ಸಂಸತ್ ನಲ್ಲಿ ಭಾರತ-ಚೀನಾ ಸಂಘರ್ಷದ ಬಗ್ಗೆ ರಾಜನಾಥ್ ಸಿಂಗ್ ಭಾಷಣ
ನವದೆಹಲಿ, ಸಪ್ಟೆಂಬರ್.14: ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಲೋಕಸಭೆಯ ಮುಂಗಾರು ಅಧಿವೇಶನವನ್ನು ಉದ್ದೇಶಿಸಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರದ ಸಂಸತ್ ವ್ಯವಹಾರಗಳ ಸಲಹಾ ಸಮಿತಿಯ ಪಟ್ಟಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಭಾರತ-ಚೀನಾ ಗಡಿ ಸಂಘರ್ಷ ಮತ್ತು ಲಡಾಖ್ ಗಡಿಯಲ್ಲಿನ ಸನ್ನಿವೇಶದ ಬಗ್ಗೆ ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತಾಪಿಸಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಆ ಪರ್ವತಗಳ 'ಸ್ಪಂಗರ್ ಗ್ಯಾಪ್' ನಲ್ಲಿ ಗನ್ ಹಿಡಿದು ನಿಂತ ಚೀನಾ ಸೇನೆ!
ಭಾರತ-ಚೀನಾ ಗಡಿ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದರು. ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದ ಇತ್ಯರ್ಥದಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಹಲವು ಬಾರಿ ಟೀಕಿಸಿದ್ದರು.
ಸೂಕ್ಷ್ಮತೆ ಅರಿತುಕೊಂಡು ಉತ್ತರ:
ಭಾರತ-ಚೀನಾ ನಿಲುಗಡೆ ಕುರಿತು ಹೇಳಿಕೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಉತ್ತರಿಸಿದ್ದರು. "ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಕಾರ್ಯತಂತ್ರದ ಅಂಶಗಳನ್ನು" ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು. ಮಂಗಳವಾರ ನಡೆಯುವ ಸಭೆಯಲ್ಲಿ ನಾಯಕರನ್ನು ವಿವರಿಸಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಕಳೆದ ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಜೂನ್.15ರಹಂದು ಚೀನಾ ಮತ್ತು ಭಾರತೀಯ ಯೋಧರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅಂದಿನಿಂದಲೂ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕಳೆದ ಮೂರು ವಾರಗಳಲ್ಲೇ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಎರಡು ಬಾರಿ ಚೀನಾ ಸೇನೆಯು ಪ್ರಚೋದನಾತ್ಮಕ ಸೇನಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಈ ಹಿನ್ನೆಲೆ ಗಡಿಯಲ್ಲಿ ಸೃಷ್ಟಿಯಾಗಿರುವ ಆತಂಕದ ಬಗ್ಗೆ ಉತ್ತರಿಸಲೇಬೇಕಾದ ಅನಿವಾರ್ಯತೆಗೆ ಕೇಂದ್ರ ಸರ್ಕಾರವೂ ಸಿಲುಕಿದೆ.