ಚೀನಾ ವಿರುದ್ಧ ಯುದ್ಧ; ಸರ್ವಪಕ್ಷ ಸಭೆಯಲ್ಲಿ ಸಿಎಂಗಳು ಹೇಳಿದ್ದೇನು?
ನವದೆಹಲಿ, ಜೂನ್.19: ಲಡಾಖ್ ಪೂರ್ವ ಗಡಿಯಲ್ಲಿರುವ ಗಾಲ್ವಾನ್ ನದಿ ಕಣಿವೆ ಮೇಲೆ ಕಣ್ಣಿಟ್ಟಿರುವ ಚೀನಾಗೆ ಭಾರತವು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ದೇಶದ ಸುದ್ದಿಗೆ ಬಂದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆಗೆ ಸರ್ವಪಕ್ಷಗಳ ಸಭೆಯಲ್ಲಿ ಒಕ್ಕೊರಲಿನ ಬೆಂಬಲ ವ್ಯಕ್ತವಾಗಿದೆ.
Recommended Video
ಗಲ್ವಾನ್ ನದಿ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ ನಡೆಸಲಾಯಿತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ದೇಶದ ಪ್ರಮುಖ 20 ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದರು.
ಚೀನಾ-ಭಾರತ ಘರ್ಷಣೆ: ಸರ್ವಪಕ್ಷ ಸಭೆ ಕರೆದ ಮೋದಿ, 2 ಪ್ರಮುಖ ಪಕ್ಷಕ್ಕಿಲ್ಲ ಆಹ್ವಾನ
ಲಡಾಕ್ ಪೂರ್ವ ಗಡಿಯಲ್ಲಿ ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಕುರಿತು ಸರ್ವಪಕ್ಷ ಸಭೆ ಆರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದರು. ಸರ್ವಪಕ್ಷ ಸಭೆ ಆರಂಭಕ್ಕೂ ಮೊದಲು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರು ಎದ್ದುನಿಲ್ಲುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿದರು. ಇನ್ನು, ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಯಾವ ರಾಜ್ಯಗಳ ಮುಖ್ಯಮಂತ್ರಿಗಳು ಮಂಡಿಸಿದ ಅಭಿಪ್ರಾಯಗಳೇನು ಎನ್ನುವುದರ ಕುರಿತು ಒಂದು ವರದಿ.
ಯೋಧ ಹೋರಾಟ ವ್ಯರ್ಥವಾಗಲು ಬಿಡಿಲ್ಲ ಎಂದ ಮೋದಿ
ಭಾರತ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 35 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕಾ ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು. ಇದರ ನಡುವೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಯೋಧರ ಹೋರಾಟವು ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ ಎನ್ನುವ ಮೂಲಕ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು.
ಸಂಧಾನದ ಮಾರ್ಗಗಳೆಲ್ಲ ಬಂದ್ ಎಂದಿದ್ದೇಕೆ ಸೋನಿಯಾ?
ಭಾರತೀಯ ಗುಪ್ತಚರ ಇಲಾಖೆಯ ವೈಫಲ್ಯವೇ ಭಾರತ-ಚೀನಾ ನಡುವಿನ ಸಂಘರ್ಷಕ್ಕೆ ಮೂಲ ಕಾರಣ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂಷಿಸಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆಯ ವಿವಾದವನ್ನು ಸರಳ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಎಲ್ಲ ಮಾರ್ಗಗಳನ್ನು ಕಳೆದುಕೊಂಡಿದ್ದೇವೆ. ಮೌಲ್ಯಯುತವಾದ ಸಮಯವನ್ನು ಕಳೆದುಕೊಂಡಿದ್ದೇವೆ. ಅದರ ಪರಿಣಾಮದಿಂದಾಗಿ 20 ಮಂದಿ ಭಾರತೀಯ ಯೋಧರನ್ನು ಕಳೆದುಕೊಂಡಿದ್ದೇವೆ ಎಂದು ಸೋನಿಯಾ ಗಾಂಧಿ ವಿಷಾದ ವ್ಯಕ್ತಪಡಿಸಿದರು.
ಚೀನಾ ಕುರಿತು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದೇನು?
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಇದರ ನಡುವೆಯೂ ಪ್ರತಿಕ್ರಿಯೆ ನೀಡಿರುವ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ. ಚೀನಾಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಗುಡುಗಿದ್ದಾರೆ.
