ಭ್ರಷ್ಟಾಚಾರ, ವಂಶಾಡಳಿತ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ವಂಶಾಡಳಿತ ವಿರುದ್ಧ ವಾಗ್ದಾಳಿ ನಡೆಸಿದರು.
76ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯ ಆವರಣದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಮತ್ತು ವಂಶಾಡಳಿತ ಭಾರತ ಎದುರಿಸುತ್ತಿರುವ ಅವಳಿ ದುಷ್ಪರಿಣಾಮಗಳಾಗಿವೆ. ನಾವು ಅದನ್ನು ಜಯಿಸಲು ಹೋರಾಡಬೇಕು. ವಂಶಾಡಳಿತವು ದೇಶದ ವ್ಯವಸ್ಥೆಗಳನ್ನು ಪೊಳ್ಳು ಮಾಡುತ್ತಿದ್ದು, ಅನೇಕ ಪ್ರಕರಣಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ ಎಂದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮಧ್ಯರಾತ್ರಿ ಸಿಎಂ ಬೊಮ್ಮಾಯಿ ಧ್ವಜಾರೋಹಣ
ಭ್ರಷ್ಟಾಚಾರವು ಗೆದ್ದಲಿನ ಹಾಗೆ ದೇಶವನ್ನು ಹಾಳು ಮಾಡುತ್ತಿದೆ. ದೇಶ ಇದರ ವಿರುದ್ಧ ಹೋರಾಡಬೇಕು. ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು. ಭಾರತವು ಭ್ರಷ್ಟರ ವಿರುದ್ಧ ಹಾಗೂ ಭ್ರಷ್ಟಾಚಾರದ ವಿರುದ್ಧ ಎಚ್ಚರಿಕೆ ವಹಿಸುವ ಅಗತ್ಯವಿದೆ. ಭ್ರಷ್ಟಾಚಾರವನ್ನು ಮಾಡುವವರನ್ನು ಶಿಕ್ಷಿಸಲು ನಾವು ಒಂದು ಸಮಾಜವಾಗಿ ಒಗ್ಗೂಡಬೇಕಾಗಿದೆ. ನಾವು ದೇಶದಿಂದ ಹೊರಹೋದ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಬೇಕಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನನಗೆ ಸಹಾಯ ಮಾಡಲು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.
ವಂಶಾಡಳಿತ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ
ಚುನಾವಣಾ ಸಮಯದಲ್ಲಿ ಬಿಜೆಪಿಯ ಪ್ರಚಾರದ ತುಣುಕನ್ನು ಮತ್ತೆ ಉದ್ಘರಿಸಿದ ಮೋದಿ "ಭಾಯಿ-ಭತೀಜವಾದ್, ಪರಿವಾರವಾದ (ವಂಶಾಡಳಿತ) ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ವಂಶಾಡಳಿತದ ನೆರಳು ನಮ್ಮಲ್ಲಿ ಹಲವಾರು ಸಂಸ್ಥೆಗಳ ಮೇಲೆ ಇದೆ. ನಮ್ಮ ಹಲವಾರು ಸಂಸ್ಥೆಗಳು ಕುಟುಂಬ ಆಡಳಿತದಿಂದ ಪ್ರಭಾವಿತವಾಗಿವೆ. ಅದು ನಮ್ಮ ಪ್ರತಿಭೆ, ರಾಷ್ಟ್ರದ ಸಾಮರ್ಥ್ಯಗಳಿಗೆ ಹಾನಿ ಮಾಡುವುದಲ್ಲದೆ ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಸರ್ಕಾರಿ ಸಂಸ್ಥೆಗಳನ್ನು ಉಳಿಸಲು ನಾವು ಇದಕ್ಕೆ ಅಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಕುಟುಂಬದ ಕಲ್ಯಾಣವು ರಾಷ್ಟ್ರದ ಕಲ್ಯಾಣದೊಂದಿಗೆ ಯಾವುದೇ ಸಂಬಂಧವಿಲ್ಲ ಇರುವುದಿಲ್ಲ. ಕುಟುಂಬದ ಸಂಕೋಲೆಯಿಂದ ಭಾರತದ ರಾಜಕೀಯ ಮತ್ತು ಸಂಸ್ಥೆಗಳನ್ನು ಶುದ್ಧೀಕರಿಸೋಣ ಎಂದು ಅವರು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಕ್ರಾಂತಿಯನ್ನು ಆರಂಭಿಸಬೇಕಿದೆ
ಸರ್ಕಾರಿ ಸಂಸ್ಥೆಗಳಲ್ಲಿ, ಕ್ರೀಡೆಗಳಲ್ಲಿ ಇದನ್ನು ತಡೆಯಬೇಕಾಗಿದೆ. ಇದರ ವಿರುದ್ಧ ಕ್ರಾಂತಿಯನ್ನು ಆರಂಭಿಸಬೇಕಾಗಿದೆ. ಇದು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿದ್ದು, ನಮಗೆ ಪಾರದರ್ಶಕತೆ ಬೇಕು. ವಂಶಾಡಳಿತ ರಾಜಕಾರಣವು ಕಾಂಗ್ರೆಸ್ ವಿರುದ್ಧ ಬಿಜೆಪಿಯ ದೊಡ್ಡ ಆರೋಪಗಳಲ್ಲಿ ಒಂದಾಗಿದೆ. ಸಮಾಜವಾದಿ ಪಕ್ಷವು ಮಾಯಾವತಿಯೊಂದಿಗೆ ಮೈತ್ರಿ ಮಾಡಿಕೊಂಡಾಗ ಅದರ ವಿರುದ್ಧ "ಭಾಯ್-ಭತೀಜವಾದ್" ಮತ್ತು "ಬುವಾ-ಭತೀಜಾ" ನಂತಹ ಪದಗಳನ್ನು ಉದಾರವಾಗಿ ಬಳಸಲಾಗುತ್ತಿತ್ತು ಎಂದು ಹೇಳಿದರು.
ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ
ಈ ವರ್ಷದ ಆರಂಭದಲ್ಲಿ ರಾಜ್ಯ ಚುನಾವಣೆಗಳ ನಂತರ ಬಿಜೆಪಿ ಸಂಸದರ ಮಕ್ಕಳನ್ನು ಕಣಕ್ಕೆ ಇಳಿಸದಿರುವುದು ತನ್ನ ನಿರ್ಧಾರ ಎಂದು ಪ್ರಧಾನಿ ಮೋದಿ ಹೇಳಿದರು. ಹಲವು ಸಂಸದರು ಮತ್ತು ಪಕ್ಷದ ಮುಖಂಡರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಟಿಕೆಟ್ ಬಯಸಿದ್ದರು. ಅವರಲ್ಲಿ ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಸಂಸದರ ಮಕ್ಕಳಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ. ಏಕೆಂದರೆ ಅದು ವಂಶಪಾರಂಪರ್ಯ ರಾಜಕಾರಣಕ್ಕೆ ಬರುತ್ತದೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಹಲವರಿಗೆ ನನ್ನಿಂದ ಟಿಕೆಟ್ ಸಿಗಲಿಲ್ಲ ಎಂದು ಹೇಳಿದ್ದರು.
ಸ್ವಾತಂತ್ರ್ಯ ಹೋರಾಟಗಾರರ ಕನಸಿಗಾಗಿ ಪ್ರತಿಜ್ಞೆ
ಭಾಷಣದಲ್ಲಿ ನರೇಂದ್ರ ಮೋದಿ "ನಾರಿ ಶಕ್ತಿ" (ಮಹಿಳಾ ಶಕ್ತಿ) ಘನತೆಗೆ ವಿಶೇಷ ಒತ್ತು ನೀಡಿದರು. ಭಾರತಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸಾಗಿಸಲು ಐದು ಪ್ರತಿಜ್ಞೆಗಳನ್ನು ಪಟ್ಟಿ ಮಾಡಿದ ಅವರು, ಮಾತು ಮತ್ತು ನಡವಳಿಕೆಯಲ್ಲಿ ನಾವು ಮಹಿಳೆಯರ ಘನತೆಯನ್ನು ಕಡಿಮೆ ಮಾಡುವ ಯಾವುದನ್ನೂ ಮಾಡದಿರುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು.