ಅಂದು ಅಮಿತ್ ಶಾ, ಇಂದು ಚಿದಂಬರಂ: ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲ!
ಅದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯ. 30 ನವೆಂಬರ್ 2008ರಲ್ಲಿ ಶಿವರಾಜ್ ಪಾಟೀಲ್ ಅವರಿಂದ ಗೃಹಖಾತೆಯ ಹೊಣೆಯನ್ನು ಹೊತ್ತುಕೊಂಡವರು ಪಳನಿಯಪ್ಪ ಚಿದಂಬರಂ.
ಸುಮಾರು ಮೂರುವರೆ ವರ್ಷಗಳ ಕಾಲ ಆ ಹುದ್ದೆಯನ್ನು ನಿಭಾಯಿಸಿದ್ದರು. ದೇಶದ ಪ್ರಭಾವಿ ವಿತ್ತಸಚಿವರ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ ಚಿದಂಬರಂ, ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ದೆಹಲಿ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಕಳೆದ ಹದಿನಾಲ್ಕು ಗಂಟೆಯಲ್ಲಿ ಮೂರು ಬಾರಿ ಸಿಬಿಐ ತಂಡ ಅವರನ್ನು ಬಂಧಿಸಲು ಹೋಗಿ, ಬರಿಗೈಯಲ್ಲಿ ವಾಪಸ್ ಬಂದಿದೆ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಅವರ ವಿರುದ್ದ ಲುಕೌಟ್ ನೊಟೀಸ್ ಜಾರಿಯಾಗಿದೆ. ಇವೆಲ್ಲಾ ಈಗ ನಡೆಯುತ್ತಿರುವ ಬೆಳವಣಿಗೆಗಳು.
ಪಿ ಚಿದಂಬರಂಗೆ ಎಲ್ಲಾ ಬಾಗಿಲು ಬಂದ್, ಸುಪ್ರೀಂನಿಂದ ರಿಲೀಫ್ ಇಲ್ಲ
ಸುಮಾರು ಒಂಬತ್ತು ವರ್ಷಗಳ ಹಿಂದೆ ಇಂತಹದ್ದೇ ಒಂದು ಪರಿಸ್ಥಿತಿಯಲ್ಲಿ ಈಗಿನ ಗೃಹ ಸಚಿವ ಅಮಿತ್ ಶಾ ಇದ್ದರು. ಸೊಹ್ರಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐ ಬಂಧನಕ್ಕೆ ಒಳಗಾಗಿದ್ದರು. ಆ ವೇಳೆ, ಕೇಂದ್ರದಲ್ಲಿ ಗೃಹಸಚಿವರಾಗಿದ್ದವರು ಚಿದಂಬರಂ.
ಅಮಿತ್ ಶಾ ಗುಜರಾತ್ ನ ಗೃಹಸಚಿವರಾಗಿದ್ದರು
ಜುಲೈ 25, 2010ರಲ್ಲಿ, ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅಮಿತ್ ಶಾ ರಾಜ್ಯದ ಗೃಹಸಚಿವರಾಗಿದ್ದರು. ಸೊಹ್ರಬುದ್ದೀನ್ ಶೇಖ್ ನಕಲಿ ಪೊಲೀಸ್ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐ, ಶಾರನ್ನು ವಿಚಾರಣೆ ನಡೆಸಿತ್ತು. ಕೊನೆಗೆ ವಶಕ್ಕೂ ಪಡೆದುಕೊಂಡಿತ್ತು. ಕೊಲೆ, ಸುಲಿಗೆ, ಅಪಹರಣದ ಆರೋಪದ ಮೇಲೆ ಅಮಿತ್ ಶಾ ಅವರನ್ನು 13 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲಾಯಿತು. ಆಗಸ್ಟ್ 7, 2010ರವರೆಗೆ ಅಹಮದಾಬಾದ್ನ ಸಬರಮತಿ ಜೈಲಿಗೆ ಕರೆದೊಯ್ಯಲಾಗಿತ್ತು.
