ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ
ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯ ತನಕ ಕರ್ತರ್ ಪುರ್ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಗುರುವಾರ ಭಾರತ ಸರಕಾರ ಘೋಷಣೆ ಮಾಡಿದೆ. ಪಂಜಾಬ್ ನ ಗುರ್ ದಾಸ್ ಪುರ್ ಜಿಲ್ಲೆಯಲ್ಲಿರುವ ಡೇರಾ ಬಾಬಾ ನಾನಕ್ ನಿಂದ ಈ ರಸ್ತೆ ಆರಂಭವಾಗಲಿದೆ. ಪಾಕ್ ನ ಅಂತರರಾಷ್ಟ್ರೀಯ ಗಡಿ ತನಕ ಭಾರತವು ನಿರ್ಮಾಣ ಮಾಡಲಿದೆ.
ಇದೇ ರೀತಿ ಪಾಕಿಸ್ತಾನದಲ್ಲೂ ಕರ್ತರ್ ಪುರ್ ನ ದರ್ಬಾರ್ ಸಾಹಿಬ್ ಗುರ್ ದ್ವಾರದ ತನಕ ರಸ್ತೆ ನಿರ್ಮಾಣ ಮಾಡುವಂತೆ ಅಲ್ಲಿನ ಸರಕಾರವನ್ನು ಕೇಳಲಾಗುವುದು. ಈ ಮಾರ್ಗದಿಂದಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಅನುಕೂಲ ಆಗಲಿದೆ. ಪಾಕಿಸ್ತಾನದ ಕರ್ತರ್ ಪುರ್ ನಲ್ಲಿರುವ ದರ್ಬಾರ್ ಸಾಹಿಬ್ ಗುರ್ ದ್ವಾರಕ್ಕೆ ತೆರಳಲು ಸಲೀಸಾಗುತ್ತದೆ. ಈ ಸ್ಥಳದಲ್ಲಿ ಗುರು ನಾನಕ್ ಹದಿನೆಂಟು ವರ್ಷ ಇದ್ದರು.
ಸಿಖ್ಖರ ಗೋಲ್ಡನ್ ಟೆಂಪಲ್ ಗೆ 160ಕೆಜಿ ಚಿನ್ನದ ಲೇಪನ!
ಭಾರತ ಸರಕಾರದ ಹಣಕಾಸು ನೆರವಿನೊಂದಿಗೆ ಕರ್ತರ್ ಪುರ್ ಕಾರಿಡಾರ್ ನಿರ್ಮಾಣವು ಸಂಯೋಜಿತ ಅಭಿವೃದ್ಧಿ ಯೋಜನೆಯಾಗಿ ಜಾರಿಗೆ ಬರಲಿದೆ. ಅತ್ತ ಪಾಕಿಸ್ತಾನ ಕೂಡ ಈ ತಿಂಗಳ ನಂತರ ಕರ್ತರ್ ಪುರ್ ಕಾರಿಡಾರ್ ಯೋಜನೆ ಆರಂಭಿಸುವ ಸಾಧ್ಯತೆ ಇದೆ. ಈ ಯೋಜನೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶಂಕುಸ್ಥಾಪನೆ ಮಾಡುವ ನಿರೀಕ್ಷೆ ಇದೆ.
ಕಾರಿಡಾರ್ ನಿರ್ಮಾಣಕ್ಕೆ ದಿನ ನಿಗದಿಯಾಗಿಲ್ಲ
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕಾರಿಡಾರ್ ನಿರ್ಮಾಣಕ್ಕೆ ಪಾಕಿಸ್ತಾನವು ಇನ್ನೂ ದಿನ ನಿಗದಿ ಮಾಡಿಲ್ಲ. ಆದರೆ ಸಿಖ್ ಧರ್ಮ ಸ್ಥಾಪಕ ಗುರುನಾನಕ್ ದೇವ್ ಜೀ ಜಯಂತಿ ಆಚರಣೆ ದಿನವೇ ಘೋಷಣೆ ಮಾಡುವ ಸಾಧ್ಯತೆ ಇದೆ. ಸದ್ಯಕ್ಕೆ ಸಿಖ್ ಯಾತ್ರಾರ್ಥಿಗಳು ಜಯಂತಿ ಆಚರಣೆಗಾಗಿಯೇ ಅಲ್ಲಿಗೆ ತೆರಳಿದ್ದಾರೆ. ಈಗಾಗಲೇ ಕಾರಿಡಾರ್ ಗೆ ಸಮೀಕ್ಷೆ ಪೂರ್ಣಗೊಂಡಿದೆ. ಮುಂದಿನ ವರ್ಷದೊಳಗೆ ಈ ಯೋಜನೆ ಪೂರ್ಣಗೊಳಿಸಲು ಪಾಕ್ ಸರಕಾರ ನಿರ್ಧರಿಸಿದೆ.
