ಭಾರತದಲ್ಲಿ 18 ವರ್ಷದೊಳಗಿನ ಕೊವಿಡ್-19 ರೋಗಿಗಳಿಗೆ ಪರಿಷ್ಕೃತ ಮಾರ್ಗಸೂಚಿ
ನವದೆಹಲಿ, ಜನವರಿ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಮಿತಿ ಮೀರಿದೆ. ದೇಶದಲ್ಲಿ ಕೊವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸೋಂಕಿನ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕೊರೊನಾವೈರಸ್ ಸೋಂಕಿನ ಹೊಸ ರೂಪಾಂತರಿ ಒಮಿಕ್ರಾನ್ ಮುಖ್ಯವಾಗಿ ಸೋಂಕು ಹರಡುವಿಕೆ ವೇಗ ಹೆಚ್ಚಾಗಲು ಕಾರಣ ಎಂದು ತಜ್ಞರ ತಂಡ ಹೇಳಿದ್ದು, ಮಾರ್ಗಸೂಚಿಗಳಲ್ಲಿ ಕೆಲವು ಪರಿಷ್ತೃತ ಅಂಶಗಳನ್ನು ಸೇರಿಸಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ವೈದ್ಯಕೀಯ ಚಿಕಿತ್ಸೆ ವೇಳೆ ಸ್ಟೀರಾಯ್ಡ್ಗಳನ್ನು ಬಳಸಿದ್ದಲ್ಲಿ ಆರೋಗ್ಯ ಸುಧಾರಣೆ ನಂತರದ 10 ರಿಂದ 14 ದಿನಗಳಲ್ಲಿ ಅವುಗಳ ಬಳಕೆಯನ್ನು ನಿಲ್ಲಿಸಬೇಕು. ಕೊವಿಡ್ ನಂತರದ ಆರೈಕೆಗೆ ಕೇಂದ್ರಗಳ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.
ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆ, ಹೋಮ್ ಐಸೋಲೇಷನ್ ಮಾರ್ಗಸೂಚಿಗಳು
ದೇಶದಲ್ಲಿ 5 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸುವಂತೆ ಶಿಫಾರಸು ಮಾಡುವುದಿಲ್ಲ. 6-11 ವರ್ಷ ವಯಸ್ಸಿನವರು ತಮ್ಮ ಪೋಷಕರು ಜೊತೆಗಿರುವ ಸಂದರ್ಭದಲ್ಲಿ ಸೂಕ್ತ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ಮಾಸ್ಕ್ ಧರಿಸಬೇಕು. ಮಗುವಿನ ಸಾಮರ್ಥ್ಯ ಅವಲಂಬಿಸಿ ಮಾಸ್ಕ್ ಧರಿಸಬಹುದು. 12 ವರ್ಷ ಮೇಲ್ಪಟ್ಟವರುಈ ಹಿಂದಿನ ಮಾರ್ಗಸೂಚಿಗಳ ಅನ್ವಯ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಸರ್ಕಾರವು 18 ವರ್ಷದೊಳಗಿನ ಮಕ್ಕಳಿಗಾಗಿ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಏನಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಕೇಂದ್ರದ ಕೊವಿಡ್-19 ಪರಿಷ್ಕೃತ ಮಾರ್ಗಸೂಚಿ:
- ಕೊವಿಡ್-19 ರೋಗಿಯು ವೈದ್ಯರ ಸೂಚನೆಯ ಪ್ರಕಾರ ಟ್ರಿಪಲ್ ಲೇಯರ್ ಮಾಸ್ಕ್ ಅನ್ನು ಧರಿಸಬೇಕು.
- ಲಕ್ಷಣರಹಿತ ಮತ್ತು ಸೌಮ್ಯವಾದ ಪ್ರಕರಣಗಳಲ್ಲಿ ಚಿಕಿತ್ಸೆ ಅಥವಾ ರೋಗನಿರೋಧಕಕ್ಕೆ ಆಂಟಿಮೈಕ್ರೊಬಿಯಲ್ಗಳನ್ನು ಶಿಫಾರಸು ಮಾಡುವುದಿಲ್ಲ.