ಶೇ.300 ಸುಂಕವನ್ನು ಚೀನಾ ಸರಕುಗಳ ಮೇಲೆ ವಿಧಿಸಿ
ಭಾರತ ದೇಶದ ವಿಚಾರಕ್ಕೆ ಬಂದರೆ ದೇಶವು ಎಲ್ಲರಿಗೂ ಒಂದೇ. ಗಡಿಯಲ್ಲಿ ಕ್ಯಾತೆ ತೆಗೆದಿರುವ ಚೀನಾ ಮತ್ತು ಪಾಕಿಸ್ತಾನ ರಾಷ್ಟ್ರಗಳ ಉದ್ದೇಶ ಉತ್ತಮವಾಗಿಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಹಾಗೂ ಲೋಕಸಭಾ ಸದಸ್ಯ ರಾಮಗೋಪಾಲ್ ಯಾದವ್ ಕಿಡಿ ಕಾರಿದರು. ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚೀನಾ ಸರಕುಗಳ ಮೇಲೆ ಶೇ.300ರಷ್ಟು ಆಮದು ಸುಂಕವನ್ನು ವಿಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ನಾವೆಲ್ಲ ಒಂದೇ ಎಂದ ಸಂದೇಶ ಸಾರಿದ ಮಹಾ ಸಿಎಂ
ನಾವೆಲ್ಲರೂ ಒಂದೇ. ಇಂಥದೊಂದು ಭಾವನೆ ನಮ್ಮೆಲ್ಲರ ಮನದಲ್ಲೂ ಇದೆ. ಪ್ರಧಾನಮಂತ್ರಿಗಳೇ ನಿಮ್ಮ ಜೊತೆಗೆ ಸದಾ ನಾವೂ ಇರುತ್ತೇವೆ. ಭಾರತೀಯ ಸೇನಾ ಯೋಧರು ಮತ್ತು ಕುಟುಂಬದವರ ಜೊತೆಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ ಇದೇ ದೇಶದ ದೌರ್ಬಲ್ಯವಲ್ಲ. ಭಾರತವು ಬಲವಾಗಿದೆಯೇ ವಿನಃ ಅಸಹಾಯಕವಾಗಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಚೀನಾ ಮುಂದು ಎಂದಿಗೂ ತಲೆ ಬಾಗುವುದಿಲ್ಲ
ಭಾರತವು ಚೀನಾದ ಎದುರಿನಲ್ಲಿ ಯಾವತ್ತಿಗೂ ತಲೆ ಬಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ವಪಕ್ಷ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಚೀನಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ ಸರ್ವಾಧಿಕಾರಿ ಪ್ರಭುತ್ವವು ಜಾರಿಯಲ್ಲಿದೆ. ಅವರು ತಮಗೆ ಅನಿಸಿದ್ದನ್ನು ಬೇಕಾದಾಗ ಮಾಡುವಂತಾ ವ್ಯವಸ್ಥೆಯಲ್ಲಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಶಸ್ತ್ರಾಸ್ತ್ರ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಶರದ್ ಪವಾರ್
ಭಾರತ-ಚೀನಾ ಗಡಿಯಲ್ಲಿ ಸಂಘರ್ಷದಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅದೇನೇ ಇದ್ದರೂ ಕೂಡಾ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಭಾರತವು ಬದ್ಧವಾಗಿರಬೇಕು. ಗಡಿಯಲ್ಲಿ ಯಾವುದೇ ಕಾರಣಕ್ಕೂ ಶಸ್ತ್ರಾಸ್ತ್ರಗಳ ಬಳಕೆಗೆ ಅವಕಾಶ ನೀಡಬಾರದು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದರು. 1996ರ ಭಾರತ-ಚೀನಾ ಒಪ್ಪಂದದ ಪ್ರಕಾರ ಗಡಿಯಲ್ಲಿ ಉಭಯ ಸೇನಾಪಡೆಯ ಸೈನಿಕರು ಯಾವುದೇ ರೀತಿಯ ಮದ್ದು-ಗುಂಡುಗಳನ್ನು ಮತ್ತು ಸ್ಪೋಟಕಗಳನ್ನು ಇಟ್ಟುಕೊಳ್ಳುವಂತಿಲ್ಲ.