ಕೇರಳಕ್ಕೆ ಮುಂಗಾರು ಪ್ರವೇಶ, ಹವಾಮಾನ ಇಲಾಖೆ ಏನು ಹೇಳುತ್ತೆ?
ತಿರುವನಂತಪುರಂ, ಮೇ 16: ಕೇರಳಕ್ಕೆ ಮುಂಗಾರು ಪ್ರವೇಶದ ಕುರಿತು ಖಾಸಗಿ ಹವಾಮಾನ ಇಲಾಖೆ ಸ್ಕೈಮೆಟ್ ವರದಿ ನೀಡಿ ಒಂದು ದಿನದ ಬಳಿಕ ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮುನ್ಸೂಚನೆ ಹೊರಡಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಭಾರತಕ್ಕೆ ಜೂನ್ 6ರಂದು ಮುಂಗಾರು ಪ್ರವೇಶಿಲಿದೆ. ಈ ಬಾರಿಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ತಿಳಿಸಿದೆ.
ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು ಪ್ರವಾಹದ ಸಾಧ್ಯತೆ ಕೇವಲ ಶೇ.15ರಷ್ಟಿದೆ ಎಂದು ಸ್ಕೈಮೆಟ್ ವೆದರ್ ವರದಿ ಮಾಡಿತ್ತು.
ಜೂನ್ 4 ರಂದು ಕೇರಳಕ್ಕೆ ಮುಂಗಾರುಮಳೆ, ಈ ಬಾರಿ ಸಾಧಾರಣಕ್ಕಿಂತ ಕಡಿಮೆ ಮಳೆ
ನಾಲ್ಕು ತಿಂಗಳ ಮಳೆಗಾಲದಲ್ಲಿ ದೀರ್ಘಾವಧಿ ಮಳೆಯ ಪ್ರಮಾಣ 887ಮಿ.ಮೀನ ಶೇ.96ರಷ್ಟಿರಬೇಕು. ಇದನ್ನು ಸಾಮಾನ್ಯ ಮುಂಗಾರು ಎನ್ನಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ಸ್ಕೈಮೆಟ್ ವರದಿ ಪ್ರಕಾರ ಈ ಬಾರಿ ಶೇ.93ರಷ್ಟು ಮಳೆಯಾಗಲಿದೆ ಸಾಮಾನ್ಯ ಮುಂಗಾರಿಗಿಂತಲೂ ಕಡಿಮೆ ಎಂದು ಹೇಳಿದೆ.
ಎಲ್ ನಿನೋ ಮಾಹಿತಿ ಪ್ರಕಾರ ಜೂನ್ ವೇಳೆಗೆ ದುರ್ಬಲವಾಗಲಿದ್ದು ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದಾಗಿದೆ.
ಎಲ್ ನಿನೋ ಎಂದರೇನು?
ಎಲ್ ನಿನೋ ಎಂದರೆ ಸ್ಪೇನ್ ಭಾಷೆಯಲ್ಲಿ ಬಾಲಕ್ರಿಸ್ತ ಎನ್ನುವ ಹೆಸರಿದೆ. ಪೆಸಿಫಿಕ್ ಸಾಗರದ ಪೆರು ಮತ್ತು ಈಕ್ವೆಡಾರ್ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರಿತ್ಯದ ವಿದ್ಯಮಾನವಾಗಿದೆ. ಇದರ ಪ್ರಾರಂಭದ ಸೂಚನೆಯಾಗಿ ಈ ಭಾಗದ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪ ಸರಾಸರಿಗಿಂತ ಹೆಚ್ಚಾಗಲು ಆರಂಭವಾಗುತ್ತದೆ. ಪೆಸಿಫಿಕ್ ಸಾಗರದ ಮೇಲ್ಮೈ ತಾಪ ಸರಾಸರಿ ಸಹಜ ತಾಪಕ್ಕಿಂತ 0.5-0.9ಡಿಗ್ರಿ ಸೆಲ್ಷಿಯಸ್ ಇದ್ದರೆ ಅದು ದುರ್ಬಲ ಎನ್ ನಿನೋ ಎಂದು ಕರೆಸಿಕೊಳ್ಳುತ್ತದೆ. ಎಲ್ನಿನೋ 1.5 ಡಿಗ್ರಿಗಿಂತ ಹೆಚ್ಚಿರಬೇಕು ಆಗ ಹೆಚ್ಚಿನ ಮಳೆಯ ಸಂಭವವಿರುತ್ತದೆ.
ಮುಂಗಾರು ಮಳೆ ಕಡಿಮೆ ಮುನ್ಸೂಚನೆ : ಸರ್ಕಾರದಿಂದ ಮೋಡ ಬಿತ್ತನೆ
ದೀರ್ಘಾವಧಿ ಮಳೆ ಪ್ರಮಾಣ ಎಷ್ಟಿರಬೇಕು
ಸಾಮಾನ್ಯ ಮಳೆ ಎಂದರೆ ದೀರ್ಘಾವಧಿ ಮಳೆ ಪ್ರಮಾಣ 887ಮಿ.ಮೀನ ಶೇ.96ರಷ್ಟಿರಬೇಕು. ಸ್ಕೈಮೆಟ್ ವರದಿ ಪ್ರಕಾರ ಈ ಬಾರಿ ಶೇ.93ರಷ್ಟು ಮಳೆಯಾಗಲಿದೆ ಸಾಮಾನ್ಯ ಮುಂಗಾರಿಗಿಂತಲೂ ಕಡಿಮೆ ಎಂದು ಹೇಳಿದೆ.
ಎಲ್ಲೆಲ್ಲಿ ಪ್ರವಾಹ ಸಾಧ್ಯತೆ
ಪಶ್ಚಿಮ ಬಂಗಾಳ,ಬಿಹಾರ, ಜಾರ್ಖಂಡ್, ಮಹಾರಾಷ್ಟ್ರದ ವಿದರ್ಭಾ, ಮರಾಠವಾಡ,ಮಧ್ಯಪ್ರದೇಶ, ಗುಜರಾತ್ನಲ್ಲಿ ಪ್ರವಾಹವನ್ನು ನಿರೀಕ್ಷಿಸಬಹುದು ಎಂದು ಸ್ಕೈಮೆಟ್ ತಿಳಿಸಿದೆ.
ಕರ್ನಾಟಕಕ್ಕೆ ಜೂನ್ 9ರಂದು ಮುಂಗಾರು ಪ್ರವೇಶ
ಮುಂಗಾರು ಮಾರುತಗಳು ಜೂನ್ 6ಕ್ಕೆ ಕೇರಳ ಪ್ರವೇಶಿಸಲಿದ್ದು, ಜೂನ್ 8 ಅಥವಾ 9ಕ್ಕೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಮಾರುತಗಳು ತೀವ್ರತೆ ಹೆಚ್ಚಾಗಿದ್ದರೆ ಒಂದೇ ದಿನಕ್ಕೆ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸುತ್ತದೆ. ಮಾರುತಗಳ ತೀವ್ರತೆ ಕಡಿಮೆಯಿದ್ದರೆ ಹೆಚ್ಚಿನ ಅವಧಿ ಕೇರಳದಲ್ಲಿಯೇ ಉಳಿಯಲಿದೆ.