- ಮಧ್ಯಮ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ವೈದ್ಯಕೀಯ ಅನುಮಾನವಿಲ್ಲದಿದ್ದರೆ ಆಂಟಿಮೈಕ್ರೊಬಿಯಲ್ಗಳನ್ನು ಶಿಫಾರಸು ಮಾಡಬಾರದು.
- COVID-19 ನ ಲಕ್ಷಣರಹಿತ ಮತ್ತು ಸೌಮ್ಯ ಲಕ್ಷಣಗಳನ್ನು ಹೊಂದಿರುವವರು ಸ್ಟೆರಾಯ್ಡ್ಗಳನ್ನು ಬಳಸುವುದು ಅಪಾಯಕಾರಿ ಆಗಿರುತ್ತದೆ.
- ಸ್ಟೀರಾಯ್ಡ್ಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು.
- ವೇಗವಾಗಿ ಪ್ರಗತಿಶೀಲ ಮಧ್ಯಮ ಮತ್ತು ಎಲ್ಲಾ ತೀವ್ರತರವಾದ ಪ್ರಕರಣಗಳಲ್ಲಿ ಕಾರ್ಟಿಕೊಸ್ಟೆರಾಯ್ಡ್ ಅನ್ನು ಬಳಸಬಹುದು.
- ದೈನಂದಿನ ಆಧಾರದ ಮೇಲೆ ವೈದ್ಯರ ಸೂಚನೆ ಪ್ರಕಾರ ಐದರಿಂದ ಏಳು ದಿನಗಳವರೆಗೆ ಸ್ಟೀರಾಯ್ಡ್ಗಳನ್ನು ಪಡೆಯಬಹುದು, 10 ರಿಂದ 14 ದಿನಗಳ ನಂತರದಲ್ಲಿ ಅದನ್ನು ಮತ್ತೆ ತೆಗೆದುಕೊಳ್ಳುವಂತಿಲ್ಲ.
- ರೋಗಲಕ್ಷಣಗಳು ಪ್ರಾರಂಭವಾದಾಗಿನಿಂದ ಮೊದಲ ಮೂರರಿಂದ ಐದು ದಿನಗಳಲ್ಲಿ ಸ್ಟೀರಾಯ್ಡ್ಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು, ಏಕೆಂದರೆ ಇದು ರೋಗದ ಲಕ್ಷಣಗಳನ್ನು ಹೆಚ್ಚಿಸುತ್ತದೆ.
- ಕೊವಿಡ್-19 ನಂತರದ ಆರೈಕೆ ಹೇಗಿರಬೇಕು?: ರೋಗಲಕ್ಷಣಗಳಿಲ್ಲದ ಸೋಂಕು ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಮಕ್ಕಳು ದಿನನಿತ್ಯದ ಶಿಶುಪಾಲನಾ, ಸೂಕ್ತವಾದ ವ್ಯಾಕ್ಸಿನೇಷನ್, ಪೋಷಣೆ ಸಲಹೆ ಪಡೆಯಬೇಕು.
- ಮಧ್ಯಮದಿಂದ ತೀವ್ರತರವಾದ ಕೊವಿಡ್ನಿಂದ ಬಳಲುತ್ತಿರುವವರು, ಆಸ್ಪತ್ರೆಯಿಂದ ಬಿಡುಗಡೆಯ ಸಮಯದಲ್ಲಿ ಅವರ ಆರೈಕೆದಾರರಿಗೆ ರೋಗಿಯಲ್ಲಿನ ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಬೇಕು.
ದೇಶದಲ್ಲಿ ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊವಿಡ್:
Recommended Video
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಭಾರತದಲ್ಲಿ ಒಂದೇ ದಿನ 3,17 ಲಕ್ಷಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 317,532 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 493 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 223,990 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಈವರೆಗೂ 35,807,029 ಸೋಂಕಿತರು ಗುಣಮುಖರಾಗಿದ್ದರೆ, 487,719 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 1,924,025 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.