ಅಬ್ಬಬ್ಬಾ.. ಭಾರತದಲ್ಲಿ ಒಂದೇ ದಿನ ಇಷ್ಟೊಂದು ಜನರಿಗೆ ಕೊರೊನಾವೈರಸ್?
ನವದೆಹಲಿ, ಜೂನ್.21: ಮೇಡ್ ಇನ್ ಚೀನಾ ಎಂತಲೇ ಕುಖ್ಯಾತಿ ಗಳಿಸಿರುವ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಇಡೀ ವಿಶ್ವವೇ ಭಾರತ ಬೆಸ್ಟ್ ಎಂದು ಹೇಳುತ್ತಿತ್ತು. ಆದರೆ ದೇಶದಲ್ಲೂ ಇದೀಗ ಆ ಚಿತ್ರಣ ಬದಲಾಗುವಂತೆ ಗೋಚರಿಸುತ್ತಿದೆ.
Recommended Video
ಕಳೆದೊಂದು ವಾರದಿಂದ ದೇಶಾದ್ಯಂತ ದಿನಂಪ್ರತಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ 10,000ದ ಗಡಿ ದಾಟುತ್ತಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 15,000ಕ್ಕೂ ಅಧಿಕ ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ.
ಕೊರೊನಾ ಚಿಕಿತ್ಸೆ: ಜೀವರಕ್ಷಕ ಮಾತ್ರೆಯೊಂದಕ್ಕೆ 103 ರು ಮಾತ್ರ
ಭಾನುವಾರದ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 15,413 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,10,461ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆ
ಕೊರೊನಾವೈರಸ್ ಹೆಮ್ಮಾರಿಯು ದೇಶದಲ್ಲಿ ಮರಣಮೃದಂಗ ಬಾರಿಸುತ್ತಿದೆ. 4,10,461 ಮಂದಿಗೆ ಕೊವಿಡ್-19 ಅಂಟಿಕೊಂಡಿರುವುದು ದೃಢಪಟ್ಟಿದ್ದರೆ ಈ ಪೈಕಿ 1,69,451 ಸೋಂಕಿತರು ಗುಣಮುಖರಾಗಿದ್ದಾರೆ. ಬಾಕಿ ಉಳಿದ 2,27, 756 ಮಂದಿ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ದೇಶಾದ್ಯಂತ ಮಹಾಮಾರಿಗೆ 13,254ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮರಣಮೃದಂಗ ಬಾರಿಸುತ್ತಿರುವ ಕೊರೊನಾವೈರಸ್
ಭಾರತದ ಪಾಲಿಗೆ ಮಹಾರಾಷ್ಟ್ರವು ಕೊರೊನಾವೈರಸ್ ಹಾಟ್ ಸ್ಪಾಟ್ ಆಗಿ ಬಿಟ್ಟಿದೆ. ಒಟ್ಟಾಗಿ ಸೋಂಕಿತರ ಪ್ರಕರಣ ಹಾಗೂ ಸಾವಿನ ಪ್ರಮಾಣದಲ್ಲಿ ಮಹಾರಾಷ್ಟ್ರಕ್ಕೆ ಸಿಂಹಪಾಲು. 1 ಲಕ್ಷ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು ಮೀರಿರುವ ರಾಜ್ಯದಲ್ಲಿ 1,28,205 ಮಂದಿಗೆ ಮಹಾಮಾರಿ ಅಂಟಿಕೊಂಡಿದೆ. ರಾಜ್ಯದಲ್ಲಿ ಮಕೊವಿಡ್-19 ನಿಂದ 5984 ಜನರು ಉಸಿರು ಚೆಲ್ಲಿದ್ದಾರೆ. ಸಂತಸದ ವಿಚಾರ ಎಂದರೆ ಈವರೆಗೂ 64153ಕ್ಕೂ ಅಧಿಕ ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ನವದೆಹಲಿ ಮತ್ತು ದಕ್ಷಿಣ ಭಾಗದದ ತಮಿಳುನಾಡು ತತ್ತರ
ಕೊರೊನಾವೈರಸ್ ಅಟ್ಟಹಾಸವು ಉತ್ತರದ ದೆಹಲಿಯಿಂದ ದಕ್ಷಿಣದ ತಮಿಳುನಾಡಿನವರೆಗೂ ವ್ಯಾಪಿಸಿದೆ. ನವದೆಹಲಿಯಲ್ಲಿ ಒಂದೇ ದಿನ 3630 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 56,746ಕ್ಕೆ ಏರಿಕೆಯಾಗಿದೆ. ದಕ್ಷಿಣದ ತಮಿಳುನಾಡು ಕೂಡಾ ಕೊವಿಡ್-19 ಕಾಟಕ್ಕೆ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ 56,845 ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು, ಇದುವರೆಗೂ 704ಕ್ಕೂ ಅಧಿಕ ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಅಟ್ಟಹಾಸ
ಕೊರೊನಾವರೈಸ್ ನಿಯಂತ್ರಣದಲ್ಲಿ ಕೇಂದ್ರದ ಕಡೆಯಿಂದ ಭೇಷ್ ಎನಿಸಿಕೊಂಡ ಕರ್ನಾಟಕದಲ್ಲೂ ಪರಿಸ್ಥಿತಿಯು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಕಳೆದ 24 ಗಂಟೆಗಳಲ್ಲಿ 416 ಮಂದಿಗೆ ಮಹಾಮಾರಿಗೆ ಅಂಟಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 8697ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲೂ ಮಹಾಮಾರಿಗೆ ಇದುವರೆಗೂ ಪ್ರಾಣ ಬಿಟ್ಟವರ ಸಂಖ್ಯೆಯು 132ಕ್ಕೆ ಏರಿಕೆಯಾಗಿದೆ.