ಭಾರತ-ಚೀನಾ ಸಂಘರ್ಷದ ಮಧ್ಯೆ ಚಳಿಗಾಲದ ಭದ್ರತೆಗೆ ಸೇನೆ ಸನ್ನದ್ಧ
ನವದೆಹಲಿ, ಸಪ್ಟೆಂಬರ್.27: ಚಳಿಗಾಲ ಸಂದರ್ಭದಲ್ಲಿ ಭಾರತ-ಚೀನಾ ಗಡಿ ನಿಯಂತ್ರಣ ರೇಖೆಯ ಪ್ರದೇಶದ ಉದ್ದಕ್ಕೂ ಸೇನೆ ನಿಯೋಜನೆಗೆ ಎರಡೂ ಕಡೆಗಳಲ್ಲಿ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಎರಡು ಭಾಗಗಳಲ್ಲೂ ಕನಿಷ್ಠ 50,000 ಯೋಧರನ್ನು ನಿಯೋಜಿಸಲು ಉಭಯ ಸೇನೆಗಳು ಸಿದ್ಧವಾಗಿವೆ.
ವಾಸ್ತವಿಕ ಗಡಿ ರೇಖೆಯ ಉದ್ದಕ್ಕೂ ಚಳಿಗಾಲದಲ್ಲೂ ಸೇನಾ ಪ್ರಮಾಣವನ್ನು ಹೆಚ್ಚಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಚಳಿಗಾಲ ಆರಂಭಕ್ಕೂ ಮೊದಲೇ ಗಡಿಯಲ್ಲಿ ಉದ್ವಿಗ್ನತೆಯನ್ನು ನಿವಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸಲಾಯಿತು.
ಚೀನಾ-ಪಾಕ್ ಒಟ್ಟಿಗೆ ದಾಳಿ ನಡೆಸಿದರೂ ಎದುರಿಸಲು ಭಾರತದ ವಾಯುಪಡೆ ಸಿದ್ಧ
ಕಳೆದ ಏಪ್ರಿಲ್ ತಿಂಗಳಿನಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮತ್ತು ಭಾರತೀಯ ಸೇನೆ ನಡುವೆ ಸಂಘರ್ಷ ನಡೆಯುತ್ತಿದೆ. ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.
50 ದಿನಗಳಿಂದ ಸಾಲು ಸಾಲಾಗಿ ಸೇನಾ ಕಮಾಂಡರ್ ಹಂತದಲ್ಲಿ ಶಾಂತಿ ಮಾತುಕತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದರು. ಇದರ ಬೆನ್ನಲ್ಲೇ 6ನೇ ಸೇನಾ ಕಮಾಂಡರ್ ಹಂತದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಜಂಟಿ ಹೇಳಿಕೆ ಬಿಡುಗಡೆಗೊಳಿಸಲಾಗಿತ್ತು.
ಗಡಿಯಲ್ಲಿ ಹೆಚ್ಚು ಸೇನೆ ನಿಯೋಜಿಸದಂತೆ ಚರ್ಚೆ
ಆಗಸ್ಟ್.31ರಂದು ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸೇನಾ ಕಮಾಂಡರ್ ಹಂತದ 6ನೇ ಸಭೆ ನಡೆಸಲಾಯಿತು. ಶಾಂತಿ ಕಾಪಾಡಿಕೊಳ್ಳುವ ಹಿನ್ನೆಲೆ ಗಡಿ ಪ್ರದೇಶಕ್ಕೆ ಹೆಚ್ಚಿನ ಸೇನೆಯನ್ನು ರವಾನಿಸದಂತೆ ಹಾಗೂ ಗಡಿಯಲ್ಲಿ ಈ ಹಿಂದಿನ ಯಥಾಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು.
6ನೇ ಕಾರ್ಪ್ ಕಮಾಂಡರ್ ಸಭೆಯ ನಿರ್ಧಾರ
- ಮಾಲ್ಡೋ ಪ್ರದೇಶದಲ್ಲಿ ನಡೆದ ಕಾರ್ಪ್ ಕಮಾಂಡರ್ ಸಭೆಯಲ್ಲಿ ಚೀನಾ ತನ್ನ ಹಠವನ್ನು ಮುಂದುವರಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಬಳಿಯಲ್ಲಿ ನಿಯೋಜಿಸಿದ್ದ ತನ್ನ ಸೇನೆಯನ್ನು ಅಲ್ಲಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರಾಕರಿಸಿದೆ ಎನ್ನಲಾಗುತ್ತಿದೆ.
- ಏಪ್ರಿಲ್-2020ಕ್ಕೂ ಮೊದಲು ಗಡಿಯಲ್ಲಿದ್ದ ಸ್ಥಿತಿಯನ್ನೇ ಯಥಾವತ್ತಾಗಿ ಕಾಯ್ದುಕೊಳ್ಳುವ ಬಗ್ಗೆ ಭಾರತವು ಪ್ರಸ್ತಾಪಿಸಿತು. ಅದರ ಪ್ರಕಾರ 2020ರ ಏಪ್ರಿಲ್ ಗೂ ಮೊದಲು ಚೀನಾದ ಸೈನಿಕರು ಗಡಿಯ ಯಾವ ಪ್ರದೇಶದಲ್ಲಿದ್ದರೋ ಅದೇ ಪ್ರದೇಶಕ್ಕೆ ವಾಪಸ್ ತೆರಳುವುದು ಭಾರತದ ವಾದವಾಗಿತ್ತು.
