ಚಿತ್ರಗಳು : ಪಟಿಯಾಲಾ ಕೋರ್ಟ್ನಲ್ಲಿ ಏನೇನಾಯ್ತು?
ಬೆಂಗಳೂರು, ಡಿಸೆಂಬರ್ 19 : ದೇಶದ ಕೋಟ್ಯಾಂತರ ಜನರ ಕಣ್ಣು ಶನಿವಾರ ದೆಹಲಿಯ ಪಟಿಯಾಲಾ ಕೋರ್ಟ್ನತ್ತ ನೆಟ್ಟಿತ್ತು. ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಪ್ರಕರಣದಲ್ಲಿ ಕೋರ್ಟ್ಗೆ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಐದು ನಿಮಿಷದಲ್ಲಿ ಜಾಮೀನು ಪಡೆದು ಹೊರಬಂದರು.
ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ ಅವರು ದೂರು ನೀಡಿದ್ದರಿಂದ, ಈ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರಕ್ಕೂ ಕಾರಣವಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. [ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು]
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಗಳಾದ ಸೋನಿಯಾ ಗಾಂಧಿ, ರಾಹುಲ್ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಹಾಗೂ ಸುಮನ್ ದುಬೆ ಅವರಿಗೆ ಮಧ್ಯಾಹ್ನ 3 ಗಂಟೆಗೆ ಕೋರ್ಟ್ಗೆ ಹಾಜರಾಗಲು ಸಮನ್ಸ್ ನೀಡಲಾಗಿತ್ತು. [ಕೋರ್ಟಿಗೆ ಸೋನಿಯಾ, ರಾಹುಲ್]
ಸ್ಯಾಮ್ ಪಿತ್ರೋಡಾ ಹೊರತು ಪಡಿಸಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದವರು ಕೋರ್ಟ್ಗೆ ಹಾಜರಾಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಆರಂಭವಾಯಿತು. ಕೇವಲ ಐದು ನಿಮಿಷಗಳಲ್ಲಿ ಎಲ್ಲ ಆರೋಪಿಗಳಿಗೂ ಜಾಮೀನು ಸಿಕ್ಕಿತು. ಪಟಿಯಾಲಾ ಕೋರ್ಟ್ನಲ್ಲಿ ಏನೇನಾಯ್ತು ಚಿತ್ರಗಳಲ್ಲಿ ನೋಡಿ...... [ನ್ಯಾಷನಲ್ ಹೆರಾಲ್ಡ್ ಕೇಸ್ : ಮೂರೇ ನಿಮಿಷದಲ್ಲಿ ಜಾಮೀನು!]
ಐದು ನಿಮಿಷದಲ್ಲಿ ಜಾಮೀನು
ನ್ಯಾಷನಲ್ ಹೆರಾಲ್ಡ್ ಆಸ್ತಿಯ ಅಕ್ರಮ ಪರಭಾರೆ ಪ್ರಕರಣದಲ್ಲಿ ಕೋರ್ಟ್ಗೆ ವಿಚಾರಣೆಗೆ ಹಾಜರಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಐದು ನಿಮಿಷದಲ್ಲಿ ಜಾಮೀನು ಪಡೆದು ಹೊರಬಂದರು.
ಯಾರು-ಯಾರು ಆರೋಪಿಗಳು?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಹಾಗೂ ಸುಮನ್ ದುಬೆ ಆರೋಪಿಗಳು. ಅನಾರೋಗ್ಯದ ಕಾರಣದಿಂದಾಗಿ ಸ್ಯಾಮ್ ಪಿತ್ರೋಡಾ ಹೊರತುಪಡಿಸಿ ಉಳಿದ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದರು.
50 ಸಾವಿರ ರೂ. ಬಾಂಡ್, ಒಬ್ಬರ ಶ್ಯೂರಿಟಿ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವೈಯಕ್ತಿಕ 50 ಸಾವಿರ ರೂ. ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಆಧಾರದ ಮೇಲೆ ಪಟಿಯಾಲಾ ಕೋರ್ಟ್ ಜಾಮೀನು ಮಂಜೂರು ಮಾಡಿತು. ಪ್ರಕರಣದ ಮುಂದಿನ ವಿಚಾರಣೆ 2016ರ ಫೆಬ್ರವರಿ 20ರ ಮಧ್ಯಾಹ್ನ 2ಗಂಟೆಗೆ ನಡೆಯಲಿದೆ.
ಯಾರಿಗೆ ಯಾರು ಶ್ಯೂರಿಟಿ ಕೊಟ್ಟರು?
ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಅವರಿಗೆ ಅಹ್ಮದ್ ಪಟೇಲ್ ಶ್ಯೂರಿಟಿ ನೀಡಿದರು. ಸೋನಿಯಾ ಮತ್ತು ರಾಹುಲ್ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ವಾದ ಮಂಡನೆ ಮಾಡಿದರು.
ಸ್ವಾಮಿ ಮನವಿ ತಿರಸ್ಕರಿಸಿದ ಕೋರ್ಟ್
ಪ್ರಕರಣದ ದೂರುದಾರ ಸುಬ್ರಮಣ್ಯ ಸ್ವಾಮಿ ಅವರು, ಸೋನಿಯಾ ಗಾಂಧಿಯವರ ಪಾಸ್ ಪೋರ್ಟ್ ಜಪ್ತಿ ಮಾಡಿ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದ್ದರು. ಆದರೆ, ಕೋರ್ಟ್ ಮನವಿ ತಿರಸ್ಕರಿಸಿದೆ.