ಭಾರತ-ಚೀನಾ ನಡುವೆ 13ನೇ ಸುತ್ತಿನ ಸೇನಾ ಕಮಾಂಡರ್ ಸಭೆ
ನವದೆಹಲಿ, ಅಕ್ಟೋಬರ್ 11: ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿ ಘರ್ಷಣೀಯ ಕೇಂದ್ರಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದು ಹಾಗೂ ಸೇನಾ ನಿಷ್ಕ್ರಿಯತೆ ಕುರಿತು ಭಾರತ ಮತ್ತು ಚೀನಾ ನಡುವೆ ಭಾನುವಾರ 13ನೇ ಸುತ್ತಿನ ಸಂಧಾನ ಮಾತುಕತೆ ನಡೆದಿದೆ. ಸುಮಾರು ಎಂಟೂವರೆ ಗಂಟೆಗಳ ಕಾಲ ಉಭಯ ಸೇನಾ ಮುಖ್ಯಸ್ಥರ ನಡುವೆ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಭಾನುವಾರ ನಡೆದ 13ನೇ ಸುತ್ತಿನ ಕಾರ್ಪ್ ಕಮಾಂಡರ್ ಹಂತದ ಸಭೆಯು 15ನೇ ಪೆಟ್ರೋಲಿಂಗ್ ಪಾಯಿಂಟ್ ಪ್ರದೇಶದಲ್ಲಿ ಸೇನೆಯ ಸಂಪೂರ್ಣ ನಿಷ್ಕ್ರಿಯತೆ ಬಗ್ಗೆ ಚರ್ಚೆಗೆ ಹೆಚ್ಚು ಕೇಂದ್ರೀಕೃತವಾಗಿತ್ತು ಎಂದು ಗೊತ್ತಾಗಿದೆ.
ಚೀನಾಗೆ ಕರೆಂಟ್ ಶಾಕ್! ಇನ್ನೂ ಮುಂದಕ್ಕೆ ಕಾದಿದೆ ಮಾರಿ ಹಬ್ಬ!
ಕಳೆದ ಎರಡು ತಿಂಗಳ ಹಿಂದೆ ನಡೆಸಿದ ಸಂಧಾನ ಮಾತುಕತೆ ನಂತರದಲ್ಲಿ ಗೋಗ್ರಾದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಪೂರ್ವ ಲಡಾಖ್ನ ಚುಶುಲ್-ಮೊಲ್ಡೊ ಗಡಿ ಕೇಂದ್ರದ ಚೀನಾದ ಭಾಗದಲ್ಲಿ ಬೆಳಿಗ್ಗೆ 10:30ಕ್ಕೆ ಆರಂಭವಾಗಿ ಸಭೆಯು ಸಂಜೆ 7 ಗಂಟೆಗೆ ಮುಕ್ತಾಯವಾಗಿದೆ. ಭಾನುವಾರ ನಡೆದ ಮಾತುಕತೆಯಲ್ಲಿ ಭಾರತೀಯ ನಿಯೋಗವನ್ನು ಲೆಹ್ ಮೂಲದ 14 ಕಾರ್ಪ್ಸ್ ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ನೇತೃತ್ವ ವಹಿಸಿದ್ದರು. ಈ ಸಭೆಯ ಕುರಿತು ಯಾವುದೇ ರೀತಿ ಅಧಿಕೃತ ಪ್ರತಿಕ್ರಿಯೆ ಹೊರ ಬಿದ್ದಿಲ್ಲ ಎಂದು ತಿಳಿದು ಬಂದಿದೆ.
ಬಾಂಧವ್ಯ ವೃದ್ಧಿಗೆ ಉದ್ವಿಗ್ನತೆ ತಗ್ಗಿಸುವುದೇ ಮಾರ್ಗ
ಉಭಯ ದೇಶಗಳ ನಡುವಿನ ಬಾಂಧವ್ಯ ಸುಧಾರಣೆಗೆ ಡೆಪ್ಸಾಂಗ್ ಸೇರಿದಂತೆ ಎಲ್ಲಾ ಘರ್ಷಣೆ ಕೇಂದ್ರಗಳಲ್ಲಿ ಸೇನೆ ನಿಷ್ಕ್ರಿಯತೆ ಹಾಗೂ ಸಮಸ್ಯೆಗಳ ಪರಿಹಾರ ಅತ್ಯಗತ್ಯ ಎಂದು ಭಾರತ ಒತ್ತಾಯಿಸುತ್ತಿದೆ. 13ನೇ ಸುತ್ತಿನ ಮಾತುಕತೆಯಲ್ಲಿ ಭಾರತೀಯ ನಿಯೋಗವು ಡೆಪ್ಸಾಂಗ್ ನಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ಬಗ್ಗೆ ದೃಢವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಉಭಯ ರಾಷ್ಟ್ರಗಳ ನಡುವಿನ ಸಂಧಾನ ಚರ್ಚೆಗೆ ಕಾರಣ?
