ನಾಳೆ ಭಾರತ-ಚೀನಾ ನಡುವೆ 9ನೇ ಸುತ್ತಿನ ಮಿಲಿಟರಿ ಮಾತುಕತೆ
ನವದೆಹಲಿ, ಜನವರಿ 23: ಭಾನುವಾರ (ಜನವರಿ 24) ಭಾರತ-ಚೀನಾ ಸೈನ್ಯದ ಉನ್ನತ ಸೇನಾಧಿಕಾರಿಗಳ ನಡುವೆ 9 ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಯಲಿದೆ. ಭಾರತದ ಚುಶುಲ್ ಸೆಕ್ಟರ್ ಎದುರು ಮೊಲ್ಡೊದಲ್ಲಿ ಈ ಮಾತುಕತೆ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೂರ್ವ ಲಡಾಕ್ನಲ್ಲಿನ ನೈಜ ನಿಯಂತ್ರಣ ರೇಖೆಯ(ಎಲ್ಎಸಿ) ಉದ್ದಕ್ಕೂ ಸೈನ್ಯವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಈಗಾಗಲೇ ಉಭಯ ದೇಶದ ಮಿಲಿಟರಿ ನಡುವೆ ಎಂಟು ಸುತ್ತಿನ ಮಾತುಕತೆ ನಡೆದಿವೆ. ಆದರೂ ಇನ್ನೂ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಭಾರತದ ಗಡಿಯೊಳಗೆ ಸೆರೆ ಸಿಕ್ಕ ಚೀನಾ ಸೈನಿಕ: ಸೇನೆಯಿಂದ ವಿಚಾರಣೆ
ಚೀನಾ ಗಡಿಯಲ್ಲಿ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸದ ಹೊರತು ಭಾರತ ತನ್ನ ಸೈನಿಕರನ್ನು ಕಡಿಮೆ ಮಾಡುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದರು. ಜೊತೆಗೆ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು "ಅತ್ಯಂತ ವೇಗದ ದರದಲ್ಲಿ" ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸುತ್ತಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ವಿವಾದವು ದ್ವಿಗುಣಗೊಂಡಿತು. ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ 20 ಭಾರತೀಯ ಸೈನಿಕರು ಹುತಾತ್ಮರಾದರು ಮತ್ತು ಸಮಾನ ಸಂಖ್ಯೆಯ ಚೀನೀ ಸೈನಿಕರು ಅಥವಾ ಹೆಚ್ಚಿನವರು ಕೊಲ್ಲಲ್ಪಟ್ಟ ನಂತರ ಉದ್ವಿಗ್ನತೆ ಹೆಚ್ಚಾಯಿತು.