ಮೋದಿ ವಿರುದ್ದ ಆಕ್ರಮಣಕಾರಿ ರಾಜಕಾರಣದ ಸುಳಿವು ನೀಡಿದ ರಾಹುಲ್ ಗಾಂಧಿ
Recommended Video
ನೂರ ಮೂವತ್ತೆರಡು ವರ್ಷಗಳ ಇತಿಹಾಸವಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ್ದಾಗಿದೆ. ಅಧ್ಯಕ್ಷರಾಗಿ ತಮ್ಮ ಮೊದಲ ಭಾಷಣದಲ್ಲಿ ಕಾರ್ಯಕರ್ತರು 'ನನ್ನವರು' ಎಂದಿರುವ ರಾಹುಲ್, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖವಾಗಿ ಪ್ರಧಾನಿ ಮೋದಿ ವಿರುದ್ದ ಅಧ್ಯಕ್ಷೀಯ ಭಾಷಣದಲ್ಲಿ ಹರಿಹಾಯ್ದಿದಿರುವ ರಾಹುಲ್ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ದ ಆಕ್ರಮಣಕಾರಿ ರಾಜಕಾರಣದ ಸ್ಪಷ್ಟ ಸುಳಿವು ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿರುವ ವ್ಯತ್ಯಾಸವನ್ನು ರಾಹುಲ್ ವಿವರಿಸಿದ್ದಾರೆ.
ಅತ್ಯಂತ ಕಿರಿಯ ವಯಸ್ಸಿಗೆ ಕಾಂಗ್ರೆಸ್ ಚುಕ್ಕಾಣಿ ಹಿಡಿದವರು ಯಾರು?
ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಪಕ್ಷಕ್ಕೆ ಪುನಶ್ಚೇತನ ನೀಡಬಲ್ಲಂತಹ ಅಂಶಗಳನ್ನು ಪ್ರಸ್ತಾವಿಸುವುದಕ್ಕೆ ಆದ್ಯತೆ ನೀಡುವ ಬದಲು, ಮೋದಿ ವಿರುದ್ದ ಟೀಕಾಸ್ತ್ರ ಪ್ರಯೋಗಿಸುವುದಕ್ಕೆ ರಾಹುಲ್ ಗಮನ ನೀಡಿದಂತಿತ್ತು.
ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಮುಂದಿರುವ ಸವಾಲುಗಳು
ಗುಜರಾತ್ ಚುನಾವಣೆಯ ಫಲಿತಾಂಶ ಏನೇ ಬರಲಿ, ತನಗ್ಗಿದ್ದ ಪಪ್ಪು ವರ್ಚಸ್ಸನ್ನು ಮೀರಿ, ವೃತ್ತಿಪರ ರಾಜಕಾರಣಿಯತ್ತ ರಾಹುಲ್ ಸಾಗುತ್ತಿರುವುದು, ಚುನಾವಣಾ ಪ್ರಚಾರದ ವೇಳೆ, ಬಿಜೆಪಿಯ ಹೆಚ್ಚಿನ ಸವಾಲಿಗೆ ತಕ್ಕ ಉತ್ತರ ನೀಡಿದ್ದು, ರಾಹುಲ್ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದಕ್ಕೆ ಕೊಡಬಹುದಾದ ಉದಾಹರಣೆಯಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ರಕ್ಷಣೆಯೇ ನನ್ನ ಮೊದಲ ಆದ್ಯತೆ: ರಾಹುಲ್
ಮೋದಿ ಸರಕಾರ ಜನರ ಧ್ವನಿಯನ್ನು ಅಡಗಿಸುವ ಕೆಲಸವನ್ನು ಮಾಡುತ್ತಿದೆ ಎಂದು ಟೀಕಿಸಿರುವ ರಾಹುಲ್, ಅವರು ಬೆಂಕಿ ಹಚ್ಚುತ್ತಿದ್ದಾರೆ, ನಾವು ಶಾಂತಿ ಸ್ಥಾಪನೆಗಾಗಿ ಹೋರಾಡುತ್ತಿದ್ದೇವೆ. ನಮ್ಮ ಸಿದ್ದಾಂತವೇನು, ಬಿಜೆಪಿ ಸಿದ್ದಾಂತಗಳೇನು ಎನ್ನುವುದನ್ನು ರಾಹುಲ್ ವಿವರಿಸುವ ಮೂಲಕ, ಬಿಜೆಪಿ ವಿರುದ್ದ ಹೋರಾಟ ತೀವ್ರ ಗೊಳಿಸುವ ಸುಳಿವು ನೀಡಿದ್ದಾರೆ. ಮುಂದೆ ಓದಿ