ಕಾಂಗ್ರೆಸ್ ತನಗೆ ಬೇಕಾದ ಹಾಗೇ ಬಳಸಿಕೊಳ್ಳುತ್ತಿದೆ
ಸಿಬಿಐ ಅನ್ನು ಕಾಂಗ್ರೆಸ್ ತನಗೆ ಬೇಕಾದ ಹಾಗೇ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ನಾಯಕರು, ಸ್ವತಃ ಅಮಿತ್ ಶಾ ಅಂದು ಆರೋಪಿಸಿದ್ದರು. "ತಾನು ನಿರಪರಾಧಿ, ನನ್ನ ವಿರುದ್ಧದ ಆರೋಪ ಒಂದು ಕಟ್ಟುಕಥೆ, ರಾಜಕೀಯ ಪ್ರೇರಿತ ಮತ್ತು ಕಾಂಗ್ರೆಸ್ ಸರ್ಕಾರದ ಸೂಚನೆಯ ಮೇರೆಗೆ ಸಿಬಿಐ ನಡೆದುಕೊಳ್ಳುತ್ತಿದೆ. ಸಿಬಿಐ ನನ್ನ ಸಂಪೂರ್ಣ ವಿಚಾರಣೆಯನ್ನು ವಿಡಿಯೋ ಮಾಡಬೇಕೆಂದು" ಅಮಿತ್ ಶಾ ಅಂದು ಒತ್ತಾಯಿಸಿದ್ದರು.
Live Updates ತನಿಖಾ ಸಂಸ್ಥೆಗಳಿಂದ ಚಿದಂಬರಂ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ
ಸಾಕ್ಷ್ಯಾಧಾರಗಳ ಕೊರತೆಯಿಂದ ಅಮಿತ್ ಶಾ ನಿರ್ದೋಷಿ
ಡಿಸೆಂಬರ್ 2014ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಅಮಿತ್ ಶಾ ಅವರನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮುಕ್ತಿಗೊಳಿಸಿತ್ತು. ಸೊಹ್ರಾಬುದ್ದೀನ್ ಕೇಸ್ ನಲ್ಲಿ ಆರೋಪಿಗಳಾಗಿದ್ದ ಇತರ ಇಬ್ಬರನ್ನೂ ಆಗಸ್ಟ್ 2017ರಲ್ಲಿ ಮುಕ್ತಿಗೊಳಿಸಿ ತೀರ್ಪು ನೀಡಲಾಯಿತು.
ಒಂಬತ್ತು ವರ್ಷದ ನಂತರ ಈಗ ಚಿದಂಬರಂ ಸರದಿ
ಒಂಬತ್ತು ವರ್ಷದ ನಂತರ ಈಗ ಚಿದಂಬರಂ ಸರದಿ. ಮನಿಲಾಂಡ್ರಿಂಗ್ ಹಾಗೂ ಭ್ರಷ್ಟಾಚಾರ ಕೇಸಿಗೆ ಸಂಬಂಧಿಸಿದಂತೆ ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಆ 20) ವಜಾಗೊಳಿಸಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಚಿದಂಬರಂ ಪರ ವಕೀಲ ಸಲ್ಮಾನ್ ಖುರ್ಷಿದ್ ಮೇಲ್ಮನವಿ ಸಲ್ಲಿಸಿದರೂ ಫಲ ಸಿಕ್ಕಿಲ್ಲ. ಅಯೋಧ್ಯಾ ಭೂ ವಿವಾದ ವಿಚಾರಣೆ ಪ್ರತಿದಿನ ನಡೆಯುತ್ತಿರುವುದರಿಂದ ಬೇರೆ ಯಾವುದೇ ಪ್ರಕರಣವನ್ನು ಸಿಜೆಐ ರಂಜನ್ ಗೊಗಾಯ್ ಅವರಿರುವ ನ್ಯಾಯಪೀಠ ಕೈಗೆತ್ತಿಕೊಂಡಿಲ್ಲ.
ಕಾಲ ಚಕ್ರ ಉರುಳುತ್ತೆ, ಎಲ್ಲರ ಕಾಲು ಎಳೆಯುತ್ತೆ ಕಾಲ
ಅಂದು ಬಿಜೆಪಿಯವರು, ಕಾಂಗ್ರೆಸ್, ಆಡಳಿತ ಯಂತ್ರವನ್ನು ದುರಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಏನು ಆರೋಪ ಮಾಡಿದ್ದರೋ, ಈಗ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಅದೇ ಆರೋಪವನ್ನು ಮಾಡುತ್ತಿದ್ದಾರೆ. ಕಾಲ ಚಕ್ರ ಉರುಳುತ್ತೆ, ಎಲ್ಲರ ಕಾಲು ಎಳೆಯುತ್ತೆ ಕಾಲ ಎಂಬ ಮಾತುಗಳು ಇಂತಹ ಪ್ರಕರಣಗಳಲ್ಲಿ ಅಕ್ಷರಶಃ ಸತ್ಯವಾಗುತ್ತವೆ.