ಕಾಶ್ಮೀರದಲ್ಲಿ ಗಡಿ ನುಸುಳಲೆತ್ನಿಸಿದ ಉಗ್ರರ ಬೇಟೆ, 6 ಸಾವು
ಶ್ರೀನಗರ, ಜೂನ್ 10: ಭಾರತದ ಗಡಿಯೊಳಕ್ಕೆ ನುಗ್ಗಲು ಯತ್ನಿಸಿದ ಉಗ್ರರಿಗೆ ಭಾರತದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಗಡಿಯೊಳಗ್ಗೆ ನುಗ್ಗುವ ಉಗ್ರರ ಗುಂಪಿನ ಯತ್ನವನ್ನು ಸೇನಾಪಡೆ ವಿಫಲಗೊಳಿಸಿದೆ.
ಭಾರತದೊಳಕ್ಕೆ ನುಗ್ಗಲು ಯತ್ನಿಸಿದ ಉಗ್ರರು ಮತ್ತು ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಇದರಲ್ಲಿ 6 ಜನ ಉಗ್ರರು ಅಸುನೀಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ಸೇನಾ ಶಿಬಿರದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ
ಅತೀ ಹೆಚ್ಚು ಉಗ್ರರು ಒಳನುಸುಳುವ ಕೆರಾನ್ ಪ್ರದೇಶದ ಗಡಿಭಾಗದಲ್ಲಿ ಇಂದು ಬೆಳಿಗ್ಗೆ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸಿದರು. ಇವರನ್ನು ನಮ್ಮ ಸೈನಿಕರು ತಡೆದು ಹಿಮ್ಮೆಟ್ಟಿಸಿದ್ದಾರೆ ಎಂದು ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಇನ್ನೂ ಉಳಿದಿರಬಹುದಾದ ಉಗ್ರರಿಗೆ ಇಲ್ಲಿನ ದಟ್ಟ ಅರಣ್ಯದಲ್ಲಿ ಸೈನಿಕರು ಹುಡುಕಾಟ ಮುಂದುವರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಗುರುವಾರ ಶಂಕಿತ ಭಯೋತ್ಪಾದಕರು ಭಾರತೀಯ ಸೇನೆಯ ಗಸ್ತು ವಾಹನದ ಮೇಲೆ ದಾಳಿ ನಡೆಸಿದ್ದರು. ಇದರಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡಿದ್ದ.