ಕೊರೊನಾ ಭಯ: ಭಾರತೀಯರಿಗೆ ಇಲ್ಲಿದೆ ಸಂತೋಷದ ಸುದ್ದಿ
ನವದೆಹಲಿ, ಫೆಬ್ರವರಿ.15: ಭಾರತದಲ್ಲಿ ಪ್ರತಿನಿತ್ಯ ಕೊರೊನಾವೈರಸ್ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೊವಿಡ್-19 ಸೋಂಕಿತ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆ ಹೆಚ್ಚಾಗುತ್ತಿದ್ದು, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,39,637ಕ್ಕೆ ಇಳಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 11,649 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 9,489 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ?
ದೇಶದಲ್ಲಿ ಒಟ್ಟು 1,09,16,589 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 1,06,21,220 ಸೋಂಕಿತರು ರೋಗದಿಂದ ಗುಣಮುಖರಾಗಿದ್ದಾರೆ. ಮಹಾಮಾರಿ ಕೊರೊನಾವೈರಸ್ ಸೋಂಕಿನಿಂದ 24 ಗಂಟೆಗಳಲ್ಲಿ 94 ಮೃತಪಟ್ಟಿದ್ದು, ಈವರೆಗೂ 1,55,732 ಜನರು ಪ್ರಾಣ ಬಿಟ್ಟಿದ್ದಾರೆ.
ಭಾರತದ 33 ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕಹಾನಿ
ಕೊರೊನಾವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯು 1.37 ಲಕ್ಷಕ್ಕೆ ಇಳಿಕೆಯಾಗಿದೆ. ದೇಶದ 33 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿರುವ ಬಗ್ಗೆ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದಿಯು ಮತ್ತು ದಮನ್, ತ್ರಿಪುರಾ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಮಿಜೋರಾಂ, ಲಡಾಖ್, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ಲಕ್ಷದ್ವೀಪ, ಚಂಡೀಘರ್, ಮೇಘಾಲಯ, ಪುದುಚೇರಿ, ಹಿಮಾಚಲ ಪ್ರದೇಶ, ಜಾರ್ಖಂಡ್, ಗೋವಾ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಉತ್ತರಾಖಂಡ್, ಒಡಿಶಾ, ಆಂಧ್ರ ಪ್ರದೇಶ, ಹರಿಯಾಣ, ದೆಹಲಿ, ರಾಜಸ್ಥಾನ, ಅಸ್ಸಾಂ, ತೆಲಂಗಾಣ, ಗುಜರಾತ್, ಮಧ್ಯ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಛತ್ತೀಸ್ ಗಢ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ 5000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿರುವುದು ಗೊತ್ತಾಗಿದೆ.
ಒಂದು ವಾರ ಕೊರೊನಾದಿಂದ ಮೃತಪಟ್ಟ ಪ್ರಕರಣವಿಲ್ಲ
ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯೂ ತೀರಾ ಕಡಿಮೆಯಾಗುತ್ತಿದೆ. 100 ಮತ್ತು 150ರ ಆಸುಪಾಸಿನಲ್ಲಿ ಸಾವಿನ ಸಂಖ್ಯೆ ದಾಖಲಾಗುತ್ತಿದೆ. ದೇಶದ 10 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ವಾರದಿಂದ ಕೊವಿಡ್-19 ಸೋಂಕಿನಿಂದ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ ಎಂದು ತಿಳಿದು ಬಂದಿದೆ. ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ, ದಿಯು ದಮನ್, ದಾದರ್ ನಗರ್, ಹವೇಲಿ, ಲಡಾಖ್, ಲಕ್ಷದ್ವೀಪ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾದಲ್ಲಿ ಸಾವಿನ ಪ್ರಕರಣಗಳೇ ದಾಖಲಾಗಿಲ್ಲ.
ದೇಶದ 6 ರಾಜ್ಯಗಳಲ್ಲೇ ಶೇ.80ರಷ್ಟು ಸೋಂಕಿತರು ಗುಣಮುಖ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9,489 ಸೋಂಕಿತರಿಗೆ ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಪೈಕಿ ಶೇ.80ರಷ್ಟು ಸೋಂಕಿತರು ಈ ಆರು ರಾಜ್ಯಗಳಲ್ಲೇ ಗುಣಮುಖ ಆಗಿರುವುದು ಸ್ಪಷ್ಟವಾಗಿದೆ. ಕೇರಳ - 4692, ಮಹಾರಾಷ್ಟ್ರ -1355, ಕರ್ನಾಟಕ - 486, ತಮಿಳುನಾಡು - 479, ಗುಜರಾತ್ -270 ಮತ್ತು ಪಶ್ಚಿಮ ಬಂಗಾಳದಲ್ಲಿ 262 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ದೇಶದ 6 ರಾಜ್ಯಗಳಲ್ಲಿ ಶೇ.86ರಷ್ಟು ಹೊಸ ಪ್ರಕರಣ
ಭಾರತದಲ್ಲಿ ಒಂದೇ ದಿನ 11,649 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರಲ್ಲಿ ಶೇ.86ರಷ್ಟು ಹೊಸ ಸೋಂಕಿತ ಪ್ರಕರಣಗಳು ಆರು ರಾಜ್ಯಗಳಲ್ಲೇ ಪತ್ತೆಯಾಗಿರುವುದು ಸ್ಪಷ್ಟವಾಗಿದೆ. ಕೇರಳ - 4612, ಮಹಾರಾಷ್ಟ್ರ - 4092, ತಮಿಳುನಾಡು - 470, ಕರ್ನಾಟಕ 414, ಗುಜರಾತ್ - 247 ಮತ್ತು ಪಂಜಾಬ್ - 232 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.