ವಾಜಪೇಯಿ ಅವರ ಕಾಲದಲ್ಲಿ ಪ್ರಸ್ತಾವ ಆಗಿದ್ದ ಯೋಜನೆಯಿದು
ಕರ್ತರ್ ಪುರ್ ಕಾರಿಡಾರ್ ಯೋಜನೆ ಮೊದಲ ಬಾರಿಗೆ ಪ್ರಸ್ತಾವ ಆಗಿದ್ದು 1999ರಲ್ಲಿ. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ನಲ್ಲಿ ಲಾಹೋರ್ ಗೆ ತೆರಳಿದ ಸಂದರ್ಭದಲ್ಲಿ. ಸಿಖ್ಖರು ಬಹಳ ಕಾಲದಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಪವಿತ್ರ ಕ್ಷೇತ್ರಗಳಿಗೆ ತೆರಳಲು ಅನುಕೂಲ ಆಗುವಂತೆ ಎರಡು ದೇಶಗಳ ನಾಗರಿಕರಿಗೆ ಇರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
ಪಾಕಿಸ್ತಾನ ಅಧಿಕಾರಿಗಳಿಂದ ವಿಶೇಷ ಅನುಮತಿ ಅಗತ್ಯವಿಲ್ಲ
ಪಾಕಿಸ್ತಾನದಲ್ಲಿ ಸಿಖ್ಖರ ಹಲವು ಪವಿತ್ರ ಕ್ಷೇತ್ರಗಳಿದ್ದು, ಸದ್ಯಕ್ಕೆ ಮಾಮೂಲಿ ವೀಸಾದೊಂದಿಗೆ ಭಾರತೀಯ ಯಾತ್ರಾರ್ಥಿಗಳು ತೆರಳಲು ಯಾವುದೇ ನಿರ್ಬಂಧಗಳಿಲ್ಲ. ಇನ್ನು ಪಾಕಿಸ್ತಾನಿ ಅಧಿಕಾರಿಗಳಿಂದ ಯಾವುದೇ ವಿಶೇಷ ಅನುಮತಿಯ ಅಗತ್ಯ ಇಲ್ಲದೆ ಗುರ್ ದ್ವಾರ ಕರ್ತರ್ ಪುರ್ ಸಾಹಿಬ್ ಗೆ ಭೇಟಿ ನೀಡಬಹುದಾಗಿದೆ.
ವರ್ಷಕ್ಕೆ ನಾಲ್ಕು ಬಾರಿ ಪ್ರವಾಸಕ್ಕೆ ತೆರಳುತ್ತಾರೆ
ಗುರ್ ದ್ವಾರ್ ಕರ್ತರ್ ಪುರ್ ಸಾಹಿಬ್ ಗೆ ಸಿಖ್ ಜಾಥಾಗಳು ಪ್ರತಿ ವರ್ಷ ನಾಲ್ಕು ಬಾರಿ ತೆರಳುತ್ತವೆ. ಗುರು ನಾನಕ್ ಜನ್ಮ ವರ್ಷಾಚರಣೆ, ಬೈಸಾಕಿ, ಗುರು ಅರ್ಜನ್ ದೇವ್ ಹುತಾತ್ಮರಾದ ದಿನ ಹಾಗೂ ಮಹಾರಾಜ ರಣ್ ಜೀತ್ ಸಿಂಗ್ ರ ವಾರ್ಷಿಕ ಪುಣ್ಯ ಸ್ಮರಣೆ...ಹೀಗೆ ನಾಲ್ಕು ಸಂದರ್ಭಗಳಲ್ಲಿ ಪಾಕಿಸ್ತಾನದಲ್ಲಿರುವ ಕರ್ತರ್ ಪುರ್ ಗೆ ತೆರಳುತ್ತಾರೆ.