ಮತ್ತೊಂದು ಚಂಡಮಾರುತ ಭೀತಿ? ಸುಳಿವು ನೀಡಿದ ಹವಾಮಾನ ಇಲಾಖೆ
ನವದೆಹಲಿ, ಜೂನ್ 8: ಈ ಬಾರಿಯ ಮುಂಗಾರು ಪ್ರವೇಶಕ್ಕೆ ಮುನ್ನ ಭಾರತ ಎರಡು ಬಲಿಷ್ಠ ಚಂಡಮಾರುತಗಳನ್ನು ಎದುರಿಸಿತ್ತು. ಈಗ ಮೂರನೇ ಚಂಡಮಾರುತ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಸುಳಿವನ್ನು ನೀಡಿದೆ. ಜೂನ್ 11ರ ವೇಳೆಗೆ ಮತ್ತೊಂದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶ ನಿರ್ಮಾಣವಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಊಹಿಸಿದೆ.
ಮುಂಗಾರು ಆಗಮನ; ಮಲೆನಾಡು, ಕರಾವಳಿ ಪ್ರದೇಶಗಳಿಗೆ ಮಳೆ ಸೂಚನೆ
ವಾಯುಮಂಡಲದಲ್ಲಿ ಈ ರೀತಿ ಕಡಿಮೆ ಒತ್ತಡದಿಂದಾಗಿ ಚಂಡಮಾರುತಗಳು ಸೃಷ್ಟಿಯಾಗಬಹುದು ಅಥವಾ ಸೃಷ್ಟಿಯಾಗದೆಯೂ ಇರಬಹುದು. ಆದರೆ ಚಂಡಮಾರುತಗಳ ಹುಟ್ಟಿಗೆ ಇದು ಮೊದಲ ಹಂತವಾಗಿರುತ್ತದೆ. ಕಡಿಮೆ ಸಾಂದ್ರತೆಯಿರುವ ಪ್ರದೇಶಕ್ಕೆ ಗಾಳಿ ರಭಸವಾಗಿ ಧಾವಿಸುವುದರಿಂದ ಚಂಡಮಾರುತಕ್ಕೆ ಕಾರಣವಾಗುತ್ತವೆ. ಹೀಗಾಗಿ ಒಂದು ತಿಂಗಳ ಅಂತರದಲ್ಲಿ ಮೂರನೇ ಚಂಡಮಾರುತದ ಭೀತಿ ಈಗ ಭಾರತಕ್ಕೆ ಎದುರಾಗಿದೆ.
ಹವಾಮಾನ ಇಲಾಖೆ ಎಚ್ಚರಿಕೆ
ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಜೂನ್ 11ರ ವೇಳೆಗೆ ನಿರ್ಮಾಣವಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ನೈಋತ್ಯ ಮಾರುತಗಳು ಜೂನ್ 10 ರಿಂದ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಎರಡು ಚಂಡಮಾರುತಗಳ ಅಬ್ಬರ
ಇದಕ್ಕೂ ಮುನ್ನ ಭಾರತದಲ್ಲಿ ತೌಕ್ತೆ ಹಾಗೂ ಯಾಸ್ ಚಂಡಮಾರುತಗಳು ಒಂದು ವಾರದ ಅಂತರದಲ್ಲಿ ಭಾರೀ ಹಾನಿಯನ್ನು ಉಂಟು ಮಾಡಿತ್ತು. ಮೇ 14ರಂದು ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ತೌಕ್ತೆ ಚಂಡಮಾರುತ ಮೇ 19ರಂದು ಭೂ ಪ್ರದೇಶಕ್ಕೆ ಅಪ್ಪಳಿಸಿತ್ತು. ಇದಾದ ಒಂದೇ ವಾರದ ಅಂತರದಲ್ಲಿ ಭಾರತದ ಪೂರ್ವ ಕರಾವಳಿಗೆ ಯಾಸ್ ಚಂಡಮಾರುತ ಅಪ್ಪಳಿಸಿತ್ತು. ಮೇ 23ರಂದು ಬಂಗಾಳಕೊಲ್ಲಿಯಲ್ಲಿ ರೂಪತಾಳಿದ ಯಾಸ್ ಮೇ 28ರಂದು ಭಾರತದ ಕರಾವಳಿಗೆ ಅಪ್ಪಳಿಸಿತ್ತು.
ಗುಜರಾತ್ಗೆ ತೌಕ್ತೆ ಆಘಾತ
ಭಾರತದ ಅರಬ್ಬೀ ಸಮುದ್ರ ತೀರದಲ್ಲಿ ಅಬ್ಬರವೆಬ್ಬಿಸಿದ ತೌಕ್ತೆ ಚಂಡಮಾರುತ ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ ಭಾರೀ ಪ್ರಮಾಣದ ನಷ್ಟವನ್ನುಂಟು ಮಾಡಿತ್ತು. ನೂರಾರು ಜನರು ಈ ಚಂಡಮಾರುತದ ಅಬ್ಬರಕ್ಕೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿಯ ಆಸ್ತಿಪಾಸ್ತಿಗಳು ನಷ್ಟವಾಗಿದೆ.
'ಯಾಸ್'ನಿಂದಲೂ ಅಪಾರ ಹಾನಿ
ಯಾಸ್ ಚಂಡಮಾರುತ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಾಂಡ್ ರಾಜ್ಯಗಳ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರಿತ್ತು. ಲಕ್ಷಾಂತರ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರ ಮಾಡಲಾಯಿತು. ಆದರೆ ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿಗಳು ಹಾನಿಯಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ 20,000 ಕೋಟಿ ರೂಪಾಯಿ ನಷ್ಟವುಂಟಾಗಿದೆ ಎಂದು ಹೇಳಿಕೆಯನ್ನು ನೀಡಿದ್ದರು.