ಉತ್ತರಾಖಂಡದ ಬರಹೋತಿ ವಲಯದಲ್ಲಿ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಚೀನಾ ಸೇನೆಯು ಅತಿಕ್ರಮಣದ ಪ್ರಯತ್ನಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಧಾನ ಮಾತುಕತೆಗೆ ನಿಯೋಗ ಮುಂದಾಗಿತ್ತು. ಇದಕ್ಕೂ ಮೊದಲು ಜುಲೈ 31ರಂದು ಉಭಯ ರಾಷ್ಟ್ರಗಳ ನಡುವೆ 12ನೇ ಸುತ್ತಿನ ಸಂಧಾನ ಮಾತುಕತೆ ನಡೆದಿತ್ತು. ಈ ಸಭೆಯ ನಂತರ ಗೋಗ್ರಾದಲ್ಲಿ ಎರಡು ಸೇನೆಗಳ ನಿಷ್ಕ್ರಿಯತೆ ಮತ್ತು ವಾಪಸ್ ತೆಗೆದುಕೊಂಡ ಕ್ರಮವು ಎರಡು ರಾಷ್ಟ್ರಗಳ ನಡುವೆ ಶಾಂತಿ ಪುನಃಸ್ಥಾಪನೆಗೆ ನಾಂದಿ ಹಾಡಿತು.
ಗಡಿಯಲ್ಲಿ ಅಸ್ತಿತ್ವ ಸ್ಥಾಪನೆ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಚೀನಾದ ಸೇನೆಯು ಎರಡನೇ ಚಳಿಗಾಲದ ವೇಳೆಗೆ ನಿಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಹಿಸಲು ಶುರು ಮಾಡಿದರೆ, ಅದು ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಇರುವಂತೆ ಸಕ್ರಿಯ ನಿಯಂತ್ರಣ ರೇಖೆಯಲ್ಲದಿದ್ದರೂ ಅದೇ ರೀತಿಯ ಪರಿಸ್ಥಿತಿಗೆ (ನಿಯಂತ್ರಣ ರೇಖೆ) ಕಾರಣವಾಗುತ್ತದೆ. ಪ್ರಸ್ತುತ ಎರಡು ಗಡಿ ನಿಯಂತ್ರಣ ರೇಖೆಯಲ್ಲಿ 50,000 ದಿಂದ 60,000 ಯೋಧರನ್ನು ನಿಯೋಜನೆ ಮಾಡಲಾಗಿದೆ. "ಒಂದು ವೇಳೆ ಚೀನಾದ ಸೇನೆಯು ತನ್ನ ಸೇನಾ ನಿಯೋಜನೆ ಹೆಚ್ಚಿಸುವುದನ್ನು ಮುಂದುವರಿಸಿದರೆ, ಭಾರತೀಯ ಸೇನೆಯು ಕೂಡ ತನ್ನ ವ್ಯಾಪ್ತಿಯಲ್ಲಿ ಅಸ್ತಿತ್ವವನ್ನು ತೋರಿಸಿಕೊಳ್ಳಬೇಕಾಗುತ್ತದೆ, ಅದು ಪೀಪಲ್ಸ್ ಲಿಬರೇಶನ್ ಆರ್ಮಿಯಷ್ಟೇ ಉತ್ತಮವಾಗಿರುತ್ತದೆ," ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಎಚ್ಚರಿಸಿದ್ದಾರೆ.
ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನೆ ನಿಷ್ಕ್ರಿಯತೆ ಒಪ್ಪಂದ
ಭಾರತ ಮತ್ತು ಚೀನಾದ ಸೇನಾಪಡೆಗಳು ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆಯು(ಎಲ್ಎಸಿ) ಎರಡೂ ಸೇನೆ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಕಳೆದ 17 ತಿಂಗಳುಗಳಿಂದ ಉಭಯ ಸೇನೆಗಳ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದ ವಿವಾದಿತ ಪ್ರದೇಶದಲ್ಲಿ ಸೇನೆ ನಿಷ್ಕ್ರಿಯತೆಗೆ ಸೇನೆಗಳು ಸಮ್ಮತಿಸಿದ್ದವು. ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಸಂಧಾನ ಮಾತುಕತೆ ಫಲವಾಗಿ ವಿವಾದಿತ ಸ್ಥಳಗಳಿಂದ ಎರಡು ರಾಷ್ಟ್ರಗಳು ತಮ್ಮ ಸೇನೆಗಳನ್ನು ವಾಪಸ್ ಕರೆಸಿಕೊಂಡಿದ್ದವು.
"ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತಿದೆ. ಇದು ಕಳವಳಕಾರಿ ಬೆಳವಣಿಗೆಯಾಗಿದೆ. ಚೀನಾದ ರೀತಿಯಲ್ಲೇ ಭಾರತವೂ ಕೂಡ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ. ಏಕೆಂದರೆ ಚೀನಾ ಬೃಹತ್ ನಿರ್ಮಾಣ ಚಟುವಟಿಕೆಗಳನ್ನು ಗಡಿಯಲ್ಲಿ ನಡೆಸುತ್ತಿದೆ ಎಂದರೆ, ಅವರು ಅದೇ ಪ್ರದೇಶದಲ್ಲಿ ತಂಗುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಂದರೆ ಭಾರತವೂ ಸಹ ಅಷ್ಟೇ ವೆಚ್ಚದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ನಡೆಸುತ್ತದೆ. ಭಾರತ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಚೀನಾಗಿಂತಲೂ ಉತ್ತಮ ಸ್ಥಿತಿಯಲ್ಲಿದೆ," ಎಂದು ನಾರವಾನೆ ಹೇಳಿದ್ದಾರೆ.