ಅಲೋಪತಿ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ: ಷರತ್ತು ವಿಧಿಸಿ ರಾಮ್ದೇವ್ಗೆ ಐಎಂಎ ಆಹ್ವಾನ
ಡೆಹ್ರಾಡೂನ್, ಮೇ 30: ಯೋಗಗುರು ಬಾಬಾ ರಾಮ್ದೇವ್ ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಐಎಂಎ ತಿರುಗೇಟು ನೀಡುವುದನ್ನು ಮುಂದುವರಿಸಿದೆ. ಮಾನನಷ್ಟ ಮೊಕದ್ದಮೆಯ ನೋಟಿಸ್ ಕಳುಹಿಸಿದ ನಂತರ ಈಗ ಐಎಂಎ ಅಲೋಪತಿ ವೈದ್ಯ ಪದ್ದತಿಯ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿದೆ. ಷರತ್ತಿನೊಂದಿಗೆ ಬಾಬಾ ರಾಮ್ದೇವ್ಗೂ ಆಹ್ವಾನ ನೀಡಿದೆ.
ಐಎಂಎ ಉತ್ತರಾಖಂಡದ ಅಧ್ಯಕ್ಷ ಡಾ. ಅಜಯ್ ಖನ್ನಾ ಬಾಬಾ ರಾಮ್ದೇವ್ಗೆ ಪತ್ರವನ್ನು ಬರೆದಿದ್ದಾರೆ. ಇದರಲ್ಲಿ ರಾಮ್ದೇವ್ ನೀಡಿದ ಹೇಳಿಕೆಯನ್ನು ಕಟುವಾದ, ಬೇಜವಾಬ್ಧಾರಿಯುತ ಹಾಗೂ ಸ್ವಾರ್ಥದಿಂದ ಕೂಡಿದ ಹೇಳಿಕೆ ಎಂದು ಕರೆದಿದ್ದಾರೆ. ಈ ಪತ್ರದಲ್ಲಿ ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಬಹಿರಂಗ ಮುಖಾಮುಖಿ ಚರ್ಚೆಗೆ ಪತಂಜಲಿ ಯೋಗಪೀಠದಿಂದ ಅರ್ಹ ಮತ್ತು ಸರಿಯಾಗಿ ನೋಂದಾಯಿತ ಆಯುರ್ವೇದಾಚಾರ್ಯರ ತಂಡವನ್ನು ಕಳುಹಿಸುವಂತೆ ಕೋರಲಾಗಿದೆ.
'ಯಾರಿಗೂ ನನ್ನನ್ನು ಬಂಧಿಸುವ ಧೈರ್ಯವಿಲ್ಲ' - ಐಎಂಎಗೆ ಬಾಬಾ ರಾಮ್ ದೇವ್ ತಿರುಗೇಟು
"ಈಗಾಗಲೇ ಐಎಂಎ ಉತ್ತರಾಖಂಡದಿಂದ ಈಗಾಗಲೇ ರಚನೆಯಾಗಿರುವ ವೈದ್ಯರ ತಂಡದೊಂದಿಗೆ ಚರ್ಚೆಯನ್ನು ನಡೆಸಲು ಪತಂಜಲಿ ಯೋಗಪೀಠದಿಂದ ಅರ್ಹ ಮತ್ತು ನೊಂದಾಯಿತ ಆಯುರ್ವೇದಾಚಾರ್ಯರ ತಂಡವನ್ನು ಕಳುಹಿಸುವಂತೆ ಮನವಿ ಮಾಡುತ್ತೇವೆ. ಈ ಚರ್ಚೆ ಮುಖಾಮುಖಿಯಾಗಿರಲಿ ಮತ್ತು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಆಹ್ವಾನಿಸಿ ಅವರ ಉಪಸ್ಥಿತಿಯಲ್ಲಿ ನಡೆಯಲಿ" ಎಂದು ಪತ್ರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದೆ.
ಆದರೆ ಈ ಚರ್ಚೆಗೆ ಯೋಗಗುರು ಬಾಬಾ ರಾಮ್ದೇವ್ ಹಾಗೂ ಅವರ ಸಹಾಯಕ ಬಾಲಕೃಷ್ಣ ಅವರು ಕೇವಲ ವೀಕ್ಷಕರಾಗಿ ಭಾಗಿಯಾಗುವಂತೆ ಷರತ್ತು ವಿಧಿಸಿದೆ. ಅರ್ಹತೆಗಳ ಬಗ್ಗೆ ಐಎಂಎ ರಾಜ್ಯ ಕಚೇರಿಗೆ ಯಾವುದೇ ದಾಖಲೆಗಳನ್ನು ನೀಡದ ಕಾರಣ ಈ ಷರತ್ತು ವಿಧಿಸಿದೆ. ಇನ್ನು ಈ ಚರ್ಚೆಗೆ ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸಲು ಐಎಂಎ ಬಾಬಾ ರಾಮ್ದೇವ್ಗೆ ಜವಾಬ್ಧಾರಿವಹಿಸಿದ್ದು ಸ್ಥಳವನ್ನು ಐಎಂಎ ಉತ್ತರಾಖಂಡ ನಿರ್ಧರಿಸುತ್ತದೆ ಎಂದಿದೆ.
ಬಾಬಾ ರಾಮ್ದೇವ್ ಕ್ಷಮೆಯಾಚಿಸದಿದ್ದರೆ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಐಎಂಎ
ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಬಾಬಾ ರಾಮ್ದೇವ್ ಆಡಿದ ನಿಂದನಾತ್ಮಕ ಮಾತುಗಳನ್ನು ಖಂಡಿಸಿ ಬುಧವಾರ ಐಎಂಎ ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿತ್ತು. ಈ ಪತ್ರದಲ್ಲಿ ದೇಶದ್ರೋಹದ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಐಎಂಎ ಉತ್ತರಾಖಂಡ ಘಟಕ ಬಹಿರಂಗ ಕ್ಷಮೆಯಾಚನೆಗೆ ಕೋರಿ 1000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ನೋಟಿಸ್ ಕಳುಹಿಸಿತ್ತು.