- ಭಾರತದ ನಿಯೋಗದಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿಜಿಕೆ ಮೆನನ್ ಕೂಡಾ ಭಾಗಿಯಾಗಿದ್ದರು. ಏಕೆಂದರೆ ಆಕ್ಟೋಬರ್ ತಿಂಗಳಿನಲ್ಲಿ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನಿವೃತ್ತರಾಗಲಿದ್ದು, ಅವರಿಂದ ಮೆನನ್ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ.
- ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯದರ್ಶಿ ನವಿನ್ ಶ್ರೀವಾಸ್ತವ್, ಮೇಜರ್ ಜನರಲ್ ಅಭಿಜಿತ್ ಬಾಪತ್ ಮತ್ತು ಮೇಜರ್ ಜನರಲ್ ಪದಮ್ ಶೆಖಾವತ್ ರನ್ನೊಳಗೊಂಡ ನಿಯೋಗವು ಕೂಡಾ ಸಭೆಯಲ್ಲಿ ಭಾಗಿಯಾಗಿತ್ತು.
ಗಡಿಯಲ್ಲಿ ಏಕಪಕ್ಷೀಯ ಬದಲಾವಣೆಯನ್ನು ಬಿಡಿ
ಭಾರತ ಮತ್ತು ಚೀನಾ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಿದ್ದಲ್ಲಿ ಏಕಪಕ್ಷೀಯ ಬದಲಾವಣೆಯ ಪ್ರಯತ್ನವನ್ನು ಮೊದಲು ಬಿಡಬೇಕು ಎಂದು ಚೀನಾಗೆ ಭಾರತವು ಎಚ್ಚರಿಸಿದೆ. ಎಲ್ಲಾ ಸಂಘರ್ಷಿತ ಪ್ರದೇಶಗಳನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಮತ್ತು ಯಥಾಸ್ಥಿತಿ ಕಾಯ್ದುಕೊಳ್ಳುವುದಕ್ಕೆ ಸೇನಾ ಪ್ರಕ್ರಿಯೆ ನಿಷ್ಕ್ರಿಯಗೊಳಿಸಬೇಕಿದೆ ಎಂದು ಭಾರತವು ಒತ್ತಿ ಹೇಳಿದೆ. ಗಡಿಯಲ್ಲಿ ಸೇನಾ ನಿಷ್ಕ್ರಿಯಗೊಳಿಸುವುದು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಎರಡೂ ಕಡೆಗಳಲ್ಲಿ ಮರುಸ್ಥಾಪನೆ ಮಾಡಿರುವ ಶಿಬಿರಗಳಿಂದ ಮೊದಲೇ ನಿಗದಿಗೊಳಿಸಿದ್ದ ಸೇನಾ ಶಿಬಿರಗಳಿಗೆ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಿದೆ ಎಂದು ಭಾರತೀಯ ಸಚಿವಾಲಯವು ತಿಳಿಸಿದೆ.
ಚೀನಾದ ವಾದವನ್ನು ಪ್ರಶ್ನಿಸಿದ ಭಾರತೀಯ ಸೇನೆ
ಭಾರತ ಮತ್ತು ಚೀನಾದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇಂಥ ಸಂದರ್ಭದಲ್ಲಿ ಕೇವಲ ಒಂದು ಅಥವಾ ಎರಡು ಪ್ರದೇಶಗಳಿಗೆ ಚರ್ಚೆಯನ್ನು ಸೀಮಿತಗೊಳಿಸುವುದು ಏಕೆ ಎಂದು ಚೀನಾವನ್ನು ಪ್ರಶ್ನಿಸಿರುವ ಬಗ್ಗೆ ಐಎಎನ್ಎಸ್ ಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ದಿಪ್ಸಾಂಗ್ ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ಎಲ್ಲ ಪ್ರದೇಶಗಳಲ್ಲಿ ಸೇನೆ ನಿಷ್ಕ್ಪಿಯಗೊಳಿಸುವ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.
6 ಎತ್ತರದ ಪ್ರದೇಶಗಳ ಮೇಲೆ ಭಾರತೀಯ ಸೇನೆ ಹಿಡಿತ
ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ಸಂಘರ್ಷಕ್ಕೆ ಪೂರ್ವ ಲಡಾಖ್ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನ ಪ್ರದೇಶವೂ ಮುಖ್ಯ ಕಾರಣವಾಗಿದೆ. ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರ ಮತ್ತು ಉತ್ತರ ಪ್ಯಾಂಗಾಂಗ್ ತ್ಸೋ ಸರೋವರದ ಪ್ರದೇಶಕ್ಕಾಗಿ ಎರಡು ಸೇನೆಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಕಳೆದ 20 ದಿನಗಳಲ್ಲೇ ಭಾರತೀಯ ಸೇನೆಯು ಗಡಿಯಲ್ಲಿರುವ 6 ಪರ್ವತಗಳ ಮೇಲೆ ಹಿಡಿತ ಸಾಧಿಸಿದೆ. ಮಗರ್ ಹಿಲ್, ಗುರುಂಗ್ ಹಿಲ್, ರೆಜಾಂಗ್ ಲಾ, ರಚನ್ ಲಾ, ಮೊಕ್ಪರಿ ಮತ್ತು ಫಿಂಗರ್ 4ನ ರಿಡ್ಜ್ ಲೈನ್ ಪರ್ವತದ ಮೇಲೆ ಭಾರತೀಯ ಯೋಧರು ಹಿಡಿತ ಸಾಧಿಸಿದ್ದಾರೆ. ಎರಡು ಸೇನೆಗಳು ಮುಖಾಮುಖಿ ಆಗುವುದಕ್ಕೂ ಮೊದಲು ಈ ಪ್ರದೇಶಗಳು ಮಾನವರಹಿತವಾಗಿದ್ದವು ಎನ್ನಲಾಗಿದೆ.