ಬಾಬ್ರಿ ಸಂಚು ಸಾಬೀತಾದರೆ ಅಡ್ವಾಣಿಗೆ ಕಾದಿದೆ 5 ವರ್ಷ ಜೈಲು
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚಿನ ಆರೋಪ ಸಾಬೀತಾದರೆ ಭಾರತೀಯ ಜನತಾ ಪಕ್ಷದ ಭೀಷ್ಮ ಎಲ್.ಕೆ ಅಡ್ವಾಣಿ 5 ವರ್ಷ ಜೈಲು ಶಿಕ್ಷಗೆ ಗುರಿಯಾಗುವ ಸಾಧ್ಯತೆ ಇದೆ.
ನವದೆಹಲಿ, ಏಪ್ರಿಲ್ 7: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚಿನ ಆರೋಪ ಸಾಬೀತಾದರೆ ಭಾರತೀಯ ಜನತಾ ಪಕ್ಷದ ಭೀಷ್ಮ ಎಲ್.ಕೆ ಅಡ್ವಾಣಿ 5 ವರ್ಷ ಜೈಲು ಶಿಕ್ಷಗೆ ಗುರಿಯಾಗುವ ಸಾಧ್ಯತೆ ಇದೆ.
ಪ್ರಕರಣದ ವಿಚಾರಣೆಯಲ್ಲಿ 25 ವರ್ಷ ಕಳೆದು ಹೋಗಿದೆ. ಇದು 'ನ್ಯಾಯದಾನದ ವಿಳಂಬ' ಎಂದು ಹೇಳಿರುವ ಸುಪ್ರೀಂ ಕೋರ್ಟ್ ಪ್ರತಿದಿನ ವಿಚಾರಣೆ ನಡೆಸಿ ಎರಡು ವರ್ಷದೊಳಗೆ ಪ್ರಕರಣದ ತೀರ್ಪು ನೀಡುವಂತೆ ಲಕ್ನೋ ನ್ಯಾಯಾಲಯಕ್ಕೆ ಸೂಚಿಸಿದೆ.[ಗೋ ರಕ್ಷಣೆ: ಕೇಂದ್ರ, ಕರ್ನಾಟಕ ಸರ್ಕಾರಗಳಿಗೆ ಸುಪ್ರೀಂ ನೋಟಿಸ್]
ಗುರುವಾರ ಸಿಬಿಐ ಸರ್ವೋಚ್ಛ ನ್ಯಾಯಾಲಯದ ಬಳಿ ತನಗೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಉಮಾಭಾರತಿಯವರನ್ನು ವಿಚಾರಣೆ ನಡೆಸಬೇಕಾಗಿದೆ. ಮಾತ್ರವಲ್ಲ ಅವರ ವಿರುದ್ಧ ಕೈಬಿಟ್ಟಿರುವ ಸಂಚು ಪ್ರಕರಣವನ್ನು ಮರು ಸ್ಥಾಪಿಸಬೇಕಾಗಿದೆ ಎಂದು ವಾದಿಸಿತ್ತು. ಜತೆಗೆ ಪ್ರಕರಣವನ್ನು ರಾಯ್ ಬರೇಲಿಯಿಂದ ಲಕ್ನೋ ಗೆ ಸ್ಥಳಾಂತರಿಸುವಂತೆ ಕೇಳಿಕೊಂಡಿತ್ತು.
ಸದ್ಯ ಸುಪ್ರೀಂ ಕೋರ್ಟ್ ಸಂಚಿನ ಪ್ರಕರಣದ ಶೀಘ್ರ ವಿಚಾರಣೆಗೆ ಸೂಚಿಸಿದೆ. "ಸಂಚಿನ ಪ್ರಕರಣಗಳು ಗಂಭೀರವಾಗಿವೆ. ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು 1990ರಲ್ಲಿ ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ.[ಹಿಂದೂ ರಾಷ್ಟ್ರದ ಪರಿಕಲ್ಪನೆ ತಪ್ಪಲ್ಲ-ಯೋಗಿ ಆದಿತ್ಯನಾಥ್]
ಎರಡು ವರ್ಗದ ಪ್ರಕರಣಗಳು
ಡಿಸೆಂಬರ್ 6, 1992 ರಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸದಂತೆ ಎರಡು ವರ್ಗದ ಪ್ರಕರಣಗಳಿವೆ. ಮೊದಲ ವರ್ಗದಲ್ಲಿ ಅಪರಿಚಿತ ಕರಸೇವಕರ ಮೇಲೆ ಪ್ರಕರಣಗಳನ್ನು ದಾಖಲಾಗಿದ್ದು ಲಕ್ನೋದಲ್ಲಿ ವಿಚಾರಣೆ ನಡೆಯುತ್ತಿದೆ. ಎರಡನೇ ವರ್ಗದ ಪ್ರಕರಣಗಳಲ್ಲಿ ವಿವಿಐಪಿಗಳ ಮೇಲೆ ರಾಯ್ ಬರೇಲಿ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಇದೀಗ ಪ್ರಕರಣದ ತ್ವರಿತ ವಿಚಾರಣೆ ಮುಗಿಸಲು ಆರ್ಟಿಕಲ್ 142ರ ಅಡಿಯಲ್ಲಿ ನಾವು ಪ್ರಕರಣವನ್ನು ಲಕ್ನೋಗೆ ಹಸ್ತಾಂತರಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ವ್ಯಕ್ತಿ ಪ್ರಕರಣವೊಂದರ ವಿಚಾರಣೆಯಲ್ಲಿ 25 ವರ್ಷಗಳನ್ನು ಕಳೆಯಬಾರದು. ವಿಚಾರಣೆ ಕೊನೆಗೊಳ್ಳಲೇಬೇಕು. ಇದು ನಿಮ್ಮದೇ ಒಳಿತಿಗೆ ಎಂದು ಕೋರ್ಟ್ ಅಡ್ವಾಣಿ ವಕೀಲರಿಗೆ ಹೇಳಿದೆ.
ಈಗಾಗಲೇ ರಾಯ್ ಬರೇಲಿಯಲ್ಲಿ 57 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಇನ್ನೂ 105 ಸಾಕ್ಷಿಗಳ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿದೆ. ಇನ್ನು ಕರಸೇವಕರ ಪ್ರಕರಣದಲ್ಲಿ ಲಕ್ನೋ ಕೋರ್ಟಿನಲ್ಲಿ 195 ಸಾಕ್ಷಿಗಳ ಹೇಳಿಕೆ ಪಡೆದುಕೊಂಡಿದ್ದರೆ ಇನ್ನೂ 800 ಜನರ ಹೇಳಿಕೆ ದಾಖಲಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಮಾಹಿತಿ ನೀಡಿದೆ.