ಅಫ್ಘಾನ್ನಲ್ಲಿ ಭಾರತೀಯನ ಅಪಹರಣ: 'ಸಂಬಂಧಿಸಿದ ಎಲ್ಲರೊಂದಿಗೆ ಸಂಪರ್ಕವಿದೆ' ಎಂದ ಭಾರತ
ನವದೆಹಲಿ, ಸೆಪ್ಟೆಂಬರ್ 16: ಅಫ್ಘಾನಿಸ್ತಾನದಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರ ಅಪಹರಣವಾಗಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಸಂಬಂಧಪಟ್ಟ ಎಲ್ಲರೊಂದಿಗೆ ನಾವು ಸಂಪರ್ಕವನ್ನು ಹೊಂದಿದ್ದೇವೆ ಎಂದು ತಿಳಿಸಿದೆ. ಸುಮಾರು 50 ವರ್ಷ ಪ್ರಾಯದ ಭಾರತ ಮೂಲದ ಅಫ್ಘಾನ್ ವ್ಯಕ್ತಿಯನ್ನು ಕಾಬೂಲ್ನ ಕರ್ತೆ ಪಾರ್ವನ್ ಪ್ರದೇಶದಲ್ಲಿ ಬಂದೂಕು ತೋರಿಸಿ ಬೆದರಿಸಿ ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದಾರೆ.
"ಸುಮಾರು 50 ವರ್ಷ ಪ್ರಾಯದ ಬನ್ಸುರಿ ಲಾಲ್ ಎಂಬ ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಕಾಬೂಲ್ನಲ್ಲಿ ಕಳೆದ ರಾತ್ರಿ ಅಪಹರಣ ಮಾಡಲಾಗಿದೆ. ಬನ್ಸುರಿ ಲಾಲ್ ಗೋದಾಮಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಅಪಹರಣ ಮಾಡಲಾಗಿದೆ," ಎಂದು ದೆಹಲಿಯ ಸಿಖ್ ಗುರುದ್ವಾರ ನಿರ್ವಹಣೆ ಸಮಿತಿಯ ಅಧ್ಯಕ್ಷರೂ ಕೂಡಾ ಆಗಿರುವ ಮಾಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಕಾಬೂಲ್ನಲ್ಲಿ ಭಾರತ ಮೂಲದ ಅಫ್ಘಾನ್ ವ್ಯಕ್ತಿಯ ಅಪಹರಣ
"ಬಂದೂಕನ್ನು ಹಿಡಿದು ಬೆದರಿಸಿದ ಐದು ಮಂದಿ ಬನ್ಸುರಿ ಲಾಲ್ ಅನ್ನು ಕಾರಿಗೆ ಬಲವಂತವಾಗಿ ತಳ್ಳಿದ್ದಾರೆ. ಆತನ ಸಹೋದರ ಹಾಗೂ ಕುಟುಂಬದ ಇತರ ಮಂದಿಗಳು, ಹಿಂದೂ ಸಮುದಾಯದವರು ಸಹಾಯಕ್ಕಾಗಿ ಯಾಚಿಸಿದರು, ನಾನು ಸಹಾಯಕ್ಕಾಗಿ ಸರ್ಕಾರದ ಬಳಿ ಮನವಿ ಮಾಡುತ್ತಿದ್ದೇನೆ," ಎಂದು ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಾಮ್ ಬಾಗ್ಚಿ, "ನಾವು ಅಪ್ಘಾನಿಸ್ತಾನದಲ್ಲಿ ಸಂಬಂಧ ಪಟ್ಟವರೊಂದಿಗೆ ಸಂಪರ್ಕದಲ್ಲಿ ಇದ್ದೇವೆ. ಕಾಬೂಲ್ನಲ್ಲಿ ಭಾರತ ಮೂಲದ ವ್ಯಕ್ತಿಯನ್ನು ಅಪಹರಣ ಮಾಡಲಾಗಿದೆ ಎಂದು ವರದಿಯಾಗಿರುವ ಹಿನ್ನೆಲೆ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ನಾವು ಈ ವಿಚಾರದಲ್ಲಿ ತನಿಖೆಯನ್ನು ಮುಂದುವರಿಸುತ್ತೇವೆ," ಎಂದಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಬನ್ಸುರಿ ಲಾಲ್ ಭಾರತದ ನಾಗರಿಕ ಹೌದೇ ಎಂದು ಪ್ರತ್ಯೇಕವಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಅರೀಂದಾಮ್ ಬಾಗ್ಚಿ, "ನನಗೆ ತಿಳಿದಿರುವಂತೆ ಅಪಹರಣಕ್ಕೆ ಒಳಗಾಗಿದ್ದಾನೆ ಎಂದು ಹೇಳಲಾದ ವ್ಯಕ್ತಿ ಭಾರತೀಯ ಪ್ರಜೆ, ಆದರೆ ನಾವು ಈ ಬಗ್ಗೆಯೂ ತನಿಖೆಯನ್ನು ನಡೆಸುತ್ತಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ. ಇನ್ನು ಫರಿದಾಬಾದ್ನಲ್ಲಿ ಬನ್ಸುರಿ ಲಾಲ್ ಕುಟುಂಬವು ವಾಸವಾಗಿದೆ ಎಂದು ಹೇಳಲಾಗಿದೆ. ಆದರೆ ಆತ ಕಳೆದ ಎರಡು ದಶಕದಿಂದ ಕಾಬೂಲ್ನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದೆ.