ಕಾಂಗ್ರೆಸ್ ಪಕ್ಷ ಗುಜರಾತ್ ನಲ್ಲಿ ತನ್ನ ಸ್ಥಾನವನ್ನು ಸುಭದ್ರಗೊಳಿಸುತ್ತಿರುವುದು ಸ್ಪಷ್ಟ
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶಗಳು ಎಕ್ಸಿಟ್ ಪೋಲ್ ವರದಿಯಂತೇ ಹೊರಬಿದ್ದರೂ, ಕಾಂಗ್ರೆಸ್ ಪಕ್ಷ ಗುಜರಾತ್ ನಲ್ಲಿ ತನ್ನ ಸ್ಥಾನವನ್ನು ಸುಭದ್ರಗೊಳಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಜೊತೆಗೆ, ಪಕ್ಷದ ಪ್ರಚಾರವನ್ನು ತನ್ನ ಹೆಗಲ ಮೇಲೆ ಹೊತ್ತು ರಾಹುಲ್ ತಮ್ಮ ವರ್ಚಸ್ಸನ್ನೂ ವೃದ್ದಿಸಿಕೊಂಡಿದ್ದಾರೆ.
ಬಿಜೆಪಿಯ ವಿರುದ್ದ ಟೀಕಾಪ್ರಹಾರ
ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ಏರಿದ್ದಾಗಿದೆ, ಸೋಲು ಮತ್ತು ಗೆಲುವು ಎರಡರ ಜವಾಬ್ದಾರಿಯನ್ನು ರಾಹುಲ್ ಗಾಂಧಿ ಹೊರಬೇಕಾಗಿದೆ. ಮುಂದಿನ ಸವಾಲುಗಳನ್ನು ಎದುರಿಸಬೇಕಾಗಿದೆ. ಅದಕ್ಕಾಗಿ ಬಿಜೆಪಿಯ ಸವಾಲುಗಳನ್ನು ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆಯನ್ನು ಅರಿತಿರುವ ರಾಹುಲ್, ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲೇ ಬಿಜೆಪಿಯ ವಿರುದ್ದ ಟೀಕಾಪ್ರಹಾರ ನಡೆಸುವ ಮೂಲಕ, ಪಕ್ಷದ ಮುಂದಿನ ದಾರಿಯೇನು ಎನ್ನುವುದನ್ನು ರಾಹುಲ್ ತೋರಿಸಿದ್ದಾರೆ.
ಹಿರಿಯರ ಮಾರ್ಗದರ್ಶನವನ್ನೂ ಪಡೆಯಲಾಗುವುದು
ಬಿಜೆಪಿ ನಾಯಕರ ದ್ವೇಷದ ರಾಜಕಾರಣಕ್ಕೆ ತಡೆಯೊಡ್ಡುವ ಶಕ್ತಿಯಿರುವುದು ಕಾಂಗ್ರೆಸ್ಸಿಗೆ ಮಾತ್ರ ಎಂದಿರುವ ರಾಹುಲ್, ಹಿರಿಯರ ಮಾರ್ಗದರ್ಶನವನ್ನೂ ಪಡೆಯಲಾಗುವುದು, ಕಿರಿಯರ ಸಲಹೆಗಳನ್ನೂ ಕೇಳಲಾಗುವುದು. ನೀವೆಲ್ಲಾ ಕಾರ್ಯಕರ್ತರು, ಮುಖಂಡರು ನನ್ನ ಮನೆಯ ಸದಸ್ಯರು. ಈ ನನ್ನ ಮಾತನ್ನು ಹೃದಯದಿಂದ ಹೇಳುತ್ತಿದ್ದೇನೆ ಎನ್ನುವ ಮೂಲಕ, ತನ್ನ ವಿರುದ್ದ ಅಪಸ್ವರ ಎತ್ತಿದವರನ್ನೂ ಮುಂದಿನ ದಿನಗಳಲ್ಲಿ ಜೊತೆಯಾಗಿ ನಡೆಸಿಕೊಂಡು ಹೋಗುತ್ತೇನೆ ಎನ್ನುವುದರ ಸುಳಿವು ನೀಡಿದಂತಿತ್ತು.
