'ಒನ್ ನೇಷನ್, ಒನ್ ರೇಶನ್ ಕಾರ್ಡ್' ದೇಶದೆಲ್ಲೆಡೆ ಜಾರಿಗೆ ಸುಪ್ರೀಂ ಆದೇಶ
ನವದೆಹಲಿ, ಜೂನ್ 29: ದೇಶದಾದ್ಯಂತ ಒಂದೇ ಪಡಿತರ ಚೀಟಿಯನ್ನು ಜಾರಿಗೆ ತರುವ ಮೋದಿ ಸರ್ಕಾರದ ಮಹತ್ವದ ಯೋಜನೆ 'ಒನ್ ನೇಷನ್, ಒನ್ ರೇಶನ್ ಕಾರ್ಡ್' ಅನುಷ್ಠಾನಗೊಳಿಸಲು ಇದ್ದ ಅಡ್ಡಿ ದೂರಾಗಿದೆ. ಜುಲೈ 31, 2021ರೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.
ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ದುಃಖದುಮ್ಮಾನಗಳ ಕುರಿತು ಸ್ವಯಂಪ್ರೇರಣೆಯಿಂದ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ನಿರ್ದೇಶನ ನೀಡಿದೆ.
'ಒನ್ ನೇಷನ್, ಒನ್ ರೇಶನ್ ಕಾರ್ಡ್' ಜಾರಿ ಬಗ್ಗೆ ಘೋಷಣೆ
ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ಎಂ ಆರ್ ಶಾ ಅವರಿದ್ದ ವಿಭಾಗೀಯ ಪೀಠವು ವಲಸೆ ಕಾರ್ಮಿಕರಿಗೆ ಪಡಿತರವನ್ನು ನೀಡಲು ರಾಜ್ಯಗಳು ಯೋಜನೆಯೊಂದನ್ನು ರೂಪಿಸಬೇಕು ಎಂದು ಹೇಳಿದೆ. ಜೊತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ (ಎನ್ಐಸಿ) ಸಮಾಲೋಚಿಸಿ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ನೋಂದಣಿಗಾಗಿ ಅಂತರ್ಜಾಲ ತಾಣವೊಂದನ್ನು ರೂಪಿಸುವಂತೆಯೂ ಸೂಚಿಸಿದೆ. ಈ ಎಲ್ಲಾ ಕಾರ್ಯಗಳನ್ನು ಜುಲೈ 31, 2021ರ ಒಳಗೆ ಪೂರೈಸುವಂತೆ ನಿರ್ದೇಶಿಸಿದೆ.
ಆಹಾರ ಭದ್ರತೆ, ಪಡಿತರದ ಖಾತರಿ ಒದಗಿಸಲು ಅರ್ಜಿ
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಸಾಮಾಜಿಕ ಕಾರ್ಯಕರ್ತರಾದ ಹರ್ಷ ಮಂದರ್, ಅಂಜಲಿ ಭಾರಧ್ವಾಜ್ ಮತ್ತು ಜಗದೀಪ್ ಚೊಕ್ಕಾರ್ ಅವರು ವಲಸೆ ಕಾರ್ಮಿಕರು ಹಾಗೂ ಪ್ರಯಾಣಿಸಲಾಗದೆ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಆಹಾರ ಭದ್ರತೆ, ಪಡಿತರದ ಖಾತರಿ ಒದಗಿಸಲು ಕೋರಿ ತುರ್ತು ಅರ್ಜಿಯನ್ನು ಸಲ್ಲಿಸಿದ್ದರು.
ಯಾವುದೇ ರಾಜ್ಯದಲ್ಲಾದರೂ ಪಡಿತರ
ಈ ರೇಷನ್ ಕಾರ್ಡ್ ತೋರಿಸಿ ದೇಶದ ಯಾವುದೇ ರಾಜ್ಯದಲ್ಲಾದರೂ ಪಡಿತರ ಪಡೆಯಬಹುದಾಗಿದೆ. ಈಗಿರುವ ಪಡಿತರ ವ್ಯವಸ್ಥೆಯ ಪ್ರಕಾರ ಕುಟುಂಬವೊಂದು, ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸಿದರೆ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಬೇಕಾಗುತ್ತದೆ ಇದು ತ್ರಾಸದಾಯಕ ವ್ಯವಸ್ಥೆ, ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವಲಸೆ ಸಮಸ್ಯೆ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಒಂದು ದೇಶ, ಒಂದು ರೇಷನ್ ಕಾರ್ಡ್ ಮಹತ್ವ ಪಡೆದುಕೊಳ್ಳಲಿದೆ
ಇದಕ್ಕಾಗಿ ಸುಮಾರು ರೂ.417 ಕೋಟಿ ಹಣವನ್ನು ಹಂಚಿಕೆ ಮಾಡಲಾಗಿದ್ದರೂ ಆಮೆಗತಿಯಲ್ಲಿ ಕೆಲಸವು ಸಾಗುತ್ತಿರುವ ಬಗ್ಗೆ ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ
'ಒನ್ ನೇಷನ್, ಒನ್ ರೇಶನ್ ಕಾರ್ಡ್' ಜಾರಿ
'ಒನ್ ನೇಷನ್, ಒನ್ ರೇಶನ್ ಕಾರ್ಡ್' ಜಾರಿ ಬಗ್ಗೆ ಘೋಷಣೆ ಕೇಳಿ ಬಂದಿದ್ದು, ಮಾರ್ಚ್ 2021ರೊಳಗೆ ದೇಶದೆಲ್ಲೆಡೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಆಗಸ್ಟ್ 2020ರ ವೇಳೆಗೆ ಶೇ 67ರಷ್ಟು ಮಂದಿ 'ಒನ್ ನೇಷನ್, ಒನ್ ರೇಶನ್ ಕಾರ್ಡ್' ಯೋಜನೆಗೆ ಒಳಪಡಲಿದ್ದಾರೆ. ಪ್ರತಿ ಕುಟುಂಬಕ್ಕೆ 1 ಕೆಜಿ ಅಕ್ಕಿ ಅಥವಾ 1 ಕೆಜಿ ಗೋಧಿ ಜೊತೆಗೆ ಹೆಚ್ಚುವರಿ 1ಕೆಜಿ ಧಾನ್ಯ ಸಿಗಲಿದೆ. ಒಂದೇ ಪಡಿತರ ವಿತರಣೆ ಅಂಗಡಿ ಮೇಲೆ ಅವಲಂಬನೆ ತಪ್ಪುವುದರಿಂದ ಭ್ರಷ್ಟಾಚಾರ ತಪ್ಪಿಸಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇ ತಿಂಗಳಿನಲ್ಲಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
23 ರಾಜ್ಯಗಳಲ್ಲಿ 63 ಕೋಟಿ ಫಲಾನುಭವಿಗಳಿಗೆ ಪಡಿತರ
ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಗೊಳ್ಳುವುದರಿಂದ 23 ರಾಜ್ಯಗಳಲ್ಲಿ 63 ಕೋಟಿ ಫಲಾನುಭವಿಗಳಿಗೆ ಪಡಿತರ ಸೌಲಭ್ಯ ಸಿಗಲಿದೆ. ಮಾರ್ಚ್ 2021ರೊಳಗೆ ಶೇ 100ರಷ್ಟು ಫಲಾನುಭವಿಗಳನ್ನು ಕಾಣುವುದು ಸರ್ಕಾರ ಗುರಿ, ಉದ್ದೇಶ. ಯಾವುದೇ ಕುಟುಂಬ ಅಥವಾ ವ್ಯಕ್ತಿ ಯಾವುದೇ ಊರಿಗೆ ಹೋದರು ಅಲ್ಲಿರುವ ಪಡಿತರ ವಿತರಣೆ ಅಂಗಡಿಯಲ್ಲಿ ರೇಷನ್ ಕಾರ್ಡ್ ತೋರಿಸಿ ಆಹಾರ ಪದಾರ್ಥಗಳನ್ನು ಪಡೆಯಬಹುದಾಗಿದೆ ಎಂದರು. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ.(ಮಾಹಿತಿಕೃಪೆ: ಬಾರ್ ಅಂಡ್ ಬೆಂಚ್, ವಿತ್ತ ಸಚಿವಾಲಯ)