'ಅಫ್ಘಾನ್ ಸ್ಥಿತಿ ದುರ್ಬಲ, ಸರ್ಕಾರದಲ್ಲಿ ಸರ್ವರಿಗೂ ಪ್ರಾತಿನಿಧ್ಯ ಅಗತ್ಯ': ಭಾರತ
ಇನ್ನು ಮಾಧ್ಯಮದ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರೀಂದಾಮ್ ಬಾಗ್ಚಿ, "ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿರುವ ಭಾರತೀಯರನ್ನು ಹಿಂದಕ್ಕೆ ಕರೆದುಕೊಂಡು ಬರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಕಷ್ಟ," ಎಂದು ಹೇಳಿದರು. "ಕಾಬೂಲ್ನಲ್ಲಿ ವಿಮಾನ ಪ್ರಯಾಣ ಎಂದಿನವರೆಗೆ ಆರಂಭವಾಗುವುದಿಲ್ಲವೋ, ಅಲ್ಲಿಯವರೆಗೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ಹೇಗೆ ಕರೆದುಕೊಂಡು ಬರುವುದು ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವುದು ಕಷ್ಟ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಪುನಃ ಆರಂಭ ಮಾಡುವುದು ಈ ಸಂದರ್ಭದಲ್ಲಿ ನಮ್ಮ ಗುರಿಯಾಗಿದೆ. ಅಲ್ಲಿ ವಿಮಾನ ಕಾರ್ಯಾಚರಣೆ ಆರಂಬಭವಾದರೆ ಅಫ್ಘಾನಿಸ್ತಾನದಲ್ಲಿ ಉಳಿದಿರುವ ಭಾರತೀಯರು ಭಾರತಕ್ಕೆ ಕರೆ ತರುವುದು ನಮಗೆ ಸುಲಭವಾಗುತ್ತದೆ," ಎಂದು ವಿವರಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರ ಅಪಹರಣವಾಗಿದೆ ಎಂದು ಹೇಳಿರುವ ಅಕಾಳಿದಳದ ನಾಯಕ ಮಾಜಿಂದರ್ ಸಿಂಗ್ ಸಿರ್ಸಾ ತನ್ನ ಟ್ವೀಟ್ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು "ನಮಗೆ ಈ ಬಗ್ಗೆ ಮಾಹಿತಿ ಲಭಿಸಿದೆ, ನಾವು ತನಿಖೆಯನ್ನು ನಡೆಸುತ್ತಿದ್ದೇವೆ," ಎಂದು ತಿಳಿಸಿದೆ. ಇನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತ್ರವಲ್ಲದೇ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ರನ್ನು ಕೂಡಾ ಟ್ಯಾಗ್ ಮಾಡಲಾಗಿದೆ. ಇನ್ನು ಬೇರೆ ಮಾಧ್ಯಮಗಳು, ಬನ್ಸುರಿ ಲಾಲ್ ಕುಟುಂಬವು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ.
(ಒನ್ ಇಂಡಿಯಾ ಸುದ್ದಿ)