ಉಗ್ರರಿಗೆ ಧನ ಸಹಾಯ: ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ ಸರ್ಕಾರ
ಕಾಶ್ಮೀರದಲ್ಲಿ ಉಗ್ರರಿಗೆ ಆರ್ಥಿಕ ಸವಲತ್ತು ನೀಡುವ ಪ್ರಕರಣದ ತನಿಖೆಗೆ ಇಳಿದ ಆದಾಯ ತೆರಿಗೆ ಇಲಾಖೆ. ಹುರಿಯತ್ ನಾಯಕರ ವಿರುದ್ಧದ ಪ್ರಕರಣಗಳ ತನಿಖೆಯಲ್ಲಿ ಎನ್ಐಎ ಜತೆಗೆ ಸಾಥ್.
ನವದೆಹಲಿ, ಆಗಸ್ಟ್ 28: ಕಾಶ್ಮೀರದಲ್ಲಿನ ಹಿಂಸಾಚಾರಗಳಿಗೆ, ಅಲ್ಲಿನ ಉಪಟಳ ನೀಡುವ ಉಗ್ರವಾದಿಗಳಿಗೆ ಧನ ಸಹಾಯ ಮಾಡುವ ವ್ಯಕ್ತಿಗಳ ವಿರುದ್ಧದ ತನಿಖೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಚುರುಕುಗೊಳಿಸಿದೆ. ಈವರೆಗೆ ಇದರ ತನಿಖೆಯ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ತನಿಖಾ ಆಯೋಗದ (ಎನ್ಐಎ) ಜತೆಗೀಗ ಕೇಂದ್ರೀಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೂ ಕೈ ಜೋಡಿಸಿದ್ದು, ಈ ಪ್ರಕರಣದಡಿ ಬಂಧಿತರಾಗಿರುವ ಎಲ್ಲರ ವ್ಯವಹಾರಗಳನ್ನು ಜಾಲಾಡಲಾರಂಭಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿಸಲಾಗಿದ್ದ ಶ್ರೀನಗರ ಮೂಲದ ಝಹೂರ್ ವಾಟಾಲಿ ಬಗ್ಗೆ ಅನೇಕ ದಾಖಲೆಗಳನ್ನು ಎನ್ಐಎ ಕಲೆಹಾಕಿದ್ದು, ಇವುಗಳ ಪರಿಶೀಲನೆಯನ್ನು ಈಗ ಐಟಿ ಇಲಾಖೆಯ ಅಧಿಕಾರಿಗಳು ವಹಿಸಿಕೊಂಡಿದ್ದಾರೆ.
ಇದಕ್ಕಾಗಿ, ಅನೇಕ ಚಾರ್ಟರ್ಡ್ ಅಕೌಂಟಂಟ್ ಗಳನ್ನು ಇದರ ತನಿಖೆಗಾಗಿ ನೇಮಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಐಎ ಅಧಿಕಾರಿಯೊಬ್ಬರು, ''ವಾಟಾಲಿ ಅವರು ಅನೇಕ ಉಗ್ರರಿಗೆ ಆರ್ಥಿಕವಾಗಿ ಆಧಾರ ಸ್ತಂಭವಾಗಿದ್ದರೆಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅವರ ಎಲ್ಲಾ ವ್ಯವಹಾರಗಳ ಮೂಲಗಳು, ನಗದು ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಐಟಿ ಇಲಾಖೆಗೆ ಒಪ್ಪಿಸಲಾಗಿದ್ದು,ಅವುಗಳ ಕೂಲಂಕಷ ಅಧ್ಯಯನ ನಡೆಸಲಾಗುವುದು'' ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಕಣಿವೆ ರಾಜ್ಯದಲ್ಲಿ ಇರುವ ಹಿಂಸಾಚಾರವನ್ನು ಶತಾಯ ಗತಾಯ ತಡೆಗಟ್ಟಲು ಕೇಂದ್ರ ಸರ್ಕಾರ ಅವಿರತ ಶ್ರಮ ಹಾಕಿದೆ. 2022ರ ವೇಳೆಗೆ ಕಾಶ್ಮೀರ ಸಮಸ್ಯೆ ಇರದು ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.