ಈ ಬಾರಿಯ 'ಉರಿ ಬೇಸಿಗೆ' ಕುರಿತು ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ಬೆಂಗಳೂರು, ಮಾರ್ಚ್ 04: ಈ ಬಾರಿಯ 'ಉರಿ ಬೇಸಿಗೆ' ಕುರಿತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ವರ್ಷ ಬೇಸಿಗೆ ಸಾಮಾನ್ಯಕ್ಕಿಂತ ಹೆಚ್ಚು ಸೆಕೆಯಿಂದ ಕೂಡಿರಲಿದೆ, ಉತ್ತರ, ಪೂರ್ವ, ವಾಯುವ್ಯ ಮತ್ತು ಮಧ್ಯಭಾರತದಲ್ಲಿ ಈ ಬೇಸಿಗೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ಈ ವರ್ಷದ ಮಾರ್ಚ್ ಮತ್ತು ಮೇ ನಡುವಿನ ತಾಪಮಾನದ ಕುರಿತು ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾಗಿ ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.
ಬೇಸಿಗೆಯಲ್ಲಿ ಹಿಮಾಲಯ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂನಲ್ಲಿ ತಾಪಮಾನ ಸಾಮಾನ್ಯವಾಗಿರಲಿದೆ
ರಾಜ್ಯದಲ್ಲಿ ಚಳಿ ಕಡಿಮೆ ಆಯ್ತು, ಸೆಕೆ ವಿಪರೀತ ಹೆಚ್ಚಳ, ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ
ಯಾವ್ಯಾವ ಪ್ರದೇಶಗಳು ಹೆಚ್ಚಿನ ಎಚ್ಚರಿಕೆಯಿಂದಿರಬೇಕು
ದೆಹಲಿ, ಚಂಡೀಗಢ, ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ನಿರ್ದಿಷ್ಟ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ಸೃಷ್ಟಿಯಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ ಶಾಖದ ಅಲೆಗಳು ಹೆಚ್ಚಾಗಲಿವೆ. ಸೆಕೆಯನ್ನು ಬರಮಾಡಿಕೊಳ್ಳಲು ಸಿದ್ಧರಾಗಿ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.
ಅತಿ ಹೆಚ್ಚು ತಾಪಮಾನ ದಾಖಲಾಗಬಹುದಾದ ಪ್ರದೇಶಗಳು
ಹಿಮಾಚಲಪ್ರದೇಶ, ಕಚ್, ರಾಜಸ್ಥಾನ, ಉತ್ತರಾಖಂಡ್, ಸೌರಾಷ್ಟ್ರ, ಗುಜರಾತ್, ಅಸ್ಸಾಂ, ನಾಗಾಲ್ಯಾಂಡ್, ಮಧ್ಯ ಪ್ರದೇಶ, ಮೇಘಾಲಯ, ಅರುಣಾಚಲಪ್ರದೇಶ, ಸಿಕ್ಕಿಂ, ಮಣಿಪುರ, ಬಿಹಾರದಲ್ಲಿ ಹೆಚ್ಚು ಉಷ್ಣಾಂಶವಿರಲಿದೆ.
ಆಂಧ್ರ,ಕರ್ನಾಟಕ, ಕೇರಳದಲ್ಲೂ ಗರಿಷ್ಠ ತಾಪಮಾನ ಹೆಚ್ಚಳ
ಆಂಧ್ರದ ಕರಾವಳಿ ಭಾಗದಲ್ಲೂ ಗರಿಷ್ಠ ಉಷ್ಣಾಂಶ ಹೆಚ್ಚಾಗಲಿದೆ, ತೆಲಂಗಾಣ, ಕೇರಳ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಸ್ವಲ್ಪ ಉಷ್ಣಾಂಶ ಏರಿಕೆಯಾಗಲಿದೆ.
ಹಗಲು ಹಾಗೂ ರಾತ್ರಿ ಸಮಯದಲ್ಲೂ ಹೆಚ್ಚು ತಾಪಮಾನ
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬೆಳಗ್ಗೆ ಬಿಸಿಲು ಆರಂಭವಾಗಿ ಸಂಜೆ ಬಿಸಿಲು ಕಡಿಮೆಯಾಗಿ ಸ್ವಲ್ಪ ಸಮಯಗಳವರೆಗೆ ಉಷ್ಣಾಂಶವಿರುತ್ತಿತ್ತು. ಆದರೆ ಈ ಬೇಸಿಗೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡೂ ಸಮಯದಲ್ಲೂ ಸೆಕೆ ನಿಮ್ಮನ್ನು ಕಾಡಲಿದೆ.