ಮುಂಗಾರು; ಇನ್ನೂ 2-3 ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ನವದೆಹಲಿ, ಆಗಸ್ಟ್ 2: ಜುಲೈ ಮೊದಲ ವಾರದ ನಂತರ ದೇಶಾದ್ಯಂತ ಆರ್ಭಟಿಸಿದ ಮುಂಗಾರು ತಿಂಗಳಾಂತ್ಯದಲ್ಲಿ ಕ್ಷೀಣಿಸಿದೆ. ಹಲವು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ, ಮೇಘಸ್ಫೋಟ ಕೂಡ ಸಂಭವಿಸಿದೆ. ಇದಾಗ್ಯೂ ತಿಂಗಳಿಗೆ ನೈಋತ್ಯ ಮುಂಗಾರಿನಲ್ಲಿ ಮಳೆ ಪ್ರಮಾಣ ಶೇ7ರಷ್ಟು ಕಡಿಮೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜುಲೈ ತಿಂಗಳಿನಲ್ಲಿ ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. ಜುಲೈ 8ರವರೆಗೂ ಮಳೆ ಇಲ್ಲದ ಕಾರಣ ಈ ಕೊರತೆ ಕಂಡುಬಂದಿದೆ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ಇದರೊಂದಿಗೆ ಈ ವಾರ ದೆಹಲಿ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳಿಗೆ ಭಾರೀ ಮಳೆ ಸೂಚನೆಯೊಂದಿಗೆ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದೆ ಓದಿ...
ಮುಂಗಾರು ಪ್ರಭಾವ; ಇನ್ನೂ ಕೆಲದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ಕೊಟ್ಟ IMD
ಶುಕ್ರವಾರದವರೆಗೂ ದೆಹಲಿಯಲ್ಲಿ ಅಲರ್ಟ್
ದೆಹಲಿಯಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಸೋಮವಾರ ಕೂಡ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ದೆಹಲಿ, ನೋಯ್ಡ, ಗುರುಗ್ರಾಮ ಹಾಗೂ ಇತರೆ ಕಡೆಗಳಲ್ಲಿ ಭಾರೀ ಮಳೆಯಾಗಲಿದ್ದು, ಸೋಮವಾರ ಹಾಗೂ ಶುಕ್ರವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಸ್ಥಾನದಲ್ಲಿ ಕೂಡ ಭಾನುವಾರ ಹೆಚ್ಚಿನ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹದಂಥ ಪರಿಸ್ಥಿತಿ ಏರ್ಪಟ್ಟಿದೆ. ಇಲ್ಲಿಯೂ ಸೋಮವಾರದಿಂದ ಗುರುವಾರದವರೆಗೂ ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಜಲಾವರ್, ಬಾರನ್, ಕೋಟಾ ಹಾಗೂ ಪ್ರತಾಪಘರ್ಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶಕ್ಕೆ ಆಗಸ್ಟ್ 4ರವರೆಗೂ ಮಳೆ ಅಲರ್ಟ್ ನೀಡಲಾಗಿದೆ.
ಮಹಾರಾಷ್ಟ್ರ, ಗೋವಾದಲ್ಲಿ ಎರಡು ಮೂರು ದಿನ ಮಳೆ
ಮಧ್ಯಪ್ರದೇಶದ ಹತ್ತು ಜಿಲ್ಲೆಗಳಿಗೆ ಭಾನುವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಸೋಮವಾರ ಕೂಡ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ. ಮಂಗಳವಾರದವರೆಗೂ ಮಳೆ ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಮಳೆ ಕೊಂಚ ತಗ್ಗಿದೆ. ಆದರೆ ಮಳೆಯಿಂದಾದ ಅವಾಂತರಗಳು ಇನ್ನೂ ಕೊನೆಯಾಗಿಲ್ಲ. ಭಾನುವಾರ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಗೋವಾದಲ್ಲಿ ಕೂಡ ಕೆಲವು ದಿನ ಮಳೆ ಮುಂದುವರೆಯುವುದಾಗಿ ತಿಳಿಸಿದೆ.
ಆಗಸ್ಟ್ 4ರವರೆಗೂ ಈ ರಾಜ್ಯಗಳಲ್ಲಿ ಮಳೆ
ಉತ್ತರ ಪ್ರದೇಶದಲ್ಲಿಯೂ ಸೋಮವಾರ ಹೆಚ್ಚಿನ ಮಳೆಯಾಗಲಿದೆ ಎಂದು ತಿಳಿಸಿದೆ. ಉತ್ತರ ಭಾರತದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರೆಯಲಿದೆ. ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಹರಿಯಾಣದಲ್ಲಿ ಆಗಸ್ಟ್ 4ರವರೆಗೂ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ. ಮಧ್ಯಪ್ರದೇಶದ ಐದು ಜಿಲ್ಲೆಗಳಿಗೆ ಸೋಮವಾರ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕರಾವಳಿ, ಮಲೆನಾಡಿನಲ್ಲಿ ಚದುರಿದ ಮಳೆ ಸಂಭವ
ಕರ್ನಾಟಕದಲ್ಲಿ ಮುಂಗಾರು ಕ್ಷೀಣಿಸಿದೆ. ಒಣಹವೆ ಆರಂಭವಾಗಲಿದ್ದು, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಚದುರಿದ ಮಳೆಯಾಗಲಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಸೂಚನೆ ನೀಡಲಾಗಿದೆ.
ಇದರೊಂದಿಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರು ಮಳೆ ತೀವ್ರತೆ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದ ನಂತರ ಮುಂಗಾರು ಸಂಪೂರ್ಣ ದುರ್ಬಲಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.