ವೈದ್ಯರ ಮುಷ್ಕರ, ಮಂಗಳವಾರ ದೇಶಾದ್ಯಂತ 'ಒಪಿಡಿ' ಬಂದ್
ನವದೆಹಲಿ, ಜನವರಿ 1: ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶಾದ್ಯಂತ ಮಂಗಳವಾರ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್ಎಂಸಿ) ಮಸೂದೆ ವಿರೋಧಿಸಿ ಈ ಬಂದ್ ಗೆ ಕರೆ ನೀಡಿದೆ.
ಹುಬ್ಬಳ್ಳಿಯಲ್ಲಿ ವೈದ್ಯರ ಮುಷ್ಕರ, ನಾಳೆ ಒಪಿಡಿ ಬಂದ್
ಇದಕ್ಕೂ ಮೊದಲು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಬೇರೆ ಸಂಸ್ಥೆ ಸ್ಥಾಪಿಸಲು ಈ ಮಸೂದೆ ಮಂಡಿಸಲಾಗುತ್ತಿದೆ. ಇದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ ಎಂದಿದ್ದರು. ಈ ಮಸೂದೆಯನ್ನು ಸಂಸತ್ ಸ್ಥಾನೀಯ ಸಮಿತಿಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದಾರೆ.
'ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಪಾರದರ್ಶಕತೆಗಾಗಿ ಬೇರೆಯದೇ ಸಂಸ್ಥೆಯನ್ನು ತೆರೆಯಲು ಕೇಂದ್ರ ಸರಕಾರ ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದೆ. ಈ ಮಸೂದೆ ಪ್ರಕಾರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರು ತಾವು ವೃತ್ತಿ ಆರಂಭಿಸುವ ಮೊದಲು 'ಬ್ರಿಡ್ಜ್ ಕೋರ್ಸ್' ಮಾಡಬೇಕಾಗಿದೆ.
ಈ ಮಸೂದೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲಿದೆ ಎಂದುಕೊಳ್ಳಲಾಗಿದೆ. ಈಗಾಗಲೇ ವೈದ್ಯಕೀಯ ಶಿಕ್ಷಣ ಕ್ಷೇತ್ರ ಭ್ರಷ್ಟಾಚಾರ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂಬ ದೂರಿನ ನಡುವೆ ಈ ಮಸೂದೆಯನ್ನು ಮಂಡಿಸಲಾಗಿದೆ.
ಆದರೆ ಇದು ವೈದ್ಯರ ಕಣ್ಣು ಕೆಂಪಗಾಗಿಸಿದ್ದು ಮಂಗಳವಾರ ಅಂದರೆ ಜನವರಿ 2ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರಗೆ ದೇಶದ ಎಲ್ಲಾ ಹೊರ ರೋಗಿ ವಿಭಾಗಗಳನ್ನು ಬಂದ್ ಮಾಡಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಿರ್ಧರಿಸಿದೆ. ಇದರಿಂದ ದೇಶದಾದ್ಯಂತ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ಪರದಾಡಲಿದ್ದಾರೆ.