ಜುಲೈ 31ರವರೆಗೆ ಈ ರಾಜ್ಯಗಳಲ್ಲಿ ಅಧಿಕ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ನವದೆಹಲಿ, ಜುಲೈ 28: ಜುಲೈ ತಿಂಗಳ ಎರಡನೇ ವಾರದ ನಂತರ ದೇಶಾದ್ಯಂತ ನೈಋತ್ಯ ಮುಂಗಾರಿನ ಪ್ರಭಾವ ಜೋರಾಗಿದ್ದು, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ, ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗುತ್ತಿದೆ.
ಈ ತಿಂಗಳಾಂತ್ಯದವರೆಗೂ ಮಳೆ ಮುಂದುವರೆಯುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಕೆಲವು ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆಯನ್ನು ರವಾನಿಸಿದೆ. ಮುಂದಿನ ಮೂರು ದಿನಗಳ ಕಾಲ ಕೊಂಕಣ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಪ್ರದೇಶಗಳು ಹಾಗೂ ತಮಿಳುನಾಡಿನಲ್ಲಿಯೂ ಮಳೆಯಾಗಲಿದೆ. ಪಂಜಾಬ್, ಹರಿಯಾಣದಲ್ಲಿ ಮಳೆ ಆರಂಭವಾಗಲಿದೆ ಎಂದು ತಿಳಿಸಿದೆ. ಒಡಿಶಾದಲ್ಲಿ ಅಧಿಕ ಪ್ರಮಾಣದ ಮಳೆಯಾಗುವ ಅಲರ್ಟ್ ನೀಡಲಾಗಿದೆ. ಮುಂದೆ ಓದಿ...
ಜುಲೈ 31ರವರೆಗೂ ಈ ರಾಜ್ಯಗಳಲ್ಲಿ ಮಳೆ ಹೆಚ್ಚು
ಜುಲೈ 28ರಂದು ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಜುಲೈ 28, 29ರಂದು ಪಶ್ಚಿಮ ಬಂಗಾಳ, ಜುಲೈ 29ರಂದು ಜಾರ್ಖಂಡ್ ಹಾಗೂ ಛತ್ತೀಸ್ಗಡದಲ್ಲಿ ಜುಲೈ 30 ಹಾಗೂ ಮಧ್ಯಪ್ರದೇಶದಲ್ಲಿ ಜುಲೈ 31ರಂದು ಅತಿ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ. ಮಧ್ಯಪ್ರದೇಶದ ಭೋಪಾಲ್ಗೆ ಅಧಿಕ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಜುಲೈ 26ರಿಂದ 29ರವರೆಗೂ ಈ ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ
ಒಡಿಶಾದಲ್ಲಿ ಭಾರೀ ಮಳೆ ಎಚ್ಚರಿಕೆ
ಬಂಗಾಳಕೊಲ್ಲಿಯಲ್ಲಿ ಒತ್ತಡ ಸೃಷ್ಟಿಯಾಗಿದ್ದು, ಇದರ ಪ್ರಭಾವದಿಂದ ಒಡಿಶಾದಲ್ಲಿ ಜುಲೈ 28ರಿಂದ ಹೆಚ್ಚಿನ ಮಳೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ. ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ಒತ್ತಡ ಸೃಷ್ಟಿಯಾಗುವ ಕಾರಣ ಒಡಿಶಾದ ಮೇಲೆ ಪ್ರಭಾವ ಬೀರಲಿದೆ. ಒಡಿಶಾದಲ್ಲಿ ಮಳೆ ಆರ್ಭಟ ಹೆಚ್ಚಲಿದೆ. ಮುಂದಿನ ಮೂರು ದಿನಗಳವರೆಗೂ ಇದರ ಪ್ರಭಾವ ಮುಂದುವರೆಯಲಿದೆ ಎಂದು ತಿಳಿಸಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಕೆ
ಜುಲೈ 27ರಿಂದ ಆರಂಭಗೊಂಡು ಜುಲೈ 31ರವರೆಗೂ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಒತ್ತಡದ ಪ್ರಭಾವದಿಂದ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ಜುಲೈ 31ರ ನಂತರ ತಗ್ಗುವ ಮಳೆ
ಕರಾವಳಿಯೊಂದಿಗೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. ಜುಲೈ 31ರ ನಂತರ ಮಳೆ ಪ್ರಮಾಣ ತಗ್ಗಲಿದೆ ಎಂದು ತಿಳಿದುಬಂದಿದೆ.