'ಪಿಎಂ ಮೋದಿ ಸೂಚಿಸದೆ ಮಲ್ಯನನ್ನು ಬಿಟ್ಟು ಕಳಿಸುತ್ತಿತ್ತೇ ಸಿಬಿಐ?'
ವಿಜಯ್ ಮಲ್ಯ ದೇಶ ಬಿಟ್ಟುಹೋಗಲು ಸಹಕರಿಸಿದ ಸಿಬಿಐ, ಪ್ರಧಾನಿ ನರೇಂದ್ರ ಮೋದಿ ಅವರ ಅನುಮತಿ ಇಲ್ಲದೆ ಹಾಗೆ ನಡೆದುಕೊಂಡಿದೆ ಅನ್ನೋದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮೂಲಕ ಆರೋಪ ಮಾಡಿರುವ ರಾಹುಲ್ ಗಾಂಧಿ, ವಶಕ್ಕೆ ಪಡೆಯಬೇಕು ಎಂದಿದ್ದ ನೋಟಿಸ್ ಅನ್ನು ಮಾಹಿತಿ ನೀಡಬೇಕು ಎಂದು ಬದಲಾಯಿಸುವ ಮೂಲಕ ಸಿಬಿಐನಿಂದ ಮಲ್ಯ ದೇಶ ಬಿಟ್ಟು ಹೋಗಲು ಸಹಾಯ ದೊರೆತಿದೆ. ಪ್ರಧಾನಮಂತ್ರಿಗಳಿಗೇ ನೇರವಾಗಿ ಸಿಬಿಐ ರಿಪೋರ್ಟ್ ಮಾಡಿಕೊಳ್ಳುತ್ತದೆ. ಇಂಥ ಹೈ ಪ್ರೊಫೈಲ್ ಪ್ರಕರಣದಲ್ಲಿ ಪ್ರಧಾನಿ ಅನುಮತಿ ಇಲ್ಲದೆ ಲುಕ್ ಔಟ್ ನೋಟಿಸ್ ಬದಲಿಸುತ್ತದೆ ಅನ್ನೋದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.
ಮಲ್ಯರನ್ನು ಭೇಟಿ ಮಾಡಿದ ಜೇಟ್ಲಿ ರಾಜೀನಾಮೆಗೆ ಆಗ್ರಹಿಸಿದ ರಾಹುಲ್
ಲಂಡನ್ ಗೆ ತೆರಳುವ ಮುನ್ನ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಆಗಿದ್ದಾಗಿ ಸದ್ಯಕ್ಕೆ ಲಂಡನ್ ನಲ್ಲಿರುವ ವಿಜಯ್ ಮಲ್ಯ ಬುಧವಾರ ಹೇಳಿಕೊಂಡಿದ್ದರು. ಆದರೆ ಈ ಮಾತನ್ನು ಜೇಟ್ಲಿ ನಿರಾಕರಿಸಿದ್ದಾರೆ. ನನಗೆ ಸ್ವಲ್ಪ ಹೊತ್ತು ಪಾರ್ಲಿಮೆಂಟ್ ನಲ್ಲಿ ಸಿಕ್ಕಿದ್ದರು ಎಂದಿದ್ದಾರೆ. ಆ ಹೇಳಿಕೆ ಬಂದ ಸ್ವಲ್ಪ ಹೊತ್ತಿಗೆ, ಅದು ಅಧಿಕೃತ ಭೇಟಿಯಾಗಿರಲಿಲ್ಲ ಎಂದು ಮಲ್ಯ ಹೇಳಿದ್ದಾರೆ.
ಆದರೆ, ರಾಹುಲ್ ಗಾಂಧಿ ಅವರು ಆರೋಪ ಮಾಡಿದ್ದು, ಮಲ್ಯ ತುಂಬ ಆರಾಮಾಗಿ ದೇಶ ತೊರೆದು ಹೋಗಲು ಅರುಣ್ ಜೇಟ್ಲಿ ಸಹಕರಿಸಿದ್ದಾರೆ ಎಂದಿದ್ದಾರೆ. ಜೇಟ್ಲಿ-ಮಲ್ಯ ಹದಿನೈದು-ಇಪ್ಪತ್ತು ನಿಮಿಷ ಮಾತನಾಡುವುದನ್ನು ನಾನು ನೋಡಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಪುನಿಯಾ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಪಕ್ಷ ಈಗ ಸಾಕ್ಷಿ ಎಂಬಂತೆ ಹೇಳಿತ್ತಿದೆ.
ವಿಜಯ್ ಮಲ್ಯ -ಜೇಟ್ಲಿ ಭೇಟಿ, ಸ್ವಾಮಿ ಹೇಳಿದ ಸತ್ಯಕಥೆ
ಇನ್ನು ಬಿಜೆಪಿಯಿಂದ ಕಾಂಗ್ರೆಸ್ ಗೆ ತೀರುಗೇಟು ನೀಡಿದ್ದು, ಗಾಂಧಿ ಕುಟುಂಬವು ಮುಳುಗುತ್ತಿದ್ದ ಕಿಂಗ್ ಫಿಷರ್ ಏರ್ ಲೈನ್ಸ್ ಜತೆಗೆ ಸಿಹಿಯಾದ ವ್ಯವಹಾರ ಮಾಡಲು ಆಲೋಚಿಸಿತ್ತು ಎಂದಿದೆ. ಕಿಂಗ್ ಫಿಷರ್ ಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 2010ರಲ್ಲಿ ಹಲವು ನಿಯಮಗಳನ್ನು ಯುಪಿಎ ಸಡಿಲಿಕೆ ಮಾಡಿತ್ತು. ಇದರಲ್ಲಿ ಆಗಿನ ಪ್ರಧಾನಿ ಮನ್ ಮೋಹನ್ ಸಿಂಗ್ ಕೂಡ ಒಳಗೊಂಡಿದ್ದಾರೆ. ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಮತ್ತಷ್ಟು ಸಾಲ ಸಿಗಲು ಅದೇ ಕಾರಣ ಎಂದು ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.