ಕಾರ್ಯಪ್ಪ ಸ್ಮರಣೆಯಲ್ಲಿ ಭೂ ಸೇನಾ ದಿನಾಚರಣೆ ಸಂಭ್ರಮ
ಭಾರತೀಯ ಭೂ ಸೇನೆಗೆ ಬುಧವಾರ (ಜನವರಿ15) ರಂದು ಹುಟ್ಟು ಹಬ್ಬದ ಸಂಭ್ರಮ. ಈ ದಿನದಂದು ಹುತಾತ್ಮರ ವೀರಗಾಥೆಯನ್ನು ವಿಶೇಷವಾಗಿ ಸ್ಮರಿಸಲಾಗುತ್ತದೆ.
ಪ್ರತಿ ವರ್ಷ ಜನವರಿ 15 ರಂದು ಭೂ ಸೇನಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಕೊಡಗಿನ ಹೆಮ್ಮೆಯ ಪುತ್ರ ಲೆಫ್ಟಿನೆಂಟ್ ಜನರಲ್(ನಂತರ ಫೀಲ್ಡ್ ಮಾರ್ಷಲ್) ಕೆಎಂ ಕಾರ್ಯಪ್ಪ ಅವರು ಭೂ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ 1949ರಲ್ಲಿ ಅಧಿಕಾರ ಸ್ವೀಕರಿಸಿದ ದಿನ ಇದಾಗಿದೆ. ಅಂದು ಬ್ರಿಟಿಷ್ ಕಮ್ಯಾಂಡರ್ ಇನ್ ಛೀಫ್ ಫ್ರಾನ್ಸಿಸ್ ಬುಚರ್ ಅವರು ಕಾರ್ಯಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.
ನಮ್ಮ ಯೋಧರ ನಿಸ್ವಾರ್ಥ ಸೇವೆ ಹಾಗೂ ದೇಶದ ರಕ್ಷಣೆಗಾಗಿ ಪಣತೊಟ್ಟು ಹೋರಾಡುವ ಮನೋಭವ ಇನ್ನಷ್ಟು ವೃದ್ಧಿಸಲಿ. ಭಾರತದಲ್ಲಿ ಆಂತರಿಕ ಹಾಗೂ ಹೊರಗಿನ ಶಕ್ತಿಗಳಿಂದ ಬರುವ ಅಡೆ ತೊಡೆಗಳನ್ನು ತೊಡೆದು ಹಾಕಲು ನಮ್ಮ ಯೋಧರು ಸಮರ್ಥರಿದ್ದಾರೆ. ವಿಶ್ವದಲ್ಲಿ ಅಗ್ರಗಣ್ಯ ಸೇನೆಯನ್ನು ಹೊಂದಿದ ಹೆಮ್ಮೆ ಎಲ್ಲಾ ನಾಗರೀಕರಿಗೂ ಇರಬೇಕು ಎಂದು ಭೂ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನವರಾಣೆ ಹೇಳಿದ್ದಾರೆ.
ಅಮರ್ ಜವಾನ್ ಜ್ಯೋತಿಗೆ ನಮನ
ನವದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಗೆ ನಮಿಸಿ, ವಿಶೇಷ ಪ್ರದರ್ಶನಗಳನ್ನು ನೀಡುತ್ತಾರೆ. ದೆಹಲಿ ಕಂಟೋನ್ಮೆಂಟ್ ನಲ್ಲಿ ನಡೆಯುವ ಸಮಾರಂಭದಲ್ಲಿ ಭೂ ಸೇನೆ ಯೋಧರ ಪಥಸಂಚಲನ, ಆಧುನಿಕ ಶಸ್ತ್ರಾಸ್ತ್ರಗಳ ಸ್ಥೂಲ ಪರಿಚಯ, ಭೂ ಸೇನೆಯ ಸಾಧನೆ, ಅಗಲಿದ ಯೋಧರ ಸ್ಮರಣೆ ಮುಂತಾದ ಕಾರ್ಯಕ್ರಮವಿರುತ್ತದೆ.
ದೆಹಲಿಯ ಕಾರ್ಯಪ್ಪ ಮೈದಾನ
ದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ಭೂ ಸೇನಾ ದಿನಾಚರಣೆ ಅಂಗವಾಗಿ ಆರ್ಮಿ ಮುಖ್ಯಸ್ಥ ಮನೋಜ್ ಮುಕುಂದ್ ನವರಾಣೆ ಅವರು ಗೌರವ ಸ್ವೀಕರಿಸಿದರು.
ಸೇನಾ ಶಕ್ತಿ ಪ್ರದರ್ಶನ
ಭೂ ಸೇನಾ ಯೋಧರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ಯುದ್ಧ ಟ್ಯಾಂಕರ್, ಶಸ್ತ್ರಾಸ್ತ್ರಗಳ ಜೊತೆ ಅಣಕು ಯುದ್ಧ ಪ್ರದರ್ಶನ ನೀಡಿದ್ದಾರೆ.
ಮೋದಿ ಅವರು ಶುಭಕೋರಿದ್ದಾರೆ
ದೇಶದ ಗಡಿರಕ್ಷಣೆ, ರಾಷ್ಟ್ರದ ಸಾರ್ವಭೌಮತ್ವದ ಹಿತರಕ್ಷಣೆ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಾಗರಿಕರ ಅಮೂಲ್ಯ ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸುವಲ್ಲಿ, ವೃತ್ತಿಪರತೆ ಮೆರೆಯುವಲ್ಲಿ ನಮ್ಮ ಸೇನೆ ಸದಾ ಮುಂಚೂಣಿಯಲ್ಲಿದೆ ಎಂದು ಇತ್ತೀಚೆಗೆ ಹಿಮರಾಶಿಯಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪವನ್ನು ಸೂಚಿಸಿದ್ದಲ್ಲದೆ, ಆರ್ಮಿ ಡೇ ಅಂಗವಾಗಿ ಪ್ರಧಾನಿ ಮೋದಿ ಅವರು ಶುಭಕೋರಿದ್ದಾರೆ.