ವಾರಾಂತ್ಯದವರೆಗೂ ಈ 10 ರಾಜ್ಯಗಳಲ್ಲಿ ಮಳೆ ಮುನ್ಸೂಚನೆ
ನವದೆಹಲಿ, ಸೆಪ್ಟೆಂಬರ್ 22: ದೇಶದಲ್ಲಿ ಮುಂಗಾರು ಅಂತ್ಯವಾಗುವುದು ಈ ಬಾರಿ ಇನ್ನಷ್ಟು ವಿಳಂಬವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಸೆಪ್ಟೆಂಬರ್ 26ರವರೆಗೂ ಹತ್ತು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ನೀಡಿದೆ.
ಹತ್ತು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಗುಜರಾತ್ನಲ್ಲಿ ಮುಂದಿನ ಐದು ದಿನಗಳವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಮುಂಗಾರು ಪ್ರಭಾವದಿಂದಾಗಿ ಇನ್ನಷ್ಟು ದಿನಗಳ ಕಾಲ ಹಲವೆಡೆ ಮಳೆ ಮುಂದುವರೆಯುವುದಾಗಿ ಅಂದಾಜಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಅತ್ಯಧಿಕ ಮಳೆ; ಮುಂಗಾರು ಅಂತ್ಯ ವಿಳಂಬ
ಸೆಪ್ಟೆಂಬರ್ 22ರಂದು ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಧಿಕ ಮಳೆಯಾಗುವುದು. ರಾಜಸ್ಥಾನ ಹಾಗೂ ಗುಜರಾತ್ನಲ್ಲಿ ಸೆಪ್ಟೆಂಬರ್ 21ರಿಂದ 25ರವರೆಗೆ ಹಾಗೂ ರಾಜಸ್ಥಾನದಲ್ಲಿ ಸೆಪ್ಟೆಂಬರ್ 21 ಹಾಗೂ 22ರಂದು ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ.
ಸೆಪ್ಟೆಂಬರ್ 21ರಿಂದ 25ರವರೆಗೆ ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ಹರಿಯಾಣದಲ್ಲಿ ಸೆಪ್ಟೆಂಬರ್ 22ರಂದು ಚದುರಿದ ಮಳೆಯಾಗಲಿದೆ. ಪೂರ್ವ ಮಧ್ಯ ಪ್ರದೇಶ, ವಿದರ್ಭಾ ಹಾಗೂ ಛತ್ತೀಸ್ಗಢದಲ್ಲಿ ಸೆಪ್ಟೆಂಬರ್ 24ರವರೆಗೆ ಮಳೆ ಮುಂದುವರೆದು, ಆನಂತರ ಮಳೆ ತಗ್ಗುವುದು ಎಂದು ಮಾಹಿತಿ ನೀಡಿದೆ.
ಸೆಪ್ಟೆಂಬರ್ 25ರ ವೇಳೆಗೆ ಪೂರ್ವ ಮಧ್ಯ ಹಾಗೂ ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆಯಿದೆ. ಈ ಮಾರುತಗಳು ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸಿ ನಂತರದ 48 ಗಂಟೆಗಳಲ್ಲಿ ಒಡಿಶಾ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ಇದರ ಪ್ರಭಾವದಲ್ಲಿ ಸೆಪ್ಟೆಂಬರ್ 26ರಂದು ಒಡಿಶಾ ಹಾಗೂ ನೆರೆ ಹೊರೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಮುಂದಿನ ನಾಲ್ಕೈದು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ಮಹಾರಾಷ್ಟ್ರ ವಿದರ್ಭಾದ ಒಂಬತ್ತು ಜಿಲ್ಲೆಗಳಿಗೆ ಭಾರೀ ಮಳೆ ಸೂಚನೆಯೊಂದಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಬುಧವಾರ ಹಾಗೂ ಗುರುವಾರ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ನಾಗ್ಪುರ, ಭಂಡಾರ, ಗೊಂಡಿಯಾ, ಅಮರಾವತಿ, ವಾರ್ಧಾ, ಗಡ್ಚಿರೋಲಿ, ಚಂದ್ರಾಪುರ, ಯಾವತ್ಮಾಲ್ ಹಾಗೂ ವಾಶಿಮ್ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.
ದೆಹಲಿಯಲ್ಲಿ ಕೂಡ ಹವಾಮಾನ ವೈಪರೀತ್ಯದ ಎಚ್ಚರಿಕೆ ನೀಡಿದ್ದು, ಬುಧವಾರ ಹೆಚ್ಚಿನ ಮಳೆಯಾಗಿ ಹಲವು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಯಿದೆ, ಜೊತೆಗೆ ಸಂಚಾರ ಅಸ್ತವ್ಯಸ್ತವಾಗಬಹುದು ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಮಳೆ: ರಾಜ್ಯದಲ್ಲಿ ಸೆಪ್ಟೆಂಬರ್ 24ರವರೆಗೂ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದೆ. ಮುಂದಿನ 24 ಗಂಟೆಗಳ ಕಾಲ ಕರ್ನಾಟಕ ದಕ್ಷಿಣ ಒಳನಾಡು, ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬುಧವಾರ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂಗಾರು
ಅಂತ್ಯವಾಗಲು
ವಿಳಂಬ:
ದೇಶದಲ್ಲಿ
ಈ
ಬಾರಿ
ಸೆಪ್ಟೆಂಬರ್
ತಿಂಗಳಲ್ಲಿ
ವಾಡಿಕೆಗಿಂತ
27%
ಹೆಚ್ಚಿನ
ಮಳೆಯಾಗಲಿದೆ.
ಬಂಗಾಳ
ಕೊಲ್ಲಿಯಲ್ಲಿ
ರೂಪುಗೊಂಡಿರುವ
ವಾಯುಭಾರ
ಕುಸಿತ
ಮಳೆ
ಪ್ರಮಾಣದ
ಏರಿಕೆಗೆ
ಕಾರಣವಾಗಲಿದೆ.
ಇದರಿಂದಾಗಿ
ಸಾಮಾನ್ಯವಾಗಿ
ಸೆಪ್ಟೆಂಬರ್
17ರಿಂದ
ಕಡಿಮೆಯಾಗಬೇಕಿದ್ದ
ಮಳೆ
ಇನ್ನೂ
ಮುಂದುವರೆಯಲಿದೆ
ಎಂದು
ಹವಾಮಾನ
ಇಲಾಖೆ
ಮಾಹಿತಿ
ನೀಡಿದೆ.
ಈ ಬಾರಿ ಮುಂಗಾರು ಅಂತ್ಯ ವಿಳಂಬವಾಗಲಿದೆ, ಇದು ಅಸಹಜವೇನಲ್ಲ. 2019ರಲ್ಲಿ ನೈಋತ್ಯ ಮುಂಗಾರು ಅಕ್ಟೋಬರ್ 9ಕ್ಕೆ ಕೊನೆಯಾಗಿತ್ತು. 2017 ಹಾಗೂ 2018ರಲ್ಲಿಯೂ ಇದೇ ರೀತಿ ಆಗಿತ್ತು. ಈ ಬಾರಿ ಸೆಪ್ಟೆಂಬರ್ 1-20ರವರೆಗೆ ದೇಶದ ಎಲ್ಲೆಡೆಯೂ ಅಧಿಕ ಮಳೆಯಾಗಿದೆ. ಮಧ್ಯ ಭಾರತದಲ್ಲಿ ವಾಡಿಕೆಗಿಂತ 71% ಅಧಿಕ ಮಳೆಯಾಗಿದ್ದು, ನೈಋತ್ಯ ಭಾರತದಲ್ಲಿ 26% ಅಧಿಕ ಮಳೆ ದಾಖಲಾಗಿದೆ.
ಈ ಅಕ್ಟೋಬರ್ ಮಧ್ಯದವರೆಗೂ ಮಳೆ ಮುಂದುವರೆಯಲಿದ್ದು, ಆನಂತರ ಮುಂಗಾರು ಅಂತ್ಯವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.