ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್
ನವದೆಹಲಿ, ಸೆ 27: ಭಾರತದ ವಿದೇಶಾಂಗ ಸಚಿವ ಸುಬ್ರಮಣ್ಯಂ ಜೈಶಂಕರ್ ಅವರ ಭಾಷಣವನ್ನು ಪಾಕ್ ವಿದೇಶಾಂಗ ಸಚಿವರು ಬಹಿಷ್ಕರಿಸಿದರು. ಇದಕ್ಕೆ ಪ್ರತಿಯಾಗಿ, ಪಾಕ್ ಸಚಿವರ ಭಾಷಣದ ವೇಳೆ, ಭಾರತದ ಸಚಿವರು ಗೈರಾದರು.
ವಿಶ್ವಸಂಸ್ಥೆಯ ಸಾಮಾನ್ಯ ಸಾರ್ಕ್ ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ, ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರುಗಳು, ಒಬ್ಬರು ಇನ್ನೊಬ್ಬರ ಭಾಷಣವನ್ನು ಬಾಯ್ಕಾಟ್ ಮಾಡಿದ್ದಾರೆ.
'ಚೀನಾದಲ್ಲಿನ ಮುಸ್ಲಿಮರ ಸ್ಥಿತಿ ಬಗ್ಗೆ ಇಮ್ರಾನ್ ಏಕೆ ತುಟಿ ಬಿಚ್ಚುವುದಿಲ್ಲ?'
ಗುರುವಾರ (ಸೆ 26) ಸಭೆಯಲ್ಲಿ ಭಾಗವಹಿಸಿದ್ದ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ, ಭಾರತದ ಸಚಿವರ ಭಾಷಣ ಆರಂಭವಾಗುತ್ತಿದ್ದಂತೆಯೇ, ಸಭೆಯಿಂದ ಎದ್ದು ಹೋದರು.
ಇದಕ್ಕೆ ಪ್ರತಿಯಾಗಿ, ಖುರೇಶಿ ಭಾಷಣದ ವೇಳೆ, ಜೈಶಂಕರ್ ಗೈರಾದರು. ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವರಾಗಿದ್ದ ವೇಳೆಯೂ, ಪಾಕ್ ವಿದೇಶಾಂಗ ಸಚಿವರ ಸಭೆಯ ವೇಳೆ ಹೊರನಡೆದಿದ್ದರು.
ಕಾಶ್ಮೀರದ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಶೀತಲ ಸಮರಕ್ಕೆ, ಈ ವಿದ್ಯಮಾನ ಒಂದು ಜ್ವಲಂತ ಉದಾಹರಣೆಯಾಗಿದೆ.
ಮುಸ್ಲಿಮರ ಬಗ್ಗೆ ಪಾಕಿಸ್ತಾನದ ಇಬ್ಬಗೆ ಧೋರಣೆಯನ್ನು ಅಮೆರಿಕ ಪ್ರಶ್ನೆ ಮಾಡಿತ್ತು. ಚೀನಾದಲ್ಲಿ ಮುಸ್ಲಿಮರನ್ನು ವಶಕ್ಕೆ ಪಡೆಯಲಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಕಾಶ್ಮೀರದ ಮುಸ್ಲಿಮರ ಬಗ್ಗೆ ತೋರುವಷ್ಟೇ 'ಸಮಾನ ಮಟ್ಟದ' ಪ್ರೀತಿಯನ್ನು ಚೀನಾದಲ್ಲಿನ ಮುಸ್ಲಿಮರಿಗೂ ತೋರಿಸುತ್ತೀರಾ ಎಂದು ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.