಾಟವನ್ನೇ ಮಾಡಬೇಕಾಯಿತು. ಏಕೆಂದರೆ, ತಂಬಾಕು ಉತ್ಪನ್ನಗಳ ಕಂಪನಿಗಳು ಪ್ರತಿಯೊಂದು ಹೆಜ್ಜೆಯಲ್ಲಿಯೂ ಈ ಚಿತ್ರವನ್ನು ಮುದ್ರಿಸುವುದನ್ನು ತಪ್ಪಿಸಲು ಪ್ರಯತ್ನಪಟ್ಟವು.
ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?
ಕರ್ನಾಟಕ ಹೈಕೋರ್ಟಿನಲ್ಲಿ ಪ್ರಕರಣ
ಈಗಲೂ ಕಂಪೆನಿಗಳು ಈ ಚಿತ್ರ ಮುದ್ರಿಸುವುದರ ವಿರುದ್ಧ ಕರ್ನಾಟಕ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಇತ್ತೀಚಿನ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ತಂಬಾಕು ಉತ್ಪನ್ನಗಳ ಪ್ಯಾಕೇಟ್ ಗಳ ಮೇಲೆ ಮುದ್ರಿಸಲಾಗುತ್ತಿರುವ ಅಪಾಯದ ಎಚ್ಚರಿಕೆ ಸಂದೇಶದ ಚಿತ್ರದ ಹಿನ್ನೆಲೆಯಲ್ಲಿ ಧೂಮಪಾನವನ್ನು ತ್ಯಜಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಅಂಗಡಿಯಲ್ಲಿ ನಿತ್ಕೊಂಡು ಹೊಗೆ ಬಿಡ್ಬೇಡಿ: ಜು1ರಿಂದ ಕಟ್ಟುನಿಟ್ಟಿನ ಆದೇಶ
ಶೇ 84ರಷ್ಟು ಜನರು ಧೂಮಪಾನ ತ್ಯಜಿಸುವ ನಿರ್ಧಾರ
ಈ ಪೈಕಿ ಸಿಗರೇಟ್ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ 63ರಷ್ಟು ಮತ್ತು ಬೀಡಿ ಸೇವನೆ ಮಾಡುವವರ ಸಂಖ್ಯೆಯಲ್ಲಿ ಶೇ 84ರಷ್ಟು ಜನರು ಧೂಮಪಾನ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದರ ಜತೆಗೆ ಕೇಂದ್ರ ಸರಕಾರ ಸಿಗರೇಟ್, ಧೂಮರಹಿತ ತಂಬಾಕು ಮತ್ತು ಬೀಡಿ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಆಧಾರದಲ್ಲಿ ಶೇ 28 ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಈ ವಾರ ಪ್ರಕಟಿಸಿದೆ.
2.67 ಕೋಟಿ ಜನರು ತಂಬಾಕು ಉತ್ಪನ್ನಗಳ ದಾಸರು
ಕಠಿಣ ಕ್ರಮಗಳು ಜಾರಿಯಾಗಿದ್ದರೂ ದೇಶದಲ್ಲಿ ಇನ್ನೂ 2.67 ಕೋಟಿ ಜನರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. 1.99 ಕೋಟಿ ಜನರು ಧೂಮರಹಿತ ತಂಬಾಕು ಬಳಕೆ ಮಾಡುತ್ತಿದ್ದರೆ, 7.2 ಕೋಟಿ ಜನರು ಬೀಡಿ ಸೇವನೆ ಮಾಡುತ್ತಿದ್ದಾರೆ. ಅದೇ ರೀತಿ, 3.2 ಕೋಟಿ ಜನರು ಬೀಡಿ ಮತ್ತು ಧೂಮರಹಿತವಾದ ತಂಬಾಕು ಸೇವನೆ ಮಾಡುತ್ತಿದ್ದಾರೆ.
ಕಠಿಣವಾದ ಕ್ರಮಗಳು
ಕೋಟ್ಪಾವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ಅಂಕಿಅಂಶಗಳ ವರದಿಯನ್ನು ಇದೇ ಮೊದಲ ಬಾರಿಗೆ ಆನ್ ಲೈನ್ ವ್ಯವಸ್ಥೆಯಲ್ಲಿ ನಮೂದಿಸುವುದು, ಇ-ಸಿಗರೇಟು ಮತ್ತು ಗುಟ್ಕಾ ನಿಷೇಧಿಸುವುದು ಸೇರಿದಂತೆ ತಂಬಾಕು ನಿಯಂತ್ರಣಕ್ಕೆ ಕಠಿಣವಾದ ಕ್ರಮಗಳನ್ನು ಕರ್ನಾಟಕ ಸರಕಾರ ತೆಗೆದುಕೊಂಡಿದೆ.
ಸರಕಾರಕ್ಕೆ ಅಭಿನಂದನೆ
"ತಂಬಾಕು ನಿಯಂತ್ರಣಕ್ಕೆ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ತಂಬಾಕಿನಿಂದ ಆಗಬಹುದಾದ ಮಾರಕ ಅಥವಾ ಅಪಾಯದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಇದನ್ನು ಇತ್ತೀಚಿನ ಫಲಿತಾಂಶಗಳಲ್ಲಿ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ಕಠಿಣ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಂತಹ ಕ್ರಮಗಳನ್ನು ತೆಗೆದುಕೊಂಡಿರುವ ಸರಕಾರವನ್ನು ನಾವು ಅಭಿನಂದಿಸುತ್ತೇವೆ" ಎಂದು ಕರ್ನಾಟಕ ಸರಕಾರ ನೇಮಕ ಮಾಡಿರುವ ತಂಬಾಕು ನಿಯಂತ್ರಣದ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿರುವ ಡಾ.ವಿಶಾಲ್ ರಾವ್ ಹೇಳಿದ್ದಾರೆ.