75 ವರ್ಷಗಳಲ್ಲೇ ಮೊದಲ ಬಾರಿಗೆ ಬಿಹಾರದ ಈ ಗ್ರಾಮಸ್ಥನಿಗೆ ಸಿಕ್ಕಿತು ಸರ್ಕಾರಿ ನೌಕರಿ!
ಪಾಟ್ನಾ, ಸೆಪ್ಟೆಂಬರ್ 29: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳೇ ಕಳೆದಿವೆ. ಅದಾಗ್ಯೂ, ಬಿಹಾರದ ಈ ಗ್ರಾಮದಲ್ಲಿ ಒಬ್ಬರೇ ಒಬ್ಬರಿಗೂ ಸರ್ಕಾರಿ ನೌಕರಿ ಎನ್ನುವುದು ಸಿಕ್ಕಿರಲಿಲ್ಲ. ಹೀಗೆ ಗಗನ ಕುಸುಮವಾಗಿದ್ದ ಸರ್ಕಾರಿ ನೌಕರಿಯನ್ನು ವ್ಯಕ್ತಿಯೊಬ್ಬ ಗಿಟ್ಟಿಸಿಕೊಂಡಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಮೊದಲ ಬಾರಿಗೆ ಗ್ರಾಮದ ವ್ಯಕ್ತಿಗೆ ಸರ್ಕಾರಿ ನೌಕರಿ ಸಿಕ್ಕಿರುವುದು ಗ್ರಾಮಸ್ಥರ ಸಂತೋಷವನ್ನು ನೂರ್ಮಡಿಗೊಳಿಸಿದೆ. ಹೌದು 30 ವರ್ಷದ ರಾಕೇಶ್ ಕುಮಾರ್ ಸರ್ಕಾರಿ ಸಾರ್ವಜನಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಕಳೆದ ವಾರ ಈ ಸುದ್ದಿ ತಿಳಿದ ಗ್ರಾಮದ ನಿವಾಸಿಗಳು ಸಂತೋಷದಿಂದ ಸಿಹಿ ಹಂಚಿ, ಬಣ್ಣದ ಪುಡಿ ಹಚ್ಚಿದರು.
ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ: ಸಿಎಂ ಬಸವರಾಜ ಬೊಮ್ಮಾಯಿ
ಸರ್ಕಾರಿ ಉದ್ಯೋಗಗಳಲ್ಲಿ ಸಿಗುವ ಭದ್ರತೆ ಮತ್ತು ಪ್ರಯೋಜನದಿಂದಲೇ ದೇಶದಲ್ಲಿ ಸರ್ಕಾರಿ ನೌಕರಿಗೆ ಹೆಚ್ಚಿನ ಬೇಡಿಕೆಯಿದೆ. ರಾಕೇಶ್ ಕುಮಾರ್ ತಮ್ಮ ಸ್ವಂತ ಗ್ರಾಮವಾದ ಸೊಹಾಗ್ಪುರದ ಅದೇ ಜಿಲ್ಲೆಯ ಬಾರ್ಕುರ್ವಾದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಸೊಹಾಗ್ಪುರದಲ್ಲಿ ಸರ್ಕಾರಿ ಶಾಲೆಯಿದ್ದರೂ, ಅಲ್ಲಿಯ ಶಿಕ್ಷಕರು ಮಾತ್ರ ರಾಜ್ಯದ ಇತರ ಭಾಗದವರೇ ಆಗಿದ್ದರು.
ಉದ್ಯೋಗ ಭದ್ರತೆ ನಿರೀಕ್ಷೆಯಲ್ಲಿ ಗ್ರಾಮಸ್ಥರು:
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಆಗಿದೆ. ಅಲ್ಲಿಂದ ಇಲ್ಲಿಯವರೆಗೂ ಬಿಹಾರದ ಸೊಹಾಗ್ಪುರದ ತಲೆಮಾರುಗಳ ಜನರು ಸ್ಥಿರವಾದ ಹಾಗೂ ಉತ್ತಮ ಸಂಬಳದ ಉದ್ಯೋಗಗಳನ್ನು ಬಯಸುತ್ತಿದ್ದಾರೆ. ಅದಾಗ್ಯೂ, ಸರ್ಕಾರಿ ಉದ್ಯೋಗಗಳು ಸಿಗುತ್ತಿರಲಿಲ್ಲ ಎಂದು ಸ್ಥಳೀಯ ನಾಯಕ ದೇವೇಂದ್ರ ಚೌಧರಿ ಹೇಳಿದ್ದಾರೆ. ಗ್ರಾಮದಲ್ಲಿ ಅನೇಕ ವಿದ್ಯಾರ್ಥಿಗಳು ಓದಲು ಹತ್ತಿರದ ದೊಡ್ಡ ನಗರಗಳಿಗೆ ಹೋಗುತ್ತಾರೆ. ಆದರೆ ಇದುವರೆಗೂ ಯಾರೂ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗರಲಿಲ್ಲ.