ಕಾಂಗ್ರೆಸ್ ಇಪ್ಪತ್ತೊಂದನೇ ಶತಮಾನಕ್ಕೆ ತೆಗೆದುಕೊಂಡು ಹೋಗುತ್ತಿದೆ
ಮೋದಿ ನೇತೃತ್ವದ ಬಿಜೆಪಿ ಸರಕಾರ, ದೇಶವನ್ನು ಮಧ್ಯಕಾಲೀನ ಯುಗಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ, ಕಾಂಗ್ರೆಸ್ ಇಪ್ಪತ್ತೊಂದನೇ ಶತಮಾನಕ್ಕೆ ತೆಗೆದುಕೊಂಡು ಹೋಗುತ್ತಿದೆ. ಯುವಕರು ದೇಶ ಸೇವೆಗೆ ಮುಂದೆ ಬರಬೇಕು ಎಂದಿರುವ ರಾಹುಲ್ ಹೇಳಿಕೆ, ಹೊಸ ಅಧ್ಯಕ್ಷರ ಯುಗದಲ್ಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಮುನ್ಸೂಚನೆ ನೀಡಿದೆ.
ನೆಹರೂ ಕುಟುಂಬದ ಆರನೇ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್
ನೆಹರೂ ಕುಟುಂಬದ ಆರನೇ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗಾಂಧಿ, ಸಾಮಾಜಿಕ ತಾಣದಲ್ಲಿ ಸಕ್ರಿಯರಾಗಬೇಕಾದ ಅವಶ್ಯಕತೆ, ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವುದು, ಒಗ್ಗಟ್ಟಿನ ಮಂತ್ರವನ್ನು ಜಪಿಸುವ ಮೂಲಕ, ಪಕ್ಷದಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎನ್ನುವುದನ್ನೂ ತಮ್ಮ ಮೊದಲ ಭಾಷಣದಲ್ಲಿ ರಾಹುಲ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿರ ಎಲ್ಲಾ ಸವಾಲಿಗೂ ತಿರುಗೇಟು ನೀಡಿರುವ ರಾಹುಲ್
ಗುಜರಾತ್ ಚುನಾವಣೆಯ ಪ್ರಚಾರದ ವೇಳೆ, ಬಿಜೆಪಿಯವರ ಎಲ್ಲಾ ಸವಾಲಿಗೂ ತಿರುಗೇಟು ನೀಡಿರುವ ರಾಹುಲ್, ಮುಂಬರುವ ಅಧಿವೇಶನದಲ್ಲೂ ಆಕ್ರಮಣಕಾರಿ ನಿಲುವು ತಾಳುವುದೂ ಗ್ಯಾರಂಟಿ. ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಏನೇ ಬರಲಿ, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ದ ರಾಹುಲ್ ಮತ್ತು ಕಾಂಗ್ರೆಸ್ಸಿಗರದ್ದು ಇನ್ನು ಮುಂದೆ ಗಟ್ಟಿಸ್ವರ ಗ್ಯಾರಂಟಿ ಎನ್ನುವಂತಿದೆ ಸದ್ಯದ ಪಾರ್ಟಿ ಅಧ್ಯಕ್ಷರ ನಿಲುವು.