ಪ್ರಣವ್ ಭೇಟಿ ಬಳಿಕ ಆರ್ಎಸ್ಎಸ್ ಸೇರುವವರ ಸಂಖ್ಯೆ 5 ಪಟ್ಟು ಹೆಚ್ಚಳ
ಕೋಲ್ಕತಾ, ಜೂನ್ 26: ದೇಶದಾದ್ಯಂತ ವ್ಯಾಪಕ ಚರ್ಚೆಗೊಳಗಾಗಿದ್ದ ಆರ್ಎಸ್ಎಸ್ ಕೇಂದ್ರ ಕಚೇರಿಯಲ್ಲಿನ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಭಾಷಣ ಆರ್ಎಸ್ಎಸ್ ವರ್ಚಸ್ಸನ್ನು ಹೆಚ್ಚಿಸಿದೆ.
ಜೂನ್ 7ರಂದು ನಾಗಪುರದಲ್ಲಿ ಪ್ರಣವ್ ಮುಖರ್ಜಿ ಅವರು ಭಾಷಣ ಮಾಡಿದ ಬಳಿಕ ಆರ್ಎಸ್ಎಸ್ ಸೇರಿಕೊಳ್ಳಲು ಬರುತ್ತಿರುವ ಅರ್ಜಿಗಳ ಸಂಖ್ಯೆ ಐದು ಪಟ್ಟು ಹೆಚ್ಚಳವಾಗಿದೆ ಎಂದು ಆರ್ಎಸ್ಎಸ್ನ ಹಿರಿಯ ಮುಖಂಡ ಬಿಪ್ಲವ್ ರಾಯ್ ತಿಳಿಸಿದ್ದಾರೆ.
ಜೂನ್ 1ರಿಂದ 6ರವರೆಗೆ ನಮ್ಮ ರಾಷ್ಟ್ರೀಯ ಮಟ್ಟದ ವೆಬ್ಸೈಟ್ 'ಜಾಯಿನ್ ಆರ್ಎಸ್ಎಸ್'ಗೆ ನಿತ್ಯ ಸರಾಸರಿ 378 ಅರ್ಜಿಗಳು ಬಂದಿದ್ದವು.
ವಿವಿಧತೆಯಲ್ಲಿ ಏಕತೆ ನಮ್ಮ ದೊಡ್ಡ ಶಕ್ತಿ: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್
ಪ್ರಣವ್ ಮುಖರ್ಜಿ ಅವರು ಭಾಷಣ ಮಾಡಿದ ದಿನವಾದ ಜೂನ್ 7ರಂದು ನಮಗೆ 1,779 ಮನವಿಗಳು ಬಂದಿದ್ದವು. ಜೂನ್ 7ರ ಬಳಿಕ ನಮಗೆ ನಿತ್ಯ 1,200-1,300 ಅರ್ಜಿಗಳು ಬರುತ್ತಿವೆ. ಇದರಲ್ಲಿ ಪಶ್ಚಿಮ ಬಂಗಾಳದಿಂದಲೇ ಶೇ 40ರಷ್ಟು ಮನವಿಗಳು ಬಂದಿವೆ ಎಂದು ರಾಯ್ ಅವರು ತಿಳಿಸಿದ್ದಾರೆ.
ಆರ್ಎಸ್ಎಸ್ ಜನಪ್ರಿಯತೆ ಹೆಚ್ಚಳ
ಪ್ರಣವ್ ಮುಖರ್ಜಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರಣದಿಂದ ಆರ್ಎಸ್ಎಸ್ ಜನಪ್ರಿಯತೆ ಹೆಚ್ಚಳವಾಯಿತೇ ಎಂಬ ಪ್ರಶ್ನೆಗೆ, ಮುಖರ್ಜಿ ಅವರ ಕಾರಣದಿಂದ ಈ ರೀತಿ ಹೆಚ್ಚಳವಾಗಿದೆ ಎಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ.
ಆರ್ಎಸ್ಎಸ್ಅನ್ನು ಒಪ್ಪಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸಮಾಜದಲ್ಲಿನ ಚಟುವಟಿಕೆಗಳಿಂದಾಗಿ ಆರ್ಎಸ್ಎಸ್ ಜನರ ನಡುವೆ ಜನಪ್ರಿಯತೆ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಆದರೆ, ಪ್ರಣವ್ ಅವರ ಭಾಷಣದ ಬಳಿಕ ಜನರಲ್ಲಿ ಆರ್ಎಸ್ಎಸ್ ಕಡೆಗೆ ಆಸಕ್ತಿ ಹೆಚ್ಚಾಗಿದೆ. ಕಾರಣಗಳಲ್ಲಿ ಇದೂ ಒಂದು ಎಂದು ಅವರು ಒಪ್ಪಿಕೊಂಡಿದ್ದಾರೆ.
ಅನೇಕ ರಾಜಕೀಯ ಪಕ್ಷಗಳು ಸಹಿಷ್ಣುತೆಯ ಕುರಿತು ಮಾತನ್ನಾಡುತ್ತವೆ. ಆದರೆ ನಮ್ಮ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮುಖರ್ಜಿ ಅವರ ನಿರ್ಧಾರದ ಕುರಿತೇ ಅವರು ಅಸಹಿಷ್ಣುತೆ ಹೊಂದಿದ್ದರು.
ನಮ್ಮ ಕಾರ್ಯಕ್ರಮಗಳಲ್ಲಿ ಈ ಹಿಂದೆ ಅನೇಕ ಪ್ರಮುಖ ವ್ಯಕ್ತಿಗಳು ಭಾಷಣ ಮಾಡಿದ್ದರು ಎಂದು ರಾಯ್ ತಿಳಿಸಿದ್ದಾರೆ.
ಪ್ರಣಬ್ ಮಾತು, ಆರೆಸ್ಸೆಸ್ಸಿಗೆ ಛಾಟಿ ಏಟು: ಪಿ.ಚಿದಂಬರಂ
ಬಂಗಾಳದಲ್ಲಿ ನೋಂದಣಿ ಏರಿಕೆ
ಹೊಸ ಸದಸ್ಯತ್ವದ ನೋಂದಣಿಯಲ್ಲಿ ಆರ್ಎಸ್ಎಸ್ ಕರ್ನಾಟಕದ ಬಳಿಕ ಪಶ್ಚಿಮ ಬಂಗಾಳದಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿ ಸ್ಥಿರ ಬೆಳವಣಿಗೆ ಹೊಂದುತ್ತಿದೆ.
ಕೆಲವು ವರ್ಷಗಳ ಹಿಂದೆ ದಕ್ಷಿಣ ಬಂಗಾಳದಲ್ಲಿ ಆರ್ಎಸ್ಎಸ್ 700 ಶಾಖೆಗಳನ್ನು ಮತ್ತು ಉತ್ತರ ಬಂಗಾಳದಲ್ಲಿ 300 ಶಾಖೆಗಳನ್ನು ನಡೆಸುತ್ತಿತ್ತು. ಆದರೆ ಈಗ ಕ್ರಮವಾಗಿ 1,200 ಮತ್ತು 400 ಶಾಖೆಗಳನ್ನು ಹೊಂದಿದೆ ಎಂದು ಅವರು ವಿವರಿಸಿದ್ದಾರೆ.
ಆರೆಸ್ಸೆಸ್, ಪ್ರಣಬ್ ಮುಖರ್ಜಿ ಮತ್ತು ರಾಷ್ಟ್ರಭಕ್ತಿ ಸ್ಫುರಿಸುವ ಮಾತು
ಥ್ಯಾಂಕ್ಯೂ ಪ್ರಣಬ್ ದಾ!
ತನ್ನ ಕಾರ್ಯಕ್ರಮಕ್ಕೆ ಭೇಟಿ ನೀಡಿ ಭಾಷಣ ಮಾಡಿದ್ದಕ್ಕಾಗಿ ಸಂಘದ ಮನಮೋಹನ್ ವೈದ್ಯ ಅವರು ಪ್ರಣವ್ ಮುಖರ್ಜಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
'ಒಂದು ಭಾರತ' ಮತ್ತು 'ಭಾರತೀಯ ಸಂಸ್ಕೃತಿ' ಕುರಿತು ಪ್ರಣವ್ ಅವರ ಅಭಿಪ್ರಾಯವನ್ನು ಶ್ಲಾಘಿಸಿರುವ ವೈದ್ಯ, 'ತಮ್ಮದೇ ಜನರ ವಿರೋಧದ ನಡುವೆಯೂ' ನಾಗಪುರದ ಕಚೇರಿಗೆ ಬಂದು ಭಾಷಣ ಮಾಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಪತ್ರವನ್ನು ಅವರು ಆರ್ಎಸ್ಎಸ್ ವೆಬ್ಸೈಟ್ನಲ್ಲಿ ಬಹಿರಂಗವಾಗಿ ಪ್ರಕಟಿಸಲಾಗಿದೆ.
ಭಾಗ್ವತ್ ಮಾತಿಗೂ ಸಾಮ್ಯತೆ
ಭಾಷೆ ಮತ್ತು ಪದಗಳ ಬಳಕೆ ಬೇರೆಯದ್ದಾದರೂ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಭಾಷಣ ಮತ್ತು ಮುಖರ್ಜಿ ಅವರು ಆಡಿದ ಮಾತುಗಳಿಗೂ ಸಾಮ್ಯತೆ ಇದೆ. ಅದರಲ್ಲಿ ವಿವಾದಕ್ಕೆ ಆಸ್ಪದ ಕೊಡುವ ಯಾವುದೇ ಅಂಶವಿಲ್ಲ. ಅವರ ಸರಳತೆ ಪ್ರತಿಯೊಬ್ಬರನ್ನೂ ಸ್ಪರ್ಶಿಸಿದೆ ಎಂದು ವೈದ್ಯ ಹೇಳಿದ್ದಾರೆ.
ಟೀಕಿಸಿದ್ದ ಮಗಳು
ಪ್ರಣವ್ ಮುಖರ್ಜಿ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಕ್ಕೆ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಪ್ರಣವ್ ಅವರ ಮಗಳು ಶರ್ಮಿಷ್ಠಾ ಕೂಡ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಭಾಷಣಗಳು ಮರೆತುಹೋಗುತ್ತವೆ. ಆದರೆ ಅದರ ದೃಶ್ಯಾವಳಿಗಳು ಸುಳ್ಳು ಹೇಳಿಕೆಗಖೊಂದಿಗೆ ಹರಿದಾಡುತ್ತವೆ ಎಂದು ಮಾರ್ಮಿಕವಾಗಿ ಅವರು ಟ್ವೀಟ್ ಮಾಡಿದ್ದರು. ತಂದೆಗೆ ಆರ್ಎಸ್ಎಸ್ ಬರೆದಿರುವ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.