ರಾಕೇಶ್ ಕುಮಾರ್ ಯಶಸ್ಸಿನಿಂದ ಸ್ಪೂರ್ತಿ:
ರಾಕೇಶ್ ಕುಮಾರ್ ಯಶಸ್ಸು "ಅಂತಿಮವಾಗಿ ಹಳ್ಳಿಗೆ ಆವರಿಸಿಕೊಂಡಿದ್ದ ದುರಾದೃಷ್ಟದ ಕರಾಳ ಮೋಡವನ್ನು ತೆಗೆದುಹಾಕಿದೆ" ಮತ್ತು "ಯುವ ಪೀಳಿಗೆಗಳು ಅವರ ಯಶಸ್ಸಿನಿಂದ ಸ್ಫೂರ್ತಿ ಸಿಕ್ಕಂತೆ ಆಗುತ್ತದೆ," ಎಂದು ಚೌಧರಿ ಹೇಳಿದ್ದಾರೆ. ಅಲ್ಲದೇ ಗ್ರಾಮಸ್ಥರಲ್ಲಿ ಹೆಮ್ಮಯ ಭಾವ ಮೂಡಿಸಿದ್ದಕ್ಕಾಗಿ ನಾನು ಸಂತಸವನ್ನು ವ್ಯಕ್ತಪಡಿಸುತ್ತೇನೆ ಎಂದಿರುವ ಚೌಧರಿ, ಸರ್ಕಾರಿ ನೌಕರಿ ಪಡೆದ ರಾಕೇಶ್ ಕುಮಾರ್ ಗೆಲುವಿನ ಹಾದಿಯು ಅಷ್ಟು ಸುಲಭವಾಗಿರಲಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
20 ಮೈಲುಗಳಷ್ಟು ಸೈಕಲ್ಲಿನಲ್ಲಿ ಪ್ರಯಾಣ:
ಕಿರಾಣಿ ಅಂಗಡಿಯ ಮಾಲೀಕನ ಮಗನಾದ ರಾಕೇಶ್ ಕುಮಾರ್ ಪಕ್ಕದ ಮುಜಾಫರ್ಪುರ ನಗರದಲ್ಲಿ ಇರುವ ಹೈಸ್ಕೂಲ್ಗೆ ಹೋಗಲು 20 ಮೈಲುಗಳಷ್ಟು ಸೈಕಲ್ನಲ್ಲಿ ಹೋಗುತ್ತಿದ್ದರು. ವಿದ್ಯಾಭ್ಯಾಸದ ಬಿಡುವಿನ ವೇಳೆಯಲ್ಲಿ ಅವರು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುತ್ತಿದ್ದರು.
"ತಂದೆಯ ಕನಸು ನನಸು ಮಾಡಿದೆ":
2016ರಲ್ಲಿ ಅವರ ತಂದೆ ನಿಧನರಾದ ನಂತರ ಬದುಕು ಮತ್ತಷ್ಟು ಕಷ್ಟವಾಯಿತು. "ಆದರೆ ನಾನು ನನ್ನ ತಂದೆಯ ಕನಸನ್ನು ನನಸಾಗಿಸಲು ಶ್ರಮಿಸಿದೆ. ನಾನು ವೈದ್ಯ ಅಥವಾ ಶಿಕ್ಷಕನಾಗಬೇಕೆಂದು ಅವರು ಬಯಸಿದ್ದರು. ಈಗ ನಾನು ಅವರ ಕನಸನ್ನು ನನಸಾಗಿಸಿದ್ದೇನೆ," ಎಂದು ರಾಕೇಶ್ ಕುಮಾರ್ ಹೇಳುತ್ತಾರೆ. ಈ ಕೆಲಸವು ಅವರಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂದು ರಾಕೇಶ್ ಕುಮಾರ್ ಆಶಿಸಿದ್ದಾರೆ. ಈಗ ನಾಗರಿಕ ಸೇವಕರಾಗಲು ರಾಜ್ಯ ಪರೀಕ್ಷೆಗಳಿಗೆ ತಯಾರಿ ನಡೆಸುವುದಾಗಿ ಹೇಳಿದ್ದಾರೆ.