ಮುಂಗಾರು ಅಬ್ಬರ; ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್
ನವದೆಹಲಿ, ಜೂನ್ 15: ದೇಶದ ಬಹುಪಾಲು ರಾಜ್ಯಗಳಿಗೆ ಈಗಾಗಲೇ ಮುಂಗಾರು ಪ್ರವೇಶವಾಗಿದೆ. ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್ ಹೊರತುಪಡಿಸಿ ಹಲವು ಭಾಗಗಳಲ್ಲಿ ಅಧಿಕ ಮಳೆಯಾಗುತ್ತಿದೆ.
ಇದೀಗ ದೇಶದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದು, ಗೋವಾಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳು, ಛತ್ತೀಸ್ಗಡ, ಒಡಿಶಾ, ಜಾರ್ಖಂಡ್ನ ಕರಾವಳಿ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಬೈನಲ್ಲಿ ಮಳೆ ಅಬ್ಬರ; ರೆಡ್ ಅಲರ್ಟ್ ಘೋಷಣೆ
ಕರ್ನಾಟಕಕ್ಕೆ ಜೂನ್ 17ರವರೆಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಜೂನ್ 17ರವರೆಗೂ ಆರೆಂಜ್ ಅಲರ್ಟ್ ಘೋಷಿಸಿರುವುದಾಗಿ ಬೆಂಗಳೂರಿನ ಹವಾಮಾನ ಇಲಾಖೆ ಘಟಕದ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ. ಮುಂದೆ ಓದಿ...
ಕರ್ನಾಟಕದಲ್ಲಿ ಜೂನ್ 17ರವರೆಗೂ ಆರೆಂಜ್ ಅಲರ್ಟ್
ಜೂನ್ 13ರಿಂದ 17ರವರೆಗೂ ಇಡೀ ಕರ್ನಾಟಕದಲ್ಲಿ ಮಳೆ ಅನುಭವವಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹತ್ತು ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಮಳೆ
ದೇಶದ ಬಹುಪಾಲು ಭಾಗಗಳಲ್ಲಿ ಈಗಾಗಲೇ ಮುಂಗಾರು ಚುರುಕಾಗಿದೆ. ಉತ್ತರ ಪ್ರದೇಶ, ಪಂಜಾಬ್ನ ಕೆಲವು ಪ್ರದೇಶಗಳು, ರಾಜಸ್ಥಾನ, ಗುಜರಾತ್ನಲ್ಲಿ ಮಳೆಯಾಗಬೇಕಿದ್ದು, ಇನ್ನು ಹತ್ತು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಗಿಂತ ಹೆಚ್ಚಿನ ಮಳೆ
ಮಧ್ಯಪ್ರದೇಶ, ಛತ್ತೀಸ್ಗಡ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಲ್ತಿಸ್ಥಾನ, ಮುಝಾಫರ್ಬಾದ್ ಹಾಗೂ ಹರಿಯಾಣ, ಚಂಡೀಗಢದಲ್ಲಿ ಮುಂಗಾರು ಪ್ರವೇಶವಾಗಿದೆ. ಜೂನ್ 1ರಿಂದ ದೇಶದ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ವಾಡಿಕೆಗಿಂತ 25% ಹೆಚ್ಚಿನ ಮಳೆ ದಾಖಲಾಗಿದೆ. ಜುಲೈ 5ರಷ್ಟರಲ್ಲಿ ಇಡೀ ದೇಶದಲ್ಲಿ ಮುಂಗಾರು ಮಳೆ ಆವರಿಸಲಿದೆ ಎಂದು ತಿಳಿಸಿದೆ.
ಈ ಬಾರಿ ಮುಂಗಾರು ಪ್ರಭಾವ ಹೇಗಿರುತ್ತದೆ?
ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಐಎಂಡಿ ತಿಳಿಸಿದೆ. ಭಾರತದಲ್ಲಿ ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮೋಹಪತ್ರ ಮಾಹಿತಿ ನೀಡಿದ್ದಾರೆ.
ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ(ಜೂನ್ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆ ಸಾಮಾನ್ಯ ಪ್ರಮಾಣದಲ್ಲಿ ಇರಲಿದೆ. 96-104 ಶೇಕಡಾ ಪ್ರಮಾಣದ ಮಳೆಯಾಗಬಹುದು. ದೀರ್ಘಾವಧಿಯ ಸರಾಸರಿಯಲ್ಲಿ ಮಳೆಯ ಪ್ರಮಾಣ ನೈಋತ್ಯ ಮುಂಗಾರಿನಲ್ಲಿ 101 ಶೇಕಡಾದಷ್ಟು ಬೀಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.