ಭಾರತ-ಚೀನಾ 5 ಅಂಶಗಳ ಯೋಜನೆ: ನಿಮಗೆ ತಿಳಿದಿರಬೇಕಾದ ಸಂಗತಿಗಳು
ನವದೆಹಲಿ, ಸೆಪ್ಟೆಂಬರ್ 11: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಷ್ಯಾದ ಮಾಸ್ಕೋದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ನಡೆದ ಮಾತುಕತೆಯನ್ನು ಐದು ಅಂಶಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.
ಗಡಿಯಲ್ಲಿ ಉದ್ವಿಗ್ನತೆ ಶಮನಗೊಳಿಸಲು ಹಾಗೂ ಉಭಯ ದೇಶಗಳ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯವನ್ನು ಚುರುಕುಗೊಳಿಸುವ ಸಲುವಾಗಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ ಎಲ್ಎಸಿಯಲ್ಲಿನ ಬಿಕ್ಕಟ್ಟು ಮುಂದುವರಿದಿದೆ.
ಸಭೆಯಲ್ಲಿ ತೀಕ್ಷ್ಣ ಭಿನ್ನಮತವೂ ವ್ಯಕ್ತವಾಯಿತು. ಏಪ್ರಿಲ್ನಲ್ಲಿ ಇದ್ದಂತೆ ಎಲ್ಎಸಿಯಲ್ಲಿನ ಯಥಾಸ್ಥಿತಿಯನ್ನು ಮರಳಿ ತರುವ ಬಗ್ಗೆ ಯಾವುದೇ ಉಲ್ಲೇಖವಾಗಲಿಲ್ಲ. ಜತೆಗೆ ಸೇನಾಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕಾರ್ಯ ಪೂರ್ಣಗೊಳಿಸಲು ಯಾವುದೇ ಸಮಯದ ಚೌಕಟ್ಟು ನಿಗದಿಪಡಿಸಲಿಲ್ಲ.
ತಗಾದೆ ಶುರುಮಾಡಿದ್ದು ನಾವಲ್ಲ: ಚೀನಾಕ್ಕೆ ಜೈಶಂಕರ್ ಖಡಕ್ ನುಡಿ
ಗಡಿ ಪ್ರಶ್ನೆಯನ್ನು ಬಗೆಹರಿಸಿಕೊಳ್ಳುವ ವಿಚಾರದಲ್ಲಿ ಭಾರತ-ಚೀನಾ ಸಂಬಂಧದ ಅಭಿವೃದ್ಧಿಯನ್ನು ಅವಲಂಬನೆ ಮಾಡುವುದನ್ನು ಪರಿಗಣಿಸುವುದಿಲ್ಲ ಎಂದು ಭಾರತ ಹೇಳಿದ್ದಾಗಿ ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಆದರೆ ದೇಶಗಳ ಸಂಬಂಧದಿಂದ ಗಡಿ ವಿಷಯವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಭಾರತ ಹಾಗೂ ಚೀನಾ ಚರ್ಚಿಸಿದ ಐದು ಅಂಶಗಳು ಇಲ್ಲಿವೆ.
ವಿವಾದ ಸೃಷ್ಟಿ ಬೇಡ
ಭಾರತ ಮತ್ತು ಚೀನಾ ಸಂಬಂಧವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ನಾಯಕರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ವಿವಾದವನ್ನಾಗಿ ಬೆಳೆಯಲು ಅವಕಾಶ ನೀಡಬಾರದು.
ಮಾತುಕತೆ ಮುಂದುವರಿಸಬೇಕು
ಗಡಿಯಲ್ಲಿನ ಪ್ರಸ್ತುತದ ಪರಿಸ್ಥಿತಿಯು ಯಾವುದೇ ದೇಶದ ಆಸಕ್ತಿಯಲ್ಲಿಲ್ಲ. ಹೀಗಾಗಿ ಉಭಯ ದೇಶಗಳ ಗಡಿ ಪಡೆಗಳು ತಮ್ಮ ಮಾತುಕತೆ, ಶೀಘ್ರವೇ ಸೇನೆ ಹಿಂತೆಗೆತ, ಸೂಕ್ತ ಅಂತರ ಕಾಪಾಡಿಕೊಳ್ಳುವುದು ಹಾಗೂ ಉದ್ವಿಗ್ನತೆಯನ್ನು ಶಮನ ಮಾಡುವುದರ ಕುರಿತು ಮಾತುಕತೆಯನ್ನು ಮುಂದುವರಿಸಬೇಕು.
2 ಗಂಟೆಯಲ್ಲೇ ಅಂತ್ಯವಾದ ಭಾರತ-ಚೀನಾ ವಿದೇಶಾಂಗ ಸಚಿವರ ಚರ್ಚೆ
ಒಪ್ಪಂದಗಳಿಗೆ ಬದ್ಧ
ಭಾರತ-ಚೀನಾ ಗಡಿ ವ್ಯವಹಾರಗಳ ಶಿಷ್ಟಾಚಾರಗಳು, ಗಡಿ ಭಾಗದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ನಿರ್ವಹಣೆಯ ಹಾಲಿ ಒಪ್ಪಂದಗಳಿಗೆ ಬದ್ಧವಾಗಿರಬೇಕು ಮತ್ತು ಪರಿಸ್ಥಿತಿಯನ್ನು ವಿಕೋಪಕ್ಕೆ ತರುವಂತಹ ಯಾವುದೇ ಕ್ರಿಯೆ ನಡೆಸಬಾರದು.
ಸಮನ್ವಯ ಮುಂದುವರಿಕೆ
ವಿಶೇಷ ಪ್ರತಿನಿಧಿಗಳ ವ್ಯವಸ್ಥೆಯ ಮೂಲಕ ಸಂವಹನ ಮುಂದುವರಿಸಬೇಕು. ಕಾರ್ಯನಿರತ ವ್ಯವಸ್ಥೆಯ ಸಭೆ ಹಾಗೂ ಗಡಿ ವ್ಯವಹಾರಗಳಲ್ಲಿನ ಸಮನ್ವಯ ಮುಂದುವರಿಯಲಿದೆ.
ವಿಶ್ವಾಸ ನಿರ್ಮಾಣ ಕಾರ್ಯ
ಸನ್ನಿವೇಶ ತಿಳಿಯಾದಂತೆ ಎರಡೂ ಭಾಗಗಳು ಗಡಿ ಭಾಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ವೃದ್ಧಿಸುವ ಹಾಗೂ ಕಾಪಾಡಿಕೊಳ್ಳುವ ಹೊಸ ವಿಶ್ವಾಸ ನಿರ್ಮಾಣ ಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು.