ಒಂದು ವರ್ಷದಲ್ಲಿ ತನ್ನ 7 'ಸ್ಟಾಲ್ ವಾರ್ಟ್' ಗಳನ್ನು ಕಳೆದುಕೊಂಡ ಬಿಜೆಪಿ
ವಿಶ್ವದ ಅತಿಹೆಚ್ಚಿನ ಸದಸ್ಯರನ್ನು ಹೊಂದಿರುವ ಪಕ್ಷಗಳ ಪೈಕಿ ಮಂಚೂಣಿಯಲ್ಲಿ ಬರುವ ಭಾರತೀಯ ಜನತಾ ಪಕ್ಷ, ಇಂದು ಈ ಮಟ್ಟಕ್ಕೆ ಬೆಳೆಯಲು ಅದಕ್ಕೆ ಹತ್ತು ಹಲವು ನಾಯಕರ ಕೊಡುಗೆಯಿದೆ.
ಕಳೆದ ಒಂದು ವರ್ಷದಲ್ಲಿ ಬಿಜೆಪಿ, ತನ್ನ ಪ್ರಮುಖ ಏಳು ಮುಖಂಡರನ್ನು ಕಳೆದುಕೊಂಡಿದೆ. ಇವರೆಲ್ಲರೂ, ಪಕ್ಷ ಸಂಘಟನೆಯ ಮತ್ತು ದೇಶದ ಹಿತದೃಷ್ಟಿ ಕಾಪಾಡುವಲ್ಲಿ ಮಹತ್ತರದ ಪಾತ್ರವನ್ನು ವಹಿಸಿದ್ದವರು.
ಸ್ಪೋಟಕ ಬ್ಯಾಟ್ಸ್ ಮ್ಯಾನ್ ಗೆ ಮನೆಯಲ್ಲೇ ಮದುವೆ ಮಾಡಿಸಿದ್ದ ಜೇಟ್ಲಿ
Recommended Video
ನಿಧನರಾದ ಏಳು ಮುಖಂಡರ ಪೈಕಿ, ನಾಲ್ಕು ನಾಯಕರು ಕಳೆದ, ಅಂದರೆ ಮೋದಿಯವರ ಮೊದಲ ಅವಧಿಯ ಸರಕಾರದಲ್ಲಿ ಆಯಕಟ್ಟಿನ ಖಾತೆಯನ್ನು ನಿಭಾಯಿಸಿದ್ದವರು. ಇವರ ನಿಧನ, ವೈಯಕ್ತಿಕವಾಗಿ ನನಗೆ ಬಹಳ ನಷ್ಟ ಮತ್ತು ನೋವನ್ನು ತಂದಿದೆ ಎಂದು ಮೋದಿ ವಿಷಾದ ವ್ಯಕ್ತ ಪಡಿಸಿದ್ದರು.
ಜೇಟ್ಲಿ ಕೊನೆಯ ಬಾರಿ ಮೋದಿ, ಶಾನ್ನು ಬಾಯಿತುಂಬ ಹೊಗಳಿದ್ದು ಹೀಗೆ!
ಕಳೆದ ಒಂದು ವರ್ಷದಲ್ಲಿ, ಅಂದರೆ, ಹೋದ ವರ್ಷದ ಆಗಸ್ಟ್ ನಿಂದ, ಇದುವರೆಗೆ ಬಿಜೆಪಿ, ತನ್ನ ಏಳು ಪ್ರಮುಖ ಮುಖಂಡರನ್ನು ಕಳೆದುಕೊಂಡಿದೆ. ಅವರ್ಯಾರು?
ಮಾಜಿ ಪ್ರಧಾನಿ, ಮಾಜಿ ವಿದೇಶಾಂಗ ಸಚಿವ, ಅಟಲ್ ಬಿಹಾರಿ ವಾಜಪೇಯಿ
ಅಪ್ರತಿಮ ವಾಗ್ಮಿ, ಪಕ್ಷಾತೀತವಾಗಿ ಎಲ್ಲರ ಪ್ರೀತಿಯ ಮುಖಂಡರಾಗಿದ್ದ, ಮಾಜಿ ಪ್ರಧಾನಿ, ಮಾಜಿ ವಿದೇಶಾಂಗ ಸಚಿವ, ಅಟಲ್ ಬಿಹಾರಿ ವಾಜಪೇಯಿ, ಕಳೆದ ವರ್ಷ ಆಗಸ್ಟ್ 16ರಂದು ನಿಧನರಾಗಿದ್ದರು. ದೀರ್ಘ ಕಾಲದಿಂದ ಕಾಯಿಲೆಯಿಂದ ಬಳಲುತ್ತಿದ್ದ, ಕಾರ್ಯಕರ್ತರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 'ಅಟಲ್ ಜೀ', ಮೂತ್ರಪಿಂಡ ಹಾಗು ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ವರ್ಷ ಜೂನ್ ಹನ್ನೊಂದರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ, ಆಗಸ್ಟ್ 16ರಂದು ಇಹಲೋಕ ತ್ಯಜಿಸಿದ್ದರು.
ದೆಹಲಿಯ ಮಾಜಿ ಸಿಎಂ ಮದಲ್ ಲಾಲ್ ಖುರಾನ
ದೆಹಲಿಯ ಮುಖ್ಯಮಂತ್ರಿಯಾಗಿ, ರಾಜಸ್ಥಾನದ ರಾಜ್ಯಪಾಲರಾಗಿ, ಕೇಂದ್ರದಲ್ಲಿ ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಖಾತೆಯ ಸಚಿವರಾಗಿದ್ದ ಮದಲ್ ಲಾಲ್ ಖುರಾನ, ಅಕ್ಟೋಬರ್ 27, 2018 ರಂದು ವಿಧಿವಶರಾಗಿದ್ದರು. 1993 ರಿಂದ 1996ರ ಅವಧಿಯಲ್ಲಿ ಖುರಾನ, ದೆಹಲಿಯ ಸಿಎಂ ಆಗಿದ್ದರು.
ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದ ಅನಂತ್ ಕುಮಾರ್
ನರೇಂದ್ರ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಸಂಸದೀಯ ವ್ಯವಹಾರ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದ ಅನಂತ್ ಕುಮಾರ್, ನವೆಂಬರ್ 12, 2018ರಂದು ನಿಧನರಾದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದ ಅನಂತ್ ಕುಮಾರ್, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಕ್ಷಣಾ ಸಚಿವಾರಾಗಿ ಕೆಲಸ ನಿರ್ವಹಿಸಿದ್ದ ಮನೋಹರ್ ಪರಿಕ್ಕರ್
ಗೋವಾದ ಮುಖ್ಯಮಂತ್ರಿಯಾಗಿ, ಅದಕ್ಕೂ ಮುನ್ನ, ಮೋದಿ ಸರಕಾರದ ಮೊದಲ ಅವಧಿಯಲ್ಲಿ ರಕ್ಷಣಾ ಸಚಿವಾರಾಗಿ ಕೆಲಸ ನಿರ್ವಹಿಸಿದ್ದ ಮನೋಹರ್ ಪರಿಕ್ಕರ್ ಮಾರ್ಚ್ 17, 2019ರಂದು ನಿಧನರಾದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಪರಿಕ್ಕರ್, ಅತ್ಯಂತ ಸರಳ ವ್ಯಕ್ತಿತ್ವದ ರಾಜಕಾರಣಿ ಎಂದೇ ಹೆಸರಾಗಿದ್ದವರು.
ಅತ್ಯಂತ ಪ್ರಭಾವಿ ಮಹಿಳೆಯೆಂದೇ ಹೆಸರಾಗಿದ್ದ ಸುಷ್ಮಾ ಸ್ವರಾಜ್
ಇತ್ತೀಚಿನ ವರ್ಷಗಳಲ್ಲಿ, ದೇಶದ ಅತ್ಯಂತ ಪ್ರಭಾವಿ ಮಹಿಳೆಯೆಂದೇ ಹೆಸರಾಗಿದ್ದ ಮಾಜಿ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್, ಆಗಸ್ಟ್ 6,2019ರಂದು ನಿಧನರಾದರು. ಎಬಿವಿಪಿಯೊಂದಿಗೆ ತನ್ನ ರಾಜಕೀಯ ಜೀವನ ಆರಂಭಿಸಿದ್ದ ಸುಷ್ಮಾ, ಹೃದಯಾಘಾತದಿಂದ ನಿಧನರಾದರು.
ಹದಿನಾರನೇ ಮುಖ್ಯಮಂತ್ರಿಯಾಗಿದ್ದ ಬಾಬೂಲಾಲ್ ಗೌರ್
ಮಧ್ಯಪ್ರದೇಶದ ಹದಿನಾರನೇ ಮುಖ್ಯಮಂತ್ರಿಯಾಗಿದ್ದ ಬಾಬೂಲಾಲ್ ಗೌರ್ ಆಗಸ್ಟ್ 21, 2019ರಂದು ನಿಧನರಾದರು. 1946ರಿಂದ RSS ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಗೌರ್, ಭೋಪಾಲ್ ನಗರದ ನರ್ಮದಾ ಆಸ್ಪತ್ರೆಯಲ್ಲಿ ವಯೋಸಂಬಂಧಿ ಕಾಯಿಲೆಯಿಂದ ವಿಧಿವಶರಾದರು.
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಆಗಸ್ಟ್ 24, 2019ರಂದು ನಿಧನರಾದರು, ಮೋದಿ ಸರಕಾರದ ಮೊದಲ ಅವಧಿಯಲ್ಲಿ ಹಣಕಾಸು, ರಕ್ಷಣೆ, ಕಾರ್ಪೊರೇಟ್ ವ್ಯವಹಾರಗಳು, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಕಾನೂನು ಖಾತೆಯನ್ನು ನಿಭಾಯಿಸಿದ್ದ ಜೇಟ್ಲಿ, ಬಿಜೆಪಿ ಪಾಲಿನ ಟ್ರಬಲ್ ಶೂಟರ್ ಎಂದೇ ಹೆಸರು ಪಡೆದಿದ